|
 ಸ್ವರ್ಣಮಂದಿರದ
ಒಳಗೆ ಅವಿತಿದ್ದ ಭಯೋತ್ಪಾದಕರ ವಿರುದ್ಧ 1984ರ ಜೂನ್ 3ರಂದು ಕಾರ್ಯಾಚರಣೆ
ನಡೆಸಲು ಸರ್ಕಾರ ಖಚಿತ ನಿರ್ಧಾರ ಕೈಗೊಂಡಾಗಿತ್ತು. ಹೀಗಾಗಿ ಸೇನೆಯನ್ನೂ
ನಿಯೋಜಿಸಿತ್ತು. ಇನ್ನೇನು ಶೀಘ್ರವೇ ಸೇನಾ ಕಾರ್ಯಾಚರಣೆ ನಡೆಯಲಿದೆ
ಎನ್ನುವುದು ಎಲ್ಲರಿಗೆ ಮನದಟ್ಟಾಗಿತ್ತು.
ಜೂನ್ 4ರಂದು ನಾನು ರೈಲಿನಲ್ಲಿ ಅಮೃತಸರಕ್ಕೆ
ಬಂದಿಳಿದೆ. ನಗರವಿಡೀ ಸೇನಾ ನಿಯಂತ್ರಣದಲ್ಲಿತ್ತು. ಪತ್ರಕರ್ತರನ್ನೆಲ್ಲ
ವಾಪಾಸಾಗುವಂತೆ ಸೂಚಿಸಲಾಯಿತು. ಆದರೆ ನಾವ್ಯಾರೂ ಹಿಂತಿರುಗಲು ಒಪ್ಪಲಿಲ್ಲ.
ಕೊನೆಗೆ ಸೇನಾ ವಾಹನವೊಂದರಲ್ಲಿ ನಮ್ಮನ್ನೆಲ್ಲ ಜಲಂಧರ್ಗೆ ಕಳುಹಿಸಲಾಯಿತು.
ದೆಹಲಿಗೆ
ಮರಳುವ ಬದಲಾಗಿ ನಾನು ಅಮೃತಸರದಲ್ಲಿ ಓಡಾಡಬಯಸಿದ್ದೆ. ಸ್ವರ್ಣ ಮಂದಿರದ
ಪಕ್ಕವೇ ಇದ್ದ ನನ್ನ ತಾತ (ತಾಯಿಯ ತವರುಮನೆ)ನ ಮನೆಗೆ ಕಷ್ಟಪಟ್ಟು ಹೋದೆ.
ನಾನು ಅಲ್ಲೇ ಬೆಳೆದ ಕಾರಣದಿಂದ ಆ ಪರಿಸರ ನನಗೆ ಪರಿಚಿತ. ಹಾಗಾಗಿ ಸೇನಾ
ನಿಯೋಜನೆಯ ಫೋಟೋ ತೆಗೆಯುವುದು, ಭದ್ರತಾ ವ್ಯವಸ್ಥೆಯ ವಿವರ ಪಡೆಯುವುದು,
ಪ್ರತ್ಯಕ್ಷದರ್ಶಿಗಳ ಅನುಭವ ಮತ್ತು ಅಮೃತಸರದಲ್ಲಿ ನೆಲೆಸಿದ್ದ ಹಿರಿಯರ
ಆಸಕ್ತಿದಾಯಕ ವಿಚಾರಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತನಾದೆ.
ಆದರೆ ನನ್ನ ಈ ಚಟುವಟಿಕೆಗಳಿಂದ
ಅಧಿಕಾರಿಗಳಲ್ಲಿ ಸಂಶಯ ಮೂಡಿತು. ಹಾಗೆಯೇ ಸೇನೆಗೆ ನನ್ನ ಕಾರ್ಯ ಚಟುವಟಿಕೆಗಳ
ಸುದ್ದಿಯೂ ತಲುಪಿತು. ಅವರು ಮನೆಗೆ ಬಂದು ನನ್ನ ಕುಟುಂಬವನ್ನು ಬೆದರಿಸಿದರು.
ಕ್ಯಾಮರಾದ ರೀಲು ತೆಗೆದು ನಾನು ತೆಗೆದ ಫೋಟೋಗಳನ್ನೆಲ್ಲ ನಾಶ ಮಾಡಿದರು. ಆ
ಸಂದರ್ಭದಲ್ಲಿ ನನ್ನ ಕುಟುಂಬವೂ ವಾಪಾಸು ಮರಳುವಂತೆ ನನಗೆ ಸಲಹೆ ನೀಡಿತು.
ನನಗೆ ಬೇರೆ ಆಯ್ಕೆಗಳೇ ಇರಲಿಲ್ಲ.
ಮನೆ
ಬಿಟ್ಟು ಹೊಟೇಲ್ನಲ್ಲಿ ಉಳಿದುಕೊಂಡೆ. ಗುರುತು ಸಿಗದಂತೆ ಅಲ್ಲಿ ತುಂಬಾ ದಿನ
ಇರುವ ಹಾಗಿರಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ನಾನು ಫೋಟೋ ತೆಗೆಯುತ್ತಲೇ
ಇದ್ದೆ. ನಾನಲ್ಲಿರುವುದು ಇತರರಿಗೆ ತಿಳಿದ ಕೂಡಲೇ ಹೊಟೇಲ್ ತೊರೆದೆ. ಆದರೆ
ಅವಸರದಲ್ಲಿ ನನ್ನ ಕ್ಯಾಮರಾ ಲೆನ್ಸ್ ಹೊಟೇಲ್ ಕೋಣೆಯಲ್ಲೇ ಬಿಟ್ಟು ಬಂದಿದ್ದೆ.
ಅದನ್ನು ಪಡೆಯಲು ಹೊಟೇಲ್ಗೆ ಮರಳಿದಾಗ ಸೇನಾಧಿಕಾರಿಗಳು ನನಗಾಗಿ
ಕಾಯುತ್ತಿದ್ದರು. ಅವರು ನನ್ನನ್ನು ಕಾರಿನಲ್ಲಿ ಅಂಬಾಲಕ್ಕೆ ಕರೆದೊಯ್ದರು.
ಆದರೆ ನಾನು ಅಷ್ಟು ಬೇಗನೇ ಸೋಲೊಪ್ಪಿಕೊಳ್ಳಲು
ಸಿದ್ಧನಾಗಿರಲಿಲ್ಲ. ಜೂನ್ 8ರಂದು ಅಂಬಾಲದಿಂದ ವಾಹನವೊಂದನ್ನು ಬಾಡಿಗೆ ಪಡೆದ
ನಾನು ಅಮೃತಸರಕ್ಕೆ ಹೋಗುವ ದಾರಿಯಲ್ಲಿ ಚೆಕ್ಪೋಸ್ಟ್ ಒಂದನ್ನು
ದಾಟಬೇಕಾಗಿತ್ತು. ತಂತಿ ಸಂದೇಶದಲ್ಲಿ ಎಚ್ಚರಿಕೆ ಬಂದಿದ್ದರಿಂದಾಗಿ ಅಲ್ಲಿನ
ಭದ್ರತಾ ಸಿಬ್ಬಂದಿಗೆ ನಾನು ಸಿಕ್ಕಿಬಿದ್ದೆ. ನನ್ನ ಜೊತೆ ಇಂಡಿಯನ್
ಎಕ್ಸ್ಪ್ರೆಸ್ ವರದಿಗಾರ ಓಂಕಾರ್ ಗಾರ್ಗ್ ಅವರೂ ಇದ್ದರು. ಸೇನಾಧಿಕಾರಿಗಳ
ಮುಷ್ಟಿಯಿಂದ ತಪ್ಪಿಸಿಕೊಳ್ಳಲು ನನ್ನ ಹಳೇ ಸ್ನೇಹಿತ ಮೇಜರ್ ರಾಜ್ ಮನ್ಚಂದಾ
ಅವರ ಸಹಾಯ ಯಾಚಿಸಿದೆ. ಅವರು ತಮ್ಮ ಪರಿಚಿತ ಅಧಿಕಾರಿಗಳ ಪ್ರಭಾವ ಬಳಸಿ
ನಮ್ಮನ್ನು ಬಿಡುಗಡೆ ಮಾಡಿಸಿದರು.
ನಾವು ಚಂಡೀಗಢಕ್ಕೆ ಮರಳಿದೆವು. ಆವರಣದ ಒಳಗೆ
ನಾನು ಫೋಟೋ ತೆಗೆಯುತ್ತಿದ್ದಾಗ ಸೇನೆ ನನ್ನನ್ನು ಮತ್ತೊಮ್ಮೆ ಬಂಧಿಸಿ
ಕೇಂದ್ರ ಕಚೇರಿಗೆ ಕರೆದೊಯ್ದಿತು. ಅಲ್ಲಿಂದ ನಮ್ಮನ್ನು ಮೊಹಾಲಿಗೆ
ಕರೆದೊಯ್ಯಲಾಯಿತು. ಜೂನ್ 14ರವರೆಗೆ ಅಲ್ಲಿಯೇ ಸೇನೆಯ ವಶದಲಿದ್ದೆವು. ಆ
ಹೊತ್ತಿಗೆ ಕಾರ್ಯಾಚರಣೆ ಮುಗಿದಾಗಿತ್ತು. ಆದರೂ ಸಂಪೂರ್ಣ ನಾಶವಾಗಿದ್ದ ಅಕಾಲ್
ತಖ್ತ್ ಫೋಟೋವನ್ನು ಅಧಿಕಾರಿಗಳ ಕಣ್ತಪ್ಪಿಸಿ ತೆಗೆಯುವಲ್ಲಿ ನಾನು
ಯಶಸ್ವಿಯಾದೆ. |