User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಹ್ಯಾಟ್ಸ್ ಆಫ್ ಶಾರುಖ್ ಖಾನ್! ಮುಂಬೈ ಗೂಂಡಾಗಿರಿಗೆ ಅಂತ್ಯ ಹೇಳಿ, ಕೇಂದ್ರಾಡಳಿತ ಪ್ರದೇಶವಾಗಿಸಿ
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ಶಾರುಖ್ ಖಾನ್ ನೀವು ನಿಜಕ್ಕೂ ಶ್ರೇಷ್ಠರು! ಕೇವಲ ನೀವೊಬ್ಬ ಬಾಲಿವುಡ್ನ ಮಹಾನ್ ತಾರೆ ಎಂಬ ಹಿನ್ನೆಲೆಯಲ್ಲಿ ಈ ಮಾತು ಹೇಳುತ್ತಿಲ್ಲ, ಬದಲಾಗಿ ತರ್ಕಬದ್ಧ ಮನಸ್ಸುಳ್ಳ ನೀವು ನಿಮ್ಮ ನಿಲುವಿಗೆ ಬದ್ಧರಾಗಿ ನಿಂತಿದ್ದಕ್ಕೆ ಈ ಮಾತು ಹೇಳುತ್ತಿದ್ದೇನೆ. ಈಗ ಇಡೀ ದೇಶವೇ ನಿಮ್ಮ ಹಿಂದೆ ನಿಂತಿದೆ, ನನ್ನ ಪ್ರಕಾರ ನಿಮ್ಮಂತೆ ಯಾವುದೇ ಬೆದರಿಕೆಗೆ ತಲೆತಗ್ಗಿಸದೇ ಇದು ಸತ್ಯ, ನಾನು ನನ್ನದಲ್ಲದ ತಪ್ಪಿಗೆ ತಲೆತಗ್ಗಿಸುವುದಿಲ್ಲ ಎಂದು ದೃಢವಾಗಿ ಹೇಳುವ ಗಟ್ಟಿ ಮನುಷ್ಯರ ಅಗತ್ಯ ನಮ್ಮ ದೇಶಕ್ಕಿತ್ತು. ಈ ಸಂಪಾದಕೀಯ ಬರೆಯುವುದಕ್ಕಿಂತ ಕೆಲವೇ ನಿಮಿಷಗಳ ಮೊದಲು, ನಾನು ಎನ್ಡಿಟಿವಿ 24/7 ಟೆಲಿವಿಷನ್ ವಾಹಿನಿಯಲ್ಲಿ 'ಶಿವಸೇನೆ ಮುಂಬೈನ ನಿಜವಾದ ಶಕ್ತಿಯೇ?' ಎಂಬ ವಿಷಯವನ್ನು ಆಧರಿಸಿದ ಚರ್ಚೆಯಲ್ಲಿ ಭಾಗವಹಿಸಿ ಬಂದಿದ್ದೆ. ದುರಂತವೆಂದರೆ, ಶಿವಸೇನೆಯ ಪರವಾಗಿ ಅದರ ನಾಯಕ ಉದ್ಧವ್ ಠಾಕ್ರೆ ಯಾವುದೇ ಸೈದ್ಧಾಂತಿಕ ನಿಲುವಿಗೆ ಬದ್ಧವಾಗದ ಒಣ ಚರ್ಚೆ ಮಾಡಿದರು.

"ಮುಂಬೈನ ಜನಸಾಮಾನ್ಯರನ್ನು ಕೇಳಿ. ನಾವೆಂದಾದರೂ ಅವರ ಮೇಲೆ ದಾಳಿ ಮಾಡಿದ್ದೇವೆಯೇ?" ಎನ್ನುವುದು ಅವರ ಪ್ರಶ್ನೆಯಾಗಿತ್ತು. ಖಂಡಿತ ಶಿವಸೇನೆಯವರು ಆ ಕೆಲಸ ಮಾಡಿಲ್ಲ. ಹಾಗಿದ್ದ ಮೇಲೆ ಈಗ ಅಂತಹ ದಾಳಿ ಮಾಡುವ ಅಗತ್ಯವೇನಿದೆ? "ಅನಗತ್ಯವಾಗಿ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಬದಲು ಪ್ರತಿಯೊಬ್ಬರು ಅವರವರ ಕೆಲಸ ಮಾಡಿಕೊಂಡು ಸುಮ್ಮನಿರಬೇಕು" ಎನ್ನುವುದು ಠಾಕ್ರೆ ವಾದವಾಗಿತ್ತು. ಇದರರ್ಥ ಶಾರುಖ್ ಖಾನ್ ಬಾಯ್ಮುಚ್ಚಿಕೊಂಡಿರಬೇಕಿತ್ತು ಎಂದು. ಇದಕ್ಕಿಂತ ದೊಡ್ಡ ತಮಾಷೆ ಬೇರೊಂದಿದೆಯೇ!? ನಾವು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಬದುಕುತ್ತಿದ್ದೇವೆಯೇ ಎಂಬ ಬಗ್ಗೆ ನನಗೇಕೊ ಅನುಮಾನವಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಮಾತನಾಡುವುದು ಕೂಡ ತಪ್ಪಾದರೆ, ಯಾರು ಏನು ಮಾಡಲು ಸಾಧ್ಯ? ಇನ್ನು ಗುಲ್ ಪನಾಗ್ ಅವರಂತಹ ವ್ಯಕ್ತಿಗಳು ಕೂಡ ನಮ್ಮ ನಡುವೆ ಇದ್ದಾರೆ. "ಶಿವಸೇನೆಗೆ ಜನಬೆಂಬಲ ಇದೆ" ಎಂದು ಬೆಣ್ಣೆ ಹಚ್ಚಲು ಹೊರಟಿದ್ದರು ಅವರು. ಜನಬೆಂಬಲ ಎಂದರೆ ಗೂಂಡಾಗಿರಿಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅನರಕ್ಷರಸ್ಥರೇ ತುಂಬಿಕೊಂಡಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಇಂತಹ ಹಲವು ತರ್ಕಹೀನರಿಗೆ ಜನಬೆಂಬಲ ದೊರಕಿಬಿಡುತ್ತದೆ. ಆದರೆ, ತರ್ಕಹೀನರನ್ನು ಸರಿಯಾದ ದಾರಿಯಲ್ಲಿ ಹೋಗುವಂತೆ ಪ್ರೇರೇಪಿಸುವುದು ಉಳಿದವರ ಕರ್ತವ್ಯ.

ಇನ್ನೂ ಹಲವರು ಹಾವೂ ಸಾಯಬಾರದು, ಕೋಲು ಮುರಿಯಬಾರದು... ಎಂಬ ತತ್ವಕ್ಕೆ ಬದ್ಧರಾಗಿ ಚರ್ಚೆ ನಡೆಸುತ್ತಿದ್ದರು. ಯಾವುದೇ ತರ್ಕಬದ್ಧವಲ್ಲದ ಗೂಂಡಾಗಿರಿಯ ವಿರುದ್ಧ ಒಬ್ಬ ವ್ಯಕ್ತಿ ತಲೆಯೆತ್ತಿ ನಿಂತುಕೊಂಡಿದ್ದಾರೆ. ಕನಿಷ್ಠ ಅವರಿಗೆ ಬೆಂಬಲವಾಗಿ ನಿಲ್ಲಲು ಕೂಡ, ಆತನ ಪರವಾಗಿ ನೇರವಾಗಿ ಮಾತನಾಡುವ ಶಕ್ತಿ ಕೂಡ ಇವರಿಗಿಲ್ಲವಲ್ಲ ಎಂದು ಬೇಸರವಾಗುತ್ತದೆ. ದುರಂತವೆಂದರೆ ಇಡೀ ಬಾಲಿವುಡ್ ಈ ವಿಷಯಕ್ಕೆ ಸಂಬಂಧಿಸಿದಂತೆ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿರುವುದು. ಇದು ನಿಜಕ್ಕೂ ಅತ್ಯಂತ ದುಖಃಕರ ವಿಷಯ. ಈ ಸನ್ನಿವೇಶವನ್ನು ಅವಲೋಕಿಸಿದಾಗ, ಮುಂಬೈನಲ್ಲಿ ಶಿವಸೇನೆಯೇ ಅತ್ಯಂತ ಪ್ರಬಲವಾದ ಮಹಾನ್ ಶಕ್ತಿ ಎಂಬ ಭಾವನೆಯನ್ನು ಇವರೆಲ್ಲ ಸೇರಿಕೊಂಡು ಹುಟ್ಟಿಸುತ್ತಿದ್ದಾರೆ. ಆದರೆ, ವಾಸ್ತವ ಅದಲ್ಲ. ನಿಜವಾದ ಶಕ್ತಿ ಅಡಗಿರುವುದು ಸರ್ಕಾರ ಹಾಗೂ ಬುದ್ಧಿ ಜೀವಿಗಳ ಕೈಯಲ್ಲಿ. ದುರದೃಷ್ಟಕರ ವಿಷಯವೆಂದರೆ ನಮ್ಮ ದೇಶದಲ್ಲಿನ ಬುದ್ಧಿ ಜೀವಿಗಳು ಅವರ ಜವಾಬ್ದಾರಿಯನ್ನು ಸಮರ್ಥವಾಗಿ ಹೊತ್ತುಕೊಳ್ಳಲು ಮುಂದೆ ಬರುತ್ತಿಲ್ಲ. ಹೆಚ್ಚಿನೆಲ್ಲರೂ ಅವರವರ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದರಲ್ಲಿಯೇ ಸಮಯ ವ್ಯಯ ಮಾಡುತ್ತಿದ್ದಾರೆ. ಕೇವಲ ಬಾಲಿವುಡ್ ಮಾತ್ರವಲ್ಲ, ಮಹಾರಾಷ್ಟ್ರ ಸರ್ಕಾರ ಕೂಡ ತನ್ನ ಶಕ್ತಿ ಏನು ಎನ್ನುವುದನ್ನು ಶಿವಸೇನೆ ಮತ್ತು ಅದರ ನಾಯಕರಿಗೆ ತೋರಲೇಬೇಕಾದ ಕಾಲ ಸನ್ನಿಹಿತವಾಗಿದೆ. ಸ್ವತಃ ರಾಹುಲ್ ಗಾಂಧಿ ಅವರ ಬೆಂಬಲ ಇರುವ ಕಾರಣ, ಮಹಾರಾಷ್ಟ್ರ ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯ ಪ್ರವೃತ್ತವಾಗಬಹುದು ಎಂದುಕೊಂಡಿದ್ದೇನೆ. ನಾನು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹಾಕಲು ಇಚ್ಛಿಸುತ್ತೇನೆ.

ಮೂಲತಃ 'ಮರಾಠಿ ಮಾನುಸ್' ಎಂಬ ಸಿದ್ಧಾಂತವನ್ನೇ ನಾನು ಪ್ರಶ್ನಿಸುತ್ತೇನೆ. ಭಾರತ ಪ್ರಜಾಪ್ರಭುತ್ವದ ಆಧಾರದ ಮೇಲೆ ನಿಂತಿದೆ ಎನ್ನುವುದು ಇದಕ್ಕೆ ಒಂದು ಕಾರಣ. ಅದರೊಂದಿಗೆ ಕೆಲವು ಐತಿಹಾಸಿಕ ಸತ್ಯಗಳ ಮೇಲೆ ಕೂಡ ಬೆಳಕು ಚೆಲ್ಲಬೇಕಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಪ್ರತ್ಯೇಕವಾಗುವವರೆಗೆ ಅಂದರೆ 1960ರವರೆಗೆ ಬಾಂಬೆ ಬೇರೆಯದೇ ಅಸ್ತಿತ್ವ ಹೊಂದಿತ್ತು. ಗುಜರಾತಿ ಹಾಗೂ ಪಾರ್ಸಿ ಜನಾಂಗ ಆಗಿನ ಬಾಂಬೆ ಹಾಗೂ ಈಗಿನ ಮುಂಬೈಯನ್ನು ಕಟ್ಟಿ ಬೆಳೆಸಿದರು. ಆ ಬೆಳವಣಿಗೆಯಲ್ಲಿ 'ಮರಾಠಿ ಮಾನುಸ್'ಗಳ ಪಾತ್ರ ಅತ್ಯಲ್ಪವಾಗಿತ್ತು. ಆ ಕಾಲದಲ್ಲಿ ಬಾಂಬೆ ಒಂದು ಕನಸುಗಳ ಸಾಗರವಾಗಿತ್ತು. ಸಾಧಕರು ಈ ದೇಶದ ಯಾವುದೇ ಮೂಲೆಯಲ್ಲಿದ್ದರೂ, ಅವರನ್ನು ಬಾಂಬೆ ಕೈಬೀಸಿ ಕರೆಯುತ್ತಿತ್ತು. ಹಾಗೆ ಕನಸುಗಳ ಬೆನ್ನೇರಿಕೊಂಡು ಬಂದವರೇ ಬಾಂಬೆಯನ್ನು ಮಹಾನ್ ನಗರಿಯಾಗಿಸಿದರು. ಆ ಪೈಕಿ ಶೇಕಡಾ ಐವತ್ತಕ್ಕಿಂತ ಹೆಚ್ಚು ವಾಸಿಗಳು ಮರಾಠಿಗರಾಗಿರಲಿಲ್ಲ. ಈಗ ಕೂಡ ಎಲ್ಲಿಂದಲೋ ಬಂದವರೇ ಮುಂಬೈ ಮಹಾನಗರಿಯ ಆಗು-ಹೋಗುಗಳನ್ನು ನಿಯಂತ್ರಿಸುತ್ತಿರುವುದು. ನಾಚಿಕೆಗೇಡಿನ ಸಂಗತಿಯೆಂದರೆ ಮುಂಬೈ ಈಗ ಆ ಹಕ್ಕನ್ನು ನೀಡುತ್ತಿಲ್ಲ. ಗೂಂಡಾಗಿರಿಯ ಮೂಲಕ ಮುಂಬೈಯನ್ನು ಪ್ರತ್ಯೇಕಿಸುವ ಯತ್ನ ಮಾಡಲಾಗುತ್ತಿದೆ.

ಈ ಗೂಂಡಾಗಿರಿಯನ್ನು ನಿಯಂತ್ರಿಸಿ, ಸಮಸ್ಯೆಗೆ ಪರಿಹಾರ ಹುಡುಕಬೇಕೆಂದರೆ ಮೊದಲು ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿಸಬೇಕು. ಅಗತ್ಯ ಬಿದ್ದಲ್ಲಿ ಮುಂಬೈ ಮಹಾನಗರಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡುವುದು ಒಳಿತು. ಆ ಮೂಲಕ ದೇಶದ ವಾಣಿಜ್ಯ ರಾಜಧಾನಿಯನ್ನು ಕೆಲವೇ ಕೆಲವರು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಪರಿಗಣಿಸುವುದನ್ನು ತಪ್ಪಿಸಬಹುದು. ಯಾವುದೇ ತರ್ಕವಿಲ್ಲದೇ ಭಾಷೆ ಮತ್ತು ಪ್ರಾದೇಶೀಕರಣದ ಮೂಲಕ ಮುಂಬೈಯನ್ನು ಛಿದ್ರಗೊಳಿಸುವುದಕ್ಕೆ ಅವಕಾಶ ನೀಡಬಾರದು. ಅವರಿಗೆ ಏನು ಬೇಕು ಅದನ್ನು ಮಾಡುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಅವರಿಗಿದೆ. ಆದರೆ, ಬಹುಸಂಖ್ಯಾತರೆಲ್ಲ ಒಂದುಗೂಡಿ ಆ ಕ್ಷುದ್ರ ಶಕ್ತಿಯನ್ನು ನಿರ್ನಾಮ ಮಾಡಬೇಕು.

'ಮರಾಠಿ ಮಾನುಸ್' ಎಂಬ ಅಸ್ತ್ರದ ಮೂಲಕ ಸರ್ಕಾರವನ್ನೇ ತನ್ನ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡು ಆಟವಾಡುತ್ತಿರುವ ಅದೇ ಶಿವಸೇನೆಯವರಿಗೆ ಅದೇ ರಾಜ್ಯದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುವ, ನಿರುದ್ಯೋಗಿಗಳಾಗಿ ಅಲೆದಾಡುತ್ತಿರುವ ಮತ್ತು ಆತ್ಮಹತ್ಯೆಯ ಬಲೆಗೆ ತಲೆಯೊಡ್ಡುತ್ತಿರುವ ರೈತರೆಂಬ 'ಮರಾಠಿ ಮಾನುಸ್'ಗಳೇಕೆ ಕಣ್ಣಿಗೆ ಬೀಳುತ್ತಿಲ್ಲ? ನಿಜವಾದ 'ಮರಾಠಿ ಮಾನುಸ್' ಕುರಿತು ಅವರ ಹೃದಯಗಳೇಕೆ ಬಡಿಯುತ್ತಿಲ್ಲಾ? ಆ ಹಿನ್ನೆಲೆಯಲ್ಲಿಯೇ ನಾನು ಮುಂಬೈ ಸ್ವತಂತ್ರವಾಗಬೇಕು ಮತ್ತು ಅದರದ್ದೇ ಆದ ಹೊಸ ವ್ಯಕ್ತಿತ್ವವನ್ನು ಪಡೆಯಬೇಕು ಎಂದು ಹೇಳುತ್ತಿರುವುದು.

ನನ್ನ ಸಹೋದ್ಯೋಗಿ ಸುತನು ಗುರು ಕಳೆದ ಬಾರಿ 'ಬ್ಯುಸಿನೆಸ್ ಅಂಡ್ ಎಕಾನಮಿ'ಯಲ್ಲಿ ಬರೆದಂತೆ.... ನಾನಾ ಪಾಟೇಕರ್, ರಿತೇಷ್ ದೇಶ್ಮುಖ್, ಮಧುರ್ ಭಂಡಾರ್ಕರ್, ಆಶುತೋಷ್ ಗೊವಾರಿಕರ್ ಅವರಂತಹ 'ಮರಾಠಿ ಮಾನುಸ'ರು ಎಚ್ಚೆತ್ತುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಅವರೆಲ್ಲ ರೀಲಿನ ಅವತಾರ ಕಳಚಿ 'ರಿಯಲ್ ಅವತಾರ್' ತೋರಿಸಬೇಕು. ಈ ದೇಶದ ಇನ್ನಿತರ ಭಾಗಗಳಿಂದ ಬಂದವರು ತೋರಿಸಿದ ಪ್ರೀತಿ-ವಿಶ್ವಾಸಕ್ಕೆ ತಕ್ಕುದಾಗಿ ಸ್ಪಂದಿಸುವ ಜವಾಬ್ದಾರಿ 'ಮರಾಠಿ ಮಾನುಸ'ರದ್ದಾಗಿದೆ. ನಾವೆಲ್ಲ ಸಚಿನ್ ತೆಂಡೂಲ್ಕರ್, ಲತಾ ಮಂಗೇಷ್ಕರ್ ಅವರಿಂದ ಸ್ಫೂರ್ತಿ ಪಡೆಯೋಣ. ಆರ್.ಡಿ. ಬರ್ಮನ್, ಯಶ್ ಚೋಪ್ರಾ ಇಲ್ಲದಿದ್ದರೆ ನೀವು ನೀವಾಗಿರುತ್ತಿರಲಿಲ್ಲ. ಬನ್ನಿ ಎಲ್ಲ ಒಂದಾಗಿ ಮಾತನಾಡೋಣ, ಒಂದಾಗಿ ಹಾಡು ಹೇಳೋಣ. ಕೇವಲ ಶಾರುಖ್ ಪರವಾಗಿ ಅಲ್ಲ, ಭಾರತ ಮತ್ತು ಪ್ರಜಾಪ್ರಭುತ್ವದ ಪರವಾಗಿ ನಾವೆಲ್ಲ ಒಂದಾಗೋಣ!!

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .