|
|
ಪ್ರೊ. ಎನ್. ಮನು ಚಕ್ರವರ್ತಿ
|
|
ಲೇಖಕರು ಮತ್ತು ಚಿಂತಕರು
ಬೆಂಗಳೂರು |
ನಕ್ಸಲ್ವಾದದ ಕುರಿತು ಚರ್ಚೆ
ನಡೆಸುವಾಗಲೆಲ್ಲಾ ಒಂದು ಪ್ರಶ್ನೆ ಆಗಾಗ್ಗೆ ತೂರಿ ಬರುತ್ತಿರುತ್ತದೆ .
ನಕ್ಸಲ್ವಾದವನ್ನು ವ್ಯಾಖ್ಯಾನಿಸುವುದಾದರೂ
ಹೇಗೆ ? ಅದೇನು
ಸಾಮಾಜಿಕ ಸಮಸ್ಯೆಯೋ ಅಥವಾ ಕೇವಲ ' ಕಾನೂನು
ಹಾಗೂ ಸುವ್ಯವಸ್ಥೆ ' ಗೆ
ಸಂಬಂಧಿಸಿದ ಸಮಸ್ಯೆಯೋ ?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲು ಈಗ ಎಲ್ಲೆಡೆ
ವ್ಯಾಪಕವಾಗಿ ಬಳಕೆಯಾಗುತ್ತಿರುವ ' ಕಾನೂನು
ಹಾಗೂ ಸುವ್ಯವಸ್ಥೆ '
ಎಂಬ ಶಬ್ದಗಳನ್ನು ಸರಿಯಾಗಿ ಅರಿತುಕೊಳ್ಳದ ಹೊರತು ಸೂಕ್ತ
ಉತ್ತರ ಕಂಡುಕೊಳ್ಳುವುದು ಅಸಾಧ್ಯ . ' ಕಾನೂನು
ಹಾಗೂ ಸುವ್ಯವಸ್ಥೆ '
ಎಂಬ ಶಬ್ದಗಳನ್ನು ಬಳಸಿದಾಗ ಅದು ತನ್ನೊಡನೆ ಅದನ್ನು
ಬಳಸುತ್ತಿರುವ ವ್ಯಕ್ತಿಗಳ ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳನ್ನೂ
ಹೊತ್ತು ತರುತ್ತದೆ .
ಹಾಗಾದರೆ ನಮ್ಮಲ್ಲೀಗ ' ಕಾನೂನು
ಹಾಗೂ ಸುವ್ಯವಸ್ಥೆ ' ಯ
ಪರಿಭಾಷೆಯನ್ನು ಬಳಸುತ್ತಿರುವವರಾದರೂ ಯಾರು ?
ಕೋರ್ಟ್ಗಳಲ್ಲಿ ,
ಪೊಲೀಸ್ ಠಾಣೆಗಳಲ್ಲಿ ,
ಅಧಿಕಾರಶಾಹಿಯ ದರ್ಬಾರ್ನಲ್ಲಿ ಹಾಗೂ ಸ್ವಲ್ಪ
ಮಟ್ಟಿಗೆ , ಮಧ್ಯಮ
ವರ್ಗದ ಚಾವಡಿಗಳಲ್ಲಿ ಈ ಪದಗಳ ಬಳಕೆ ವ್ಯಾಪಕವಾಗಿ ಆಗುತ್ತಿರುತ್ತದೆ .
ಅದರಲ್ಲೂ ಅಸಮಾನತೆಯ ಬುನಾದಿಯ ಮೇಲೆಯೇ ತನ್ನ
ಸುಖದ ಸೌಧ ಕಟ್ಟಿಕೊಂಡಿರುವ ನಮ್ಮ ಇಂದಿನ ಸಮಾಜದಲ್ಲಿ ಸ್ಥಾಪಿತ ಶಕ್ತಿಗಳ
ಹಿತಾಸಕ್ತಿಗಳ ರಕ್ಷಣೆಗೇ ಇಂಥ ಪದಗಳು ಹೆಚ್ಚು ಬಳಕೆಯಾಗುವುದಿದೆ .
ಇಂಥ ಪ್ರಶ್ನೆಗಳ ಜಾಡನ್ನು ಅರಸುತ್ತಾ ಹೊರಟರೆ
' ಕಾನೂನು ಹಾಗೂ
ಸುವ್ಯವಸ್ಥೆ '
ಎಂಬುದು ನಮ್ಮ ಸಮಾಜದ ಮನಸ್ಥಿತಿಯಲ್ಲಿಯೇ ಅಂತರ್ಗತವಾಗಿರುವ ಒಂದು ಬಗೆಯ
' ಶ್ರೇಣಿ ವ್ಯವಸ್ಥೆ ' ಯ
ಪ್ರಾತಿನಿಧಿಕ ಶಬ್ದಗಳೆಂಬಂತೆ ಭಾಸವಾಗುತ್ತದೆ .
ಅಷ್ಟಕ್ಕೂ ನಾವು ' ಕಾನೂನು
ಹಾಗೂ ಸುವ್ಯವಸ್ಥೆ '
ಎಂಬ ಶಬ್ದಗಳನ್ನು ' ನ್ಯಾಯ
ಹಾಗೂ ಸಮಾನತೆ '
ಎಂಬರ್ಥದಲ್ಲಿ ಅರ್ಥೈಸಿಕೊಳ್ಳುವ ಮಟ್ಟಿಗಾದರೂ ವಾತಾವರಣವನ್ನು
ಹದಗೊಳಿಸಿದ್ದೇವೆಯೇ ? ' ಕಾನೂನು
ಹಾಗೂ ಸುವ್ಯವಸ್ಥೆ '
ಎಂಬ ಶಬ್ದಗಳನ್ನು ' ಸಾಮಾಜಿಕ
ನ್ಯಾಯ ಹಾಗೂ ಸಮಾನತೆ '
ಎಂದು ಅರ್ಥೈಸಿಕೊಳ್ಳುವುದರಲ್ಲಿ ವಿಫಲವಾದ ಕ್ಷಣದಲ್ಲಿಯೇ
ನಾವು " ನಕ್ಸಲ್ವಾದ
ಒಂದು ಯಃಕಶ್ಚಿತ್ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ "
ಎಂದು ತೀರ್ಪು ನೀಡುವ ನೈತಿಕ ಹಕ್ಕನ್ನೂ
ಕಳೆದುಕೊಳ್ಳುತ್ತೇವೆ .
ನನ್ನ ಪ್ರಕಾರ
' ನಕ್ಸಲ್ವಾದ '
ನಮ್ಮ ವ್ಯವಸ್ಥೆಯ ಸಂವೈಧಾನಿಕ ಹಾಗೂ ನ್ಯಾಯ
ವ್ಯವಸ್ಥೆಯ ಸೋಲಿನ ಫಲ .
ಸಮಾಜದ ಮುಖ್ಯವಾಹಿನಿಯಿಂದ ಹೊರತಾಗಿ ಧ್ವನಿ ಕಳೆದುಕೊಂಡ
ಹತಾಶೆಯಲ್ಲಿ ಬದುಕುವ ಜನಸಾಮಾನ್ಯರ ಆಶೋತ್ತರಗಳನ್ನು ಹಾಗೂ ಅವರ ಸಂವೈಧಾನಿಕ
ಅವಶ್ಯಕತೆಗಳನ್ನು ಈಡೇರಿಸುವಲ್ಲಿ ವಿಫಲವಾಗುವ ವ್ಯವಸ್ಥೆಯೊಂದರ ಕೂಸು ಈ
' ನಕ್ಸಲ್ವಾದ '.
ಇದನ್ನು ಕೆಲವೊಮ್ಮೆ
' ಪಿಡುಗು '
ಎಂದು ಕರೆಯುತ್ತಾರಾದರೂ ಅದನ್ನು ಸಾಮಾಜಿಕವಾಗಿ
ಪರಿತ್ಯಕ್ತವಾದ ಸಮುದಾಯವೊಂದರ ಹತಾಶ ಅಭಿವ್ಯಕ್ತಿ ಎಂದು ಅರ್ಥೈಸಿಕೊಳ್ಳಲು
ನಾನು ಬಯಸುತ್ತೇನೆ .
ಅಂದರೆ ಸಂವಿಧಾನ ಒದಗಿಸುವ ಮೂಲಭೂತ ಹಕ್ಕುಗಳಿಂದ
ವಂಚಿತವಾದ ಮುಗ್ಧ ಸಮುದಾಯವೊಂದು ತನ್ನ ಅಳಲಿನ ಅಭಿವ್ಯಕ್ತಿಗೆ ಶಸ್ತ್ರದ
ಮೊರೆ ಹೋಗುವ ಸನ್ನಿವೇಶವನ್ನು ನಾವೇ ಸೃಷ್ಟಿಸಿದ್ದೇವೆ .
ನಮ್ಮ ವರ್ತಮಾನಕ್ಕೆ ಎಂಥ ಕ್ರ್ರೌರ್ಯವನ್ನು
ಆರೋಪಿಸಿದ್ದೇವೆಂದರೆ ನಮ್ಮದೇ ಸಮಾಜದ ಕೆಲವು ಸಮುದಾಯಗಳಿಗೆ ಹಿಂಸೆಯನ್ನು
ಅವಲಂಭಿಸುವುದಲ್ಲದೇ ಬೇರೆ ಆಯ್ಕೆಗಳೇ ಇಲ್ಲದಂತಾಗಿ ಹೋಗಿದೆ .
ಹಾಗೆಂದ ಮಾತ್ರಕ್ಕೆ ,
ಸಮಾಜದಲ್ಲಿ ವ್ಯಾಪಕವಾಗುತ್ತಿರುವ
ಅಸಮಾನತೆಯನ್ನು ಹೋಗಲಾಡಿಸಲು ನಕ್ಸಲ್ವಾದದಂಥ ಪ್ರತಿಗಾಮಿ ಹೆಜ್ಜೆ
ಅನಿವಾರ್ಯವೇ ?
ಖಂಡಿತ ಅಲ್ಲ .
ರಕ್ತಕ್ರಾಂತಿ ಮಾಡುವ ಮೂಲಕ ತಮ್ಮ
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದು
ಅವರ ಮೂರ್ಖತನವಷ್ಟೇ .
ರಕ್ತ ಹಾಗೂ ಮಾಂಸದ ಬುನಾದಿಯ ಮೇಲೆ ಸುಖಿ ಸಾಮ್ರಾಜ್ಯ
ಕಟ್ಟಲು ಸಾಧ್ಯವೇ ಇಲ್ಲ .
ಹಿಂಸೆಯನ್ನು ಬಳಸಿಕೊಂಡು ಸ್ಥಾಪನೆಯಾದ ಸಾಮ್ರಾಜ್ಯಕ್ಕೆ
ಹಿಂಸೆಯನ್ನೇ ಸೇವಿಸಿ ಬದುಕುವ ಅನಿವಾರ್ಯತೆ ಇರುತ್ತದೆ .
ಆಳುವ ವರ್ಗದ ನಿಷ್ಕರುಣೆ ಹಾಗೂ ಅಮಾನವೀಯತೆಯ
ಫಲವಾಗಿಯೇ ನಕ್ಸಲ್ವಾದ ಸೃಷ್ಟಿಯಾಗಿದೆ ಎಂಬುದನ್ನು ಒಪ್ಪಿಕೊಂಡಂತೆ
ನಕ್ಸಲ್ವಾದ ಅಪ್ಪಿಕೊಂಡಿರುವ ಹಿಂಸೆಯನ್ನೂ ವಿರೋಧಿಸುವ ಸಮಚಿತ್ತತೆ
ನಮ್ಮದಾಗಿರಬೇಕು .
ನಕ್ಸಲರ ಇಂಥ ರಕ್ತದಾಹಿ ಕ್ರಾಂತಿ ಮತ್ತೊಂದು ರಕ್ತದಾಹಿ ಸಾಮ್ರಾಜ್ಯವನ್ನು
ನಿರ್ಮಾಣ ಮಾಡುತ್ತದೆಯಷ್ಟೇ .
ಬೇಕಾದರೆ ಜಗತ್ತಿನ ಇತಿಹಾಸದಲ್ಲಿ ಆಗಿ ಹೋದ ರಷ್ಯನ್
ಕ್ರಾಂತಿ , ಚೀನಾ
ಕ್ರಾಂತಿಗಳ ಪುಟಗಳನ್ನೊಮ್ಮೆ ತಿರುವಿ ಹಾಕಿ ಕೈಗೆ ನೆತ್ತರು
ಅಂಟಿಕೊಳ್ಳದಿದ್ದರೆ ಕೇಳಿ .
ಆಳುವ ವರ್ಗದ ಹಿಂಸಾಚಾರವನ್ನು ತಹಬದಿಗೆ ತರದೇ
ನಕ್ಸಲ್ ರೀತಿಯ ಪ್ರತಿಗಾಮಿತನವನ್ನು ಮಟ್ಟ ಹಾಕುವುದು ಅಸಾಧ್ಯ .
ನಕ್ಸಲ್ವಾದದ ಹುಟ್ಟಿಗೆ ಆಳುವ ವರ್ಗದ
ಹಿಂಸಾಚಾರ ಎಷ್ಟು ಮಹತ್ವದ ಕೊಡುಗೆ ಸಲ್ಲಿಸಿದೆಯೋ ಮಧ್ಯಮ ವರ್ಗದ ಸೋಗಲಾಡಿತನ
ಕೂಡ ಅಷ್ಟೇ ಕೊಡುಗೆ ಸಲ್ಲಿಸಿದೆ .
ಸಮಾಜದ ಇನ್ನಿತರ ವರ್ಗಗಳ ಬಲಿಕೊಟ್ಟು ತನ್ನ ಸುಖ
ಕಂಡುಕೊಳ್ಳುವ ಮಧ್ಯಮ ವರ್ಗ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ .
ಕೇವಲ ನಕ್ಸಲರನ್ನು ದೂರಿದರೆ ಸಮಸ್ಯೆಗೆ ಪರಿಹಾರ
ದೊರೆಯುವುದಿಲ್ಲ .
ನಮ್ಮದೇ ನಡುವಿನ ವ್ಯಕ್ತಿಗಳು ನಕ್ಸಲರಾಗಿ ಬಂದೂಕು ಹಿಡಿಯುತ್ತಾರೆಂದರೆ
ಅದಕ್ಕೆ ಪ್ರೇರಣೆಯಾಗುವ ಸಾಮಾಜಿಕ ಕಾರಣಗಳನ್ನು ಅರ್ಥ ಮಾಡಿಕೊಳ್ಳುವ
ವ್ಯವಧಾನವನ್ನು ಒಂದು ಸಮಾಜವಾಗಿ ನಾವು ಬೆಳೆಸಿಕೊಳ್ಳಬೇಕಿದೆ .
ಬಂದೂಕು ಹಿಡಿದು ಕಾಡಿಗೆ ನಡೆದು ಹೋಗುವ ಆ
ಹುಡುಗರ ಮನದ ತುಮುಲಗಳನ್ನು ಅರ್ಥ ಮಾಡಿಕೊಳ್ಳಲು ನಾವೆಂದಾದರೂ
ಪ್ರಯತ್ನಿಸಿದ್ದೇವೆಯೇ ?
ಅಥವಾ ನಕ್ಸಲರನ್ನು ದೂರುವಷ್ಟೇ ಆಸ್ಥೆಯಿಂದ ಸಕಲ
ಸಮುದಾಯವನ್ನೂ ಒಳಗೊಳ್ಳುವ ರಾಜಕೀಯ ಪರ್ಯಾಯವೊಂದನ್ನು ಹುಟ್ಟುಹಾಕಲು
ಮುಂದಾಗಿದ್ದೇವೆಯೇ ?
ಆ ' ಲೋಕನಿಂದಿತ ' ರ
ನೋವಿಗೆ ಮಿಡಿಯುವ ಬದಲು ಅವರ ನಿರ್ಧಾರವನ್ನು ಟೀಕಿಸುತ್ತಾ ಕೂರುವುದರಲ್ಲಿ
ಯಾವ ಪುರಷಾರ್ಥ ಸಾಧನೆಯಾಗುತ್ತದೆ ?
ನಕ್ಸಲ್ವಾದವನ್ನು ಕ್ಯಾನ್ಸ್ರ್ ಎಂದಾದರೂ ಕರೆಯಿರಿ ,
ರೇಬಿಸ್ ಎಂದಾದರೂ ಕರೆಯಿರಿ .
ಹಾಗೆಂದು ಕರೆದ ಮಾತ್ರಕ್ಕೆ
' ಕ್ಯಾನ್ಸರ್ ' ಗೆ
ಕಾರಣವಾಗುವ ಸಾಮಾಜಿಕ ಸನ್ನಿವೇಶಗಳಿಗೆ ಮದ್ದು ಹುಡುಕಿದಂತಾದೀತೇ ?
ಸೈನಿಕರನ್ನು ,
ಬಂದೂಕುಗಳನ್ನು ಬಳಸಿಕೊಂಡು ನಕ್ಸಲ್ವಾದಕ್ಕೆ ಉತ್ತರ
ಹುಡುಕುತ್ತಿರುವ ಪಿ . ಚಿದಂಬರಂ
ಅವರಿಗೆ ಇತಿಹಾಸ ಪ್ರಜ್ಞೆ ಇದ್ದಂತಿಲ್ಲ .
ತೆಲಂಗಾಣದಂಥ ಸಮಸ್ಯೆಗೆ ರಾತ್ರೋ ರಾತ್ರಿ
ನಿದ್ದೆಗೆಟ್ಟು ಪರಿಹಾರ ಕಂಡು ಹಿಡಿಯುವಾಗ ಇರುವ ವ್ಯವಧಾನ ಇದೇ
ರಾಜಕಾರಣಿಗಳಿಗೆ ನಕ್ಸಲ್ವಾದದ ಕುರಿತು ವಿಚಾರ ಮಾಡುವಾಗ ಇರುವುದಿಲ್ಲ .
ಮನುಷ್ಯನ ಇತಿಹಾಸವನ್ನೊಮ್ಮೆ ನೋಡಿ ಸೈನಿಕರು ,
ಬಂದೂಕುಗಳಿಂದ ಒಂದೇ ಒಂದು ಸಭ್ಯ ಸಂಸ್ಕೃತಿಯೂ
ಈವರೆಗೆ ಜನ್ಮ ತಳೆದಿಲ್ಲ . ' ಆಪರೇಷನ್
ಗ್ರೀನ್ ಹಂಟ್ '
ಹೆಸರಿನಲ್ಲಿ ಮುಗ್ಧ ಬುಡಕಟ್ಟು ಸಮುದಾಯಗಳನ್ನು ಅವುಗಳ ಸಾಂಸ್ಕೃತಿಕ ಬೇರುಗಳ
ಸಮೇತ ನಾಶಗೊಳಿಸಲಾಗುತ್ತಿದೆ .
ಇಂಥ ಚಿದಂಬರಂ ರೀತಿಯ ಮನಸ್ಥಿತಿಯ ವ್ಯಕ್ತಿಗಳಿಂದಾಗಿಯೇ
ಈಶಾನ್ಯ ಭಾರತ ಇಂದು ರಕ್ತ ಸಿಕ್ತವಾಗಿದೆ .
ಬಂದೂಕು ,
ಬಾಂಬ್ಗಳಿಂದ ಅವರೇನು ಮಿಲಿಟರಿ ರಾಜ್ಯವನ್ನು
ಕಟ್ಟಬೇಕೆಂದಿದ್ದಾರೆಯೇ ?
ಕಟ್ಟುವ ಇರಾದೆ ಅವರಿಗಿರಬಹುದೇನೋ .
ಆದರೆ ನಮಗೆ ಬೇಕಿರುವುದು ಪ್ರಜಾಪ್ರಭುತ್ವವಾದಿ
ರಾಜ್ಯ . ಆರೋಗ್ಯವಂತ
ಮನಸ್ಥಿತಿಯ ಪ್ರತಿಯೊಬ್ಬ ವ್ಯಕ್ತಿಯ ಕಾಳಜಿಯೂ ಅದೇ .
ಟಿಎಸ್ಐ
ನಿರೂಪಣೆ : ಕೆ . ಆರ್ . ಅರುಣ
ಕುಮಾರ |