ಸೈಫ್-ಕರೀನಾ ಅಸಮಾಧಾನ!
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್
ಎಂದಿಗೂ ತಮ್ಮ ನಡುವಿನ ಸಂಬಂಧವನ್ನು ಮುಚ್ಚಿಟ್ಟವರಲ್ಲ. ಸಣ್ಣ ಸಣ್ಣ
ವಿಷಯಗಳನ್ನೂ ಮಾಧ್ಯಮದೊಡನೆ ಹಂಚಿಕೊಂಡು ರಾಜಾರೋಷವಾಗಿ ತಿರುಗಾಡಿದ ಜೋಡಿ
ಇದು. ಆದರೆ ಇತ್ತೀಚೆಗೆ ಪತ್ರಿಕೆಯೊಂದು ಅವರಿಬ್ಬರ ರಹಸ್ಯ ಮದುವೆ
ಸುದ್ದಿಯನ್ನು ಪ್ರಕಟಿಸಿರುವುದನ್ನು ಕಂಡು ಈ ಜೋಡಿ ಅಸಮಾಧಾನಗೊಂಡಿದೆ.
ಇವರಿಬ್ಬರು ಪರಸ್ಪರರ ಮನೆಯಲ್ಲೂ ಹೇಳದೆ ಮೌಲ್ವಿ ಸಮ್ಮುಖದಲ್ಲಿ
ವಿವಾಹವಾಗಿದ್ದಾರೆ ಎಂದು ಪತ್ರಿಕೆ ಹೇಳಿದೆ. ಆದರೆ ಈ ಸುದ್ದಿಯನ್ನು ಸಾರಾ
ಸಗಟಾಗಿ ತಳ್ಳಿ ಹಾಕಿದ ಸೈಫ್-ಕರೀನಾ ಮುಂದಿನ ಐದು ವರ್ಷಗಳವರೆಗೆ ಮದುವೆ
ಪ್ರಸ್ತಾಪವಿಲ್ಲ ಎಂದಿದ್ದಾರೆ.
ಮತ್ತೆ ಬಣ್ಣ ಹಚ್ಚಿದ ರಕ್ಷಿತಾ
ರಕ್ಷಿತಾ ಮತ್ತೆ ಬಣ್ಣ ಹಚ್ಚುತ್ತಿದ್ದಾಳೆ.
ಆದರೆ ಈ ಬಾರಿ ಹಿರಿತೆರೆಗಲ್ಲ,
ಕಿರುತೆರೆಗೆ! ಹೌದು,
ರಕ್ಷಿತಾ ಟಿವಿಯಲ್ಲಿ ಕಂಕಣ ಬಲ
ಕೂಡಿಸಲಿದ್ದಾರೆ. ಟಿವಿ ವಾಹಿನಿಯೊಂದರ 'ಸ್ವಯಂವರ'
ಕಾರ್ಯಕ್ರಮಕ್ಕೆ ನಿರೂಪಕಿ ರಕ್ಷಿತಾ. ಬಹಳ ಕಾಲದ ನಂತರ ಮತ್ತೆ ಬಣ್ಣ ಹಚ್ಚುವ
ಪ್ರಸಂಗ ರಕ್ಷಿತಾಗೆ ಹೊಸ ಉಮೇದನ್ನು ಕೊಟ್ಟಿರುವುದೇನೋ ನಿಜ. ಜೊತೆಯಲ್ಲೇ
ವಿಭಿನ್ನವಾದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಬಗ್ಗೆ ರಕ್ಷಿತಾ ಖುಷಿ
ಪಡುತ್ತಿದ್ದಾರೆ. ಈವರೆಗೆ ಯಾವ ನಟಿಗೂ ಸಿಗದಂಥ ಬರೋಬ್ಬರಿ ಸಂಭಾವನೆಯನ್ನೂ
ಆಕೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ಗುಡ್ಲಕ್!
ಸೋನಂಗೆ ಖುಷಿ
ಸಿಗುವುದೇ?
ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಕೇಶ್
ಓಂಪ್ರಕಾಶ್ ಮೆಹ್ರಾರಂಥ ಘಟಾನುಘಟಿ ನಿರ್ದೇಶಕರ ಚಿತ್ರಗಳಲ್ಲಿ ನಟಿಸಿಯೂ
ಸೋನಂ ಕಪೂರ್ಗೆ ಯಶಸ್ಸು ನಿಲುಕದ ನಕ್ಷತ್ರವಾಗಿದೆ. ಈ ಮುನ್ನ ಗಂಭೀರ
ಸಿನಿಮಾಗಳಲ್ಲೇ ಕಾಣಿಸಿಕೊಂಡಿರುವ ಸೋನಂ ಕಪೂರ್ ಇದೀಗ ಅನೀಸ್ ಬಜ್ಮೀ ಅವರ
ಹಾಸ್ಯಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅಕ್ಷಯ್ ಕುಮಾರ್ ನಾಯಕ ನಟರಾಗಿರುವ
'ಥ್ಯಾಂಕ್ಯೂ'
ಸಿನಿಮಾ ಸೋನಂಳ ಗೆಲುವಿನ ಖಾತೆಗೆ ನಾಂದಿ ಹಾಡಲಿದೆಯೇ ಎಂದು ಕಾದು
ನೋಡಬೇಕಿದೆ. ಸೋನಂ ಈ ಹಿಂದೆ ಹಲವು ಖ್ಯಾತ ನಿರ್ದೇಶಕರ ಜೊತೆ
ಕಾರ್ಯನಿರ್ವಹಿಸಿದ್ದರೂ ಬಾಕ್ಸ್ ಆಫೀಸ್ ಯಶಸ್ಸು ಮಾತ್ರ ಆಕೆಗೆ
ಮರೀಚಿಕೆಯಾಗಿಯೇ ಉಳಿದಿದೆ. ಈ ಚಿತ್ರದಲ್ಲಾದರೂ ಸೋನಂ ಗೆಲುವಿನ ನಗೆ ಬೀರಲಿ. 
ಅಂತಿಮ ಅಭಿನಯ
ಆಪ್ತರಕ್ಷಕ ಚಿತ್ರದಲ್ಲಿ ವಿಷ್ಣುವರ್ಧನ್
ಅಭಿನಯ ಎಲ್ಲರ ಮನಸೂರೆಗೊಂಡಿದೆ. ಚೆನ್ನೈನಲ್ಲಿ ಚಿತ್ರದ ಪ್ರೀಮಿಯರ್ ಶೋ
ನೋಡಿದವರ ಕಣ್ಗಳು ತುಂಬಿ ಬಂದಿದ್ದವಂತೆ. ರಾಮ್ಕುಮಾರ್ ಅವರಂತೂ ಅಳು
ತಡೆಯಲಾಗದೆ ಹೊರಗೆ ಬಂದವರೇ ನೇರವಾಗಿ ನಟಿ ಭಾರತಿ ಅವರಿಗೆ ಕರೆ ಮಾಡಿ ದುಗುಡ
ತೋಡಿಕೊಂಡರು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಮೂರು ವಿಭಿನ್ನ
ಶೈಲಿಯಲ್ಲಿ ಸಂಭಾಷಣೆ ಹೇಳಿರುವುದು ವಿಶೇಷ. ಮನಶಾಸ್ತ್ರಕ್ಕೆ ಸಂಬಂಧಪಟ್ಟ
ಚಿತ್ರದಲ್ಲಿ ವಿಷ್ಣು ತಮ್ಮ ಅಭಿಮಾನಿಗಳಿಗೆ ವಿಭಿನ್ನ ನಟನೆಯ ರಸದೌತಣ
ನೀಡಿದ್ದಾರೆ.
ಎನ್.ಕೆ. ಸುಪ್ರಭಾ ಮತ್ತು ಆಕೃತಿ ಭಾರದ್ವಾಜ್