|
ಅಮೃತಸರದ
ಸ್ವರ್ಣಮಂದಿರದಲ್ಲಿ ಸೈನಿಕ ಕಾರ್ಯಾಚರಣೆ ನಡೆಸುತ್ತಿರುವ ಸುದ್ದಿ ನಮಗೆ
ಕಾಲಕಾಲಕ್ಕೆ ಸಿಗುತ್ತಲೇ ಇತ್ತು. ಆದರೆ ಅವೆಲ್ಲ ಅನಧಿಕೃತ ಮೂಲಗಳಿಂದ ಬಂದ
ಸುದ್ದಿಗಳಾಗಿದ್ದವು. ಆಪರೇಷನ್ ಬ್ಲೂ ಸ್ಟಾರ್ ಕಾಲದಲ್ಲಿ ಮುದ್ರಣ ಅಥವಾ
ತಾಂತ್ರಿಕ ಮಾಧ್ಯಮಗಳು ಈಗಿನಷ್ಟು ವ್ಯಾಪಕವಾಗಿರಲಿಲ್ಲ. ತತ್ಕಾಲದ
ಸುದ್ದಿಗಾಗಿ ಜನರು ಬಿಬಿಸಿ, ಆಕಾಶವಾಣಿ ಸುದ್ದಿಗಳನ್ನೇ ಅವಲಂಬಿಸಿದ್ದರು.
ಇಲ್ಲದೆ ಹೋದಲ್ಲಿ ಮರುದಿನ ರಾಂಚಿ ಹಾಗೂ ಪಾಟ್ನಾದಿಂದ ಬರುವ ದಿನಪತ್ರಿಕೆಗಳೇ
ವಿಷಯ ಮುಟ್ಟಿಸಬೇಕಾಗಿತ್ತು.
ಆಗ 20 ವರ್ಷ ಪ್ರಾಯದವನಾಗಿದ್ದ ರಂಜಿತ್
ಮಿಶ್ರಾ 'ಸಿಖ್ ರೆಜಿಮೆಂಟಲ್ ಕೇಂದ್ರ'ದಲ್ಲಿ ಮಡುಗಟ್ಟಿದ್ದ ಭಯಾನಕ ಮೌನವನ್ನು
ನೆನಪಿಸಿಕೊಳ್ಳುತ್ತಾರೆ. ಜೂನ್ 7ರಂದು ಬೆಳಗಿನ ಜಾವ 7.30ಕ್ಕೆ ರಾಮ್ಗಢ
ಪ್ರಜೆಗಳಿಗೆ ಹಿಂದೆಂದೂ ಕಂಡರಿಯದ ಸೈನಿಕ ಕ್ರಾಂತಿಯ ಪರಿಚಯವಾಗಿತ್ತು.
ಆಪರೇಷನ್ ಬ್ಲೂ ಸ್ಟಾರ್ ವಿರುದ್ಧ ಸಿಖ್ ರೆಜಿಮೆಂಟ್ ಸೈನಿಕರು ದಂಗೆ
ಎದ್ದಿದ್ದರು. ಸುದ್ದಿ ತಿಳಿದ ಕೂಡಲೇ ರಾಷ್ಟ್ರೀಯ ಹೆದ್ದಾರಿಯ ರೆಜಿಮೆಂಟಲ್
ಕೇಂದ್ರದ ಹೊರಗೆ ಜನ ಗುಂಪುಗೂಡಲಾರಂಭಿಸಿದ್ದರು. ಸುಮಾರು 400ರಿಂದ 500 ಮಂದಿ
ಶಸ್ತ್ರಸಜ್ಜಿತ ಯುವಕರು ಹೆದ್ದಾರಿಯಲ್ಲಿ ಸಿಕ್ಕ ವಾಹನಗಳನ್ನು ಹತ್ತಿ
ಹಜಾರಿಭಾಗ್ ಕಡೆ ಪ್ರಯಾಣಿಸುವ ತರಾತುರಿಯಲ್ಲಿದ್ದರು.
ಶಸ್ತ್ರಾಸ್ತ್ರ ಸಂಗ್ರಹಾಗಾರದೊಳಗೆ ನುಗ್ಗಿದ
ಸುಮಾರು 1500 ಮಂದಿ ಸೈನಿಕರು ತಮ್ಮನ್ನು ತಡೆದ ಕೇಂದ್ರದ ಕಮಾಂಡೆಂಟ್
ಬ್ರಿಗೇಡಿಯರ್ ಎಸ್.ಸಿ. ಸೂರಿ ಅವರನ್ನು ಹತ್ಯೆ ಮಾಡಿದರು. ಜನರಿಂದ ತುಂಬಿ
ತುಳುಕುತ್ತಿದ್ದ ಆ ಹೆದ್ದಾರಿ ಸೈನಿಕರು ಆಗಮಿಸುತ್ತಿದ್ದಂತೆಯೇ ಹೇಗೆ
ಖಾಲಿಯಾಯಿತು ಎಂಬುದನ್ನು ಉದ್ಯಮಿ ಪ್ರಮೋದ್ ಅಗರ್ವಾಲ್
ನೆನಪಿಸಿಕೊಳ್ಳುತ್ತಾರೆ. ಸೈನಿಕರು ರಾಮ್ಪುರದಲ್ಲಿ ಯಾರಿಗೂ ತೊಂದರೆ
ಕೊಡಲಿಲ್ಲವಾದರೂ ಅವರ ವರ್ತನೆ ಮಾತ್ರ ಭಯ ಹುಟ್ಟಿಸುವಂತಿತ್ತು. ಶಸ್ತ್ರ
ಹಿಡಿದಿದ್ದ ಅವರು ಮನಬಂದಂತೆ ಗುಂಡು ಹಾರಿಸುತ್ತಿದ್ದರು. ಕೊಲೆ ಮಾಡಲು ಮತ್ತು
ಕೊಲೆಯಾಗಲು ಸಿದ್ಧವಾದಂತಿದ್ದರು. ರಾಮ್ಪುರದ ಮಾಜಿ ಶಾಸಕರಾದ ಯಮುನಾ ಶರ್ಮ
ಅವರ ಮನದಲ್ಲಿ 1984 ಜೂನ್ 7ರ ನೆನಪು ಇಂದಿಗೂ ಅಚ್ಚಳಿಯದಂತೆ ಉಳಿದಿದೆ. "ಆ
ಕಾಲದಲ್ಲಿ ರಾಮ್ಗಢ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುಪ್ತಚರ ಇಲಾಖೆಯ
ನಾರಾಯಣನ್ಗೆ ಕೇಂದ್ರದ ಎಲ್ಲಾ ಸುದ್ದಿಗಳೂ ಲಭಿಸಿದ್ದವು. ದಂಗೆ ಮತ್ತು
ಪ್ರಚೋದನಕಾರಿ ಭಾಷಣಗಳ ಕುರಿತ ಸುದ್ದಿ ಜೊತೆಗೆ ಕಮಾಂಡೆಂಟ್ ಕೊಲೆಯಾಗಿರುವ
ವಿಚಾರವೂ ಅವರಿಗೆ ತಲುಪಿತ್ತು" ಎಂದು ನೆನಪಿಸಿಕೊಳ್ಳುತ್ತಾರೆ ಯಮುನಾ ಶರ್ಮ.
ಒಂದು ವಿಚಾರ ಮಾತ್ರ ಸ್ಪಷ್ಟವಾಗಿತ್ತು. ದಂಗೆ
ಎದ್ದ ಸೈನಿಕ ಸಿಬ್ಬಂದಿ ನಾಗರಿಕರ ವಿರುದ್ಧವಾಗಿರಲಿಲ್ಲ. ತಮ್ಮ ಧರ್ಮ
ಅಪಾಯದಲ್ಲಿರುವ ಕಾರಣ ಅವರು ಪಂಜಾಬ್ಗೆ ಹೋಗ ಬಯಸಿದ್ದರು. ರಾಮ್ಗಢ್ ಮತ್ತು
ವಾರಣಾಸಿ ನಡುವೆ ಅವರು ಇಂಧನಕ್ಕಾಗಿ ಹಲವು ಪೆಟ್ರೋಲ್ ಪಂಪ್ಗಳನ್ನು ಲೂಟಿ
ಮಾಡಿದ್ದರು. ಕುಜು ಬಳಿ ಸಣ್ಣ ಹೊಟೇಲ್ ಮೇಲೂ ದಾಳಿ ನಡೆಸಿದ್ದರು. "ಸುಮಾರು
40 ಯುವಕರು ಗುಂಪಾಗಿ ನನ್ನ ಹೊಟೇಲ್ಗೆ ಬಂದು ಊಟಕ್ಕಾಗಿ ದಾಂಧಲೆ
ಮಾಡತೊಡಗಿದರು. ನಾನು ಪ್ರಶ್ನಿಸಿದಾಗ ಅವರಲ್ಲೊಬ್ಬ ಬಂದೂಕನ್ನು ನನಗೆ
ಗುರಿಯಿಟ್ಟ. ಕೆಲಸಗಾರರೆಲ್ಲ ಓಡಿ ಹೋದರು. ಜೀವ ಉಳಿಸುವಂತೆ ನಾನು ಬೇಡಿಕೊಂಡ
ಮೇಲೆ ಬಿಟ್ಟುಬಿಟ್ಟರು. ಇಂತಹ ಕೆಲವು ಘಟನೆಗಳಿದ್ದಾಗ್ಯೂ ಆ ಯುವಕರ ಗುರಿ
ಸಾಧ್ಯವಾದಷ್ಟು ಬೇಗನೆ ಪಂಜಾಬ್ ತಲುಪುವುದಾಗಿತ್ತು. ಉರಿ ಬಿಸಿಲಿನ
ಮಧ್ಯಾಹ್ನದ ಸಮಯದಲ್ಲೂ ಕ್ರಾಂತಿಕಾರಿಗಳಿಗೆ ತಮ್ಮ ಗುರಿ ಹೊರತುಪಡಿಸಿ
ಮತ್ತೇನೂ ಕಾಣಿಸುತ್ತಿರಲಿಲ್ಲ. ಯಾವುದೇ ಪ್ರಶ್ನೆಗಳಿಗೂ ಉತ್ತರಿಸುವ ಗೋಜಿಗೆ
ಹೋಗದ ಅವರು 'ಬೋಲೆ ಸೋ ನಿಹಾಲ್' ಎಂದಷ್ಟೇ ಕಿರುಚುತ್ತಿದ್ದರು.
ಹೆದ್ದಾರಿಯಲ್ಲಿ ಯಾವುದೇ ವಾಹನ ಬಂದರೂ ನಿಲ್ಲಿಸಿ ಬಂದೂಕು ಗುರಿ ಇಟ್ಟು
ವಾಹನ ಕಸಿದುಕೊಳ್ಳುತ್ತಿದ್ದರು" ಎನ್ನುತ್ತಾರೆ ಹೊಟೇಲ್ ಮಾಲೀಕ ತ್ರಿಲೋಚನ
ಶರ್ಮ.
ಬೀದಿ ಬದಿಯ ರಾಮ್ಗಢ್ ಪೊಲೀಸ್
ಠಾಣೆಯಲ್ಲಿದ್ದವ ಒಬ್ಬನೇ ಒಬ್ಬ ಕ್ಲರ್ಕ್. ಉಳಿದೆಲ್ಲ ಪೊಲೀಸರು
ಪರಾರಿಯಾಗಿದ್ದರು. ಘಟನೆ ಬಗ್ಗೆ ಹಜಾರಿಭಾಗ್ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಮೊದಲು ಮಾಹಿತಿ ನೀಡಿದ್ದು ಯಮುನಾ
ಶರ್ಮ. ಆದರೆ ಪೊಲೀಸರ ಗೈರುಹಾಜರಿ ಮುಂದುವರಿದೇ ಇತ್ತು. ಸಂಜೆಯ ವೇಳೆಗೆ
ದಾನಾಪುರ್ ಮತ್ತು ರಾಂಚಿಯಿಂದ ಭದ್ರತಾಪಡೆ ಬಂದಿಳಿದವು. ರಾಮ್ಪುರಕ್ಕೆ
ತೆರಳುವ ರಸ್ತೆಗಳಲ್ಲಿ ಬಿಗಿ ಬಂದೋಬಸ್ತು ಮಾಡಲಾಯಿತು. ಅಧಿಕೃತ
ನಿಷೇಧವಿಲ್ಲದೆ ಇದ್ದರೂ ಎಲ್ಲ ಅಂಗಡಿಗಳು ಮುಚ್ಚಿದ್ದವು; ರಸ್ತೆಗಳು ಖಾಲಿ
ಹೊಡೆಯುತ್ತಿದ್ದವು. ಅದೇ ದಿನ ಪಾಟ್ನಾದಿಂದ ತನ್ನೂರು ರಾಂಚಿಗೆ
ಮರಳುತ್ತಿದ್ದ ಬಲ್ದೇವ್ ಠಾಕೂರ್ ಹೇಳುವಂತೆ, ಅವರ ಬಸ್ಸು ರಾಮ್ಪುರ್
ತಲುಪಿದಾಗ ಬೆಳಗಿನ ಜಾವ 7 ಗಂಟೆಯಾಗಿತ್ತು. ಸದಾ ಗಿಜಿಗುಡುತ್ತಿದ್ದ ಹಣ್ಣಿನ
ಮಾರುಕಟ್ಟೆ, ಸುಭಾಷ್ ಚೌಕ್ ಹಾಗೂ ಭುರ್ಕುಂಡಾಗೆ ಸಾಗುವ ರಸ್ತೆಗಳೆಲ್ಲ ಖಾಲಿ
ಹೊಡೆಯುತ್ತಿದ್ದವು.
ಆದರೆ ಈ ಬೆಳವಣಿಗೆಯಲ್ಲಿ ಗುರುತಿಸಬೇಕಾದ
ಮಹತ್ವದ ಸಂಗತಿ ಎಂದರೆ ಜನರು ಆಪರೇಷನ್ ಬ್ಲೂ ಸ್ಟಾರ್ನ್ನು
ವಿರೋಧಿಸುತ್ತಿದ್ದರೂ ಕ್ರಾಂತಿಕಾರಿಗಳ ಕುರಿತೂ ಅವರಿಗೆ ಸಹಾನುಭೂತಿ
ಇರಲಿಲ್ಲ. ಕ್ರಾಂತಿಕಾರಿಗಳನ್ನು ತಾವು ಬೆಂಬಲಿಸುವುದಿಲ್ಲ ಎನ್ನುವುದನ್ನು
ಜನಸಾಮಾನ್ಯರು ವಿವಿಧ ಬಗೆಯಲ್ಲಿ ಬಹಿರಂಗವಾಗೇ ತೋರಿಸಿದ್ದರು. |