ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ರಕ್ಷಣಾಪಡೆ ವಿಶೇಷಾಂಕ :  ಭಾರತೀಯ ಸೇನೆ 
 
ಕಠಿಣ ಕಮಾಂಡೋ ಜೀವನ
 

ಭಾರತೀಯ ಸೇನೆಯ ಕಮಾಂಡೋ ಆಗಬೇಕಿದ್ದರೆ ಅತಿ ಜಟಿಲ ಮಾನಸಿಕ ಹಾಗೂ ಶಾರೀರಿಕ ಪರೀಕ್ಷೆಗಳ ಅಗ್ನಿದಿವ್ಯ ಎದುರಿಸಬೇಕು. ಬೆಳಗಾವಿಯ ಕಮಾಂಡೋ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಟಿಎಸ್‌ಐನ ಮಾಯಾಂಕ್ ಸಿಂಗ್ ಅಲ್ಲಿನ ಚಿತ್ರಣವನ್ನು ನೀಡಿದ್ದಾರೆ. ಚಿತ್ರಗಳು: ಸಂಜಯ್ ಸೋಲಂಕಿ
 

ಭೇಟಿಯ ಮೊದಲ ದಿನವೇ ಅಪರಾತ್ರಿ ವೇಳೆ ಸೈಕಲ್ ಬೆಲ್ ಸದ್ದಿಗೆ ನಮ್ಮ ತಂಡದವರೊಬ್ಬರು ಎಚ್ಚರಗೊಂಡರು. ಹೊರಗೆ ಸಮವಸ್ತ್ರ ಧರಿಸಿದ್ದ ಕೆಡೆಟ್‌ಗಳು ಮೈ ತುಂಬಾ ಭಾರ ಹೊತ್ತು, ಬೆವರು ಸುರಿಸುತ್ತಾ ರಾತ್ರಿ ಊಟ ಮುಗಿಸಿ ಮರಳುತ್ತಿದ್ದರು.

'ನಾವೂ ಬೆಳಿಗ್ಗೆ ಬೇಗ ಎದ್ದು, ಒಂದಷ್ಟು ಸಂದರ್ಶನಗಳನ್ನು ಗಿಟ್ಟಿಸಿಕೊಳ್ಳಬೇಕು' ಅಂದುಕೊಳ್ಳುತ್ತಾ ನಿದ್ದೆಗೆ ಜಾರಿದೆವು. ಹಾಗೆ ನಾಲ್ಕೂವರೆ ಗಂಟೆಗೆ ಎದ್ದ ನಮ್ಮನ್ನು ಸ್ವಾಗತಿಸಿದ್ದು ಗಂವ್ ಎನ್ನುವ ಮೌನ. ಕೆಡೆಟ್‌ಗಳ ಕೋಣೆಯೆಲ್ಲಾ ಖಾಲಿ- ಖಾಲಿ. ತಿಂಡಿ ತಿಂದ ಮರುಕ್ಷಣವೇ ಅವರೆಲ್ಲಾ ಹೊರಟಿದ್ದರು. 'ಈ ಹುಡುಗರಿಗೆ ನಿದ್ದೆ ಬೇಡವೇ?' ಪ್ರಶ್ನೆ ನಮ್ಮೆಲ್ಲರ ಮುಖದಲ್ಲಿತ್ತು.

ಸುತ್ತ-ಮುತ್ತ ಕಣ್ಣಾಡಿಸಿದಾಗ ಒಂದು ವಿಷಯ ಸ್ಪಷ್ಟವಾಯಿತು. ಯಾವುದೋ ಒಂದು ಉದ್ಯಮ ಸಂಸ್ಥೆಯಂತೆ ಈ ತರಬೇತಿ ಕೇಂದ್ರ ಮೊದಲ ದಿನದಿಂದಲೂ ಕಾರ್ಯನಿರ್ವಹಿಸುತ್ತಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ದಿನದಿಂದಲೇ ತರಬೇತಿ ಶುರುವಾಗುತ್ತದೆ. ಬಟ್ಟೆ, ಹ್ಯಾವರ್‌ಸ್ಯಾಕ್ (ಆಹಾರ ಪದಾರ್ಥಗಳ ಚೀಲ), ಬೆನ್ನು ಚೀಲ, ರೈಫಲ್‌ಗಳು ಮುಂತಾದುವುಗಳನ್ನು ಕೆಡೆಟ್‌ಗಳಿಗೆ ನೀಡಲಾಗುತ್ತದೆ.

ಚಿಕ್ಕದಾಗಿ ಕೂದಲು ಕತ್ತರಿಸಿಕೊಂಡಿದ್ದ ಕೆಡೆಟ್‌ಗಳು (ಕ್ಯಾಪ್ಟನ್ ಗೌರವ್ ಅವರ ಪದಗಳನ್ನೇ ಬಳಸಬೇಕೆಂದರೆ) ತಮ್ಮ ಮಿತಿಯನ್ನು ಪರೀಕ್ಷಿಸಿಕೊಳ್ಳಲು ಸಜ್ಜಾಗುತ್ತಿದ್ದರು.

30 ತರಬೇತುದಾರರ ಈ ತಂಡಕ್ಕೆ ಕರ್ನಲ್ ಮುಖ್ಯಸ್ಥರು. ಈ ತಂಡವನ್ನು 4 ಗುಂಪುಗಳಾಗಿ ವಿಭಾಗಿಸಲಾಗಿದೆ. ಆ 4 ಗುಂಪುಗಳ ತರಬೇತುದಾರರು 160 ಅಧಿಕಾರಿಗಳಿಗೆ ತರಬೇತಿ ನೀಡುತ್ತಾರೆ. ಈ ಯುವ ಕೆಡೆಟ್‌ಗಳ ತರಬೇತುದಾರಿಗೆ ಅಮೋಘ ಸಾಧನೆಗಳ- ದಾಖಲೆಗಳ ಇತಿಹಾಸವಿದೆ.

ಮೇಜರ್ ಎಸ್.ಕೆ. ಸಿಂಗ್ ತರಬೇತಿ ಕೇಂದ್ರದ ಗುರಿಯ ಬಗ್ಗೆ ಟಿಎಸ್‌ಐಗೆ ತಿಳಿಸಿದರು. ಇಲ್ಲಿನ ತರಬೇತುದಾರರು 90 ದಿನಗಳ ಕಡ್ಡಾಯ ಪ್ರೊಬೇಷನರಿ ಅವಧಿ ಪೂರೈಸುತ್ತಾರೆ. ಆ ಅವಧಿಯಲ್ಲಿ ಅವರು ಹಲವು ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ದೇಶ ರಕ್ಷಣೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಗುಣಮಟ್ಟದೊಂದಿಗೆ ರಾಜಿಯೇ ಇಲ್ಲ ಎನ್ನುತ್ತಾರೆ ಮೇಜರ್ ಎಸ್.ಕೆ. ಸಿಂಗ್.

ಮೇಜರ್ ಬಳಿ ಮಾತನಾಡುತ್ತಿರುವಂತೆಯೇ ದೂರದಲ್ಲಿ ಎಂ.ಐ 17 ಹೆಲಿಕಾಪ್ಟರ್‌ನ ಸದ್ದು ಕೇಳಿಸಿತು. ಎಂ.ಐ 17 ಕಮಾಂಡೋ ತರಬೇತಿ ಸಿಬ್ಬಂದಿಯನ್ನು ಹೊತ್ತು ಬರುತ್ತಿತ್ತು. 30 ಅಡಿ ಎತ್ತರದಲ್ಲಿ ಹೆಲಿಕಾಪ್ಟರ್ ಹಾರಾಡುತ್ತಿತ್ತು. ಹಗ್ಗದ ಸಹಾಯದಿಂದ ಕಮಾಂಡೋಗಳು ಕೆಳಗಿಳಿಯಲಾರಂಭಿಸಿದರು. ಅದರ ಪಾರಿಭಾಷಿಕ ಪದ 'ಸ್ಲಿದರಿಂಗ್'. ಕಮಾಂಡೋಗಳು ಮಿಂಚಿನ ವೇಗದಲ್ಲಿ ಸಾಗುತ್ತಿದ್ದರು. ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳು ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಒಬ್ಬರ ಬಳಿ ಲೈಟ್ ಮಷಿನ್ ಗನ್ ಇತ್ತು. ಚುರುಕಾದ ಹಾಗೂ ಕರಾರುವಕ್ಕಾದ ಚಲನೆಯ ಮೂಲಕ ಅವರವರ ಸ್ಥಾನಗಳಲ್ಲಿ ನಿಂತರು.

ಈ ಕಠಿಣ ತರಬೇತಿಯ ಪ್ರಮುಖ ಉದ್ದೇಶ ಅವರ ಸಹನೆಯ ಮಿತಿಯನ್ನು ಪರೀಕ್ಷಿಸುವುದು. ತೀರಾ ಕಷ್ಟಕರವಾದ ಸಂದರ್ಭಗಳಲ್ಲೂ ಹೇಗೆ ಆಕ್ರಮಣಕಾರಿಯಾಗಿರಬಹುದು ಎಂಬುದನ್ನು ಈ ಅಭ್ಯಾಸಗಳು ಹೇಳಿಕೊಡುತ್ತವೆ ಎನ್ನುತ್ತಾರೆ ಕ್ಯಾಪ್ಟನ್ ಮನೀಶ್ ಮಿಶ್ರಾ. ಅವರನ್ನು ಅಮೆರಿಕನ್ ಮೆರೀನ್ಸ್ ಜೊತೆ ಹೋಲಿಸಬಹುದು. ಸಾಹಸಗಳ ಜೊತೆಗೆ ಕುಶಲ ತಂತ್ರಗಳನ್ನು ಬಳಸಿದರೆ ಮಾತ್ರ ಕೆಡೆಟ್‌ಗಳು ಈ ಅಭ್ಯಾಸಗಳಲ್ಲಿ ಸೈ ಎನಿಸಿಕೊಳ್ಳಬಹುದು.

42 ದಿನಗಳ ಕಮಾಂಡೋ ತರಬೇತಿಯ ಹಲವು ಗಮನಾರ್ಹ ಅಭ್ಯಾಸಗಳಲ್ಲಿ ಅಧಿಕಾರಿಗಳ ರ್‍ಯಾಂಕ್ ಬ್ಯಾಡ್ಜ್‌ಗಳನ್ನು ತಾತ್ಕಾಲಿಕವಾಗಿ ಕಿತ್ತು ಹಾಕುವುದು ಕೂಡಾ ಒಂದು. ಸಾಮಾನ್ಯವಾಗಿ ಈ ತರಬೇತಿ ಲೆಫ್ಟಿನೆಂಟ್ ಹಾಗೂ ಕ್ಯಾಪ್ಟನ್‌ಗಳಿಗೆ ಮಾತ್ರ. ವಿಶೇಷವೆಂದರೆ ಕ್ಯಾಪ್ಟನ್ ಮುಂತಾದ ಕಿರಿಯ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳಿಗೆ ತರಬೇತಿ ಕೊಡಿಸಲಾಗುತ್ತದೆ.

ಕ್ಯಾಪ್ಟನ್ ಗೌರವ್ ಸಿಂಗ್ ಹಾಗೂ ಕ್ಯಾಪ್ಟನ್ ಮನೀಶ್ ಮಿಶ್ರಾ ಒಂದೇ ತಂಡದಲ್ಲಿದ್ದವರು ಹಾಗೂ ಜೊತೆಗೇ ನಿಯೋಜಿತರಾದವರು. ಯಶಸ್ವಿ ಕಮಾಂಡೋಗಳ ಶಿಸ್ತನ್ನು ಇವರ ಕೆಲಸದಲ್ಲೂ ಕಾಣಬಹುದು. ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು ಎಂಬ ಸಿದ್ಧಾಂತದಲ್ಲಷ್ಟೇ ನಮ್ಮ ನಂಬಿಕೆ. ರಕ್ಷಣೆಯನ್ನು ನಾವೆಂದೂ ಕಡೆಗಣಿಸುವುದಿಲ್ಲ. ಶಿಸ್ತು ನಮ್ಮ ಅವಿಭಾಜ್ಯ ಅಂಗ ಎನ್ನುತ್ತಾರೆ ಅವರು.

ವ್ಯಾಪಕ ಸಂಶೋಧನೆ ಹಾಗೂ ಅಭಿವೃದ್ಧಿ (ರಿಸರ್ಚ್- ಡಿಸೈನ್ ಆಂಡ್ ಡೆವಲಪ್‌ಮೆಂಟ್ಸ್- ಆರ್ ಆಂಡ್ ಡಿ) ಕಾರ್ಯಗಳ ಮೂಲಕ ಕಮಾಂಡೋ ತರಬೇತಿ ಆರಂಭಿಸಲಾಯಿತು. ತರಬೇತಿಯ ನಿಗದಿತ ಕಾಲಾವಧಿಯ ಹಿಂದೆಯೂ ಒಂದು ಕಾರಣವಿದೆ. ಅದು ಕಮಾಂಡೋಗಳನ್ನು ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢರನ್ನಾಗಿಸುತ್ತದೆ. ನಮ್ಮ ಅರಿವಿಗೆ ಹಾಗೂ ದೃಢಚಿತ್ತಕ್ಕೆ ನಿಲುಕದ್ದು ಯಾವುದೂ ಇಲ್ಲ ಎಂಬುದು ಕಮಾಂಡೋಗಳ ಧ್ಯೇಯ ವಾಕ್ಯ ಎನ್ನುತ್ತಾರೆ ಮೇಜರ್ ಎಸ್.ಕೆ.

ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಪಾಠ ಪ್ರತಿ ಹಂತದ ತರಬೇತಿಯಲ್ಲೂ ಇರುತ್ತದೆ. ಪ್ರತಿ ಹೆಜ್ಜೆಯಲ್ಲೂ ಕೆಡೆಟ್‌ಗಳು ಇದನ್ನು ಸಾಬೀತು ಮಾಡಬೇಕು.

ಅತ್ಯಂತ ಜಟಿಲ ಪರೀಕ್ಷೆಯೆಂದರೆ 'ಫೀಲ್ಡ್ ಎಂಜಿನಿಯರಿಂಗ್ ಕ್ಯಾಪ್ಸೂಲ್'. ಇದು 'ಆಪರೇಷನ್ ಪ್ರಕಾರಂ'ನ ನಂತರದ ಹಂತ. ಇಲ್ಲಿ ಅಧಿಕಾರಿಗಳಿಗೆ ಸ್ಫೋಟಕಗಳ ಪತ್ತೆ ಹಾಗೂ ಅವುಗಳನ್ನು ನಿಷ್ಕ್ರಿಯಗೊಳಿಸುವಿಕೆ, ನೆಲಬಾಂಬ್‌ಗಳ ಪತ್ತೆ ಮುಂತಾದ ತರಬೇತಿಗಳನ್ನು ನೀಡಲಾಗುತ್ತದೆ.

ಮೇಜರ್ ಡಿ.ಕೆ ಪನ್ವಾರ್ ಅವರಿಗೆ ವಿಶೇಷ ಕಲೆಯೊಂದು ಸಿದ್ಧಿಸಿದೆ. ಹಾವುಗಳನ್ನು ಪಳಗಿಸುವ ವಿದ್ಯೆಯನ್ನು ಅವರು ಚೆನ್ನಾಗಿ ಬಲ್ಲರು. ಹಾವೊಂದನ್ನು ಕೋಲಿನಲ್ಲಿ ಸುತ್ತುತ್ತಾ '18 ಕೆ.ಜಿ. ಭಾರದ ಚೀಲ, 4 ಕೆ.ಜಿ. ತೂಕದ ರೈಫಲ್, ಕಷ್ಟಕರ ಸನ್ನಿವೇಶಕ್ಕೆ ಸದಾ ಮುಖಾಮುಖಿಯಾಗುವುದು ಇವು ಕಮಾಂಡೋ ಜೀವನದ ನಿರಂತರ ಸಂಗಾತಿಗಳು. ನೀರು, ಆಹಾರ ಇಲ್ಲದ ಕಗ್ಗಾಡಿನಲ್ಲೂ ಜೀವನ ಸಾಗಿಸುವ ಅಭ್ಯಾಸ ಎಂಥವರನ್ನೂ ನಿಪುಣರನ್ನಾಗಿಸುತ್ತದೆ. ಅಂಥ ಜೀವನದಲ್ಲಿ ಪ್ರಾಣಿ, ಹಾವು- ಚೇಳುಗಳನ್ನು ಪಳಗಿಸುವ ವಿದ್ಯೆಯೂ ಕೆಲವೊಮ್ಮೆ ಅತ್ಯವಶ್ಯಕ ಎನ್ನುತ್ತಾರೆ ಮೇಜರ್ ಡಿ.ಕೆ. ಪನ್ವಾರ್.

ಮೇಜರ್ ನಮ್ಮನ್ನು ಸರ್ಪ ಹಾಗೂ ಕೊಳಕು ಮಂಡಲ ಹಾವುಗಳಿರುವ ಒಂದು ಸಣ್ಣ ಹಳ್ಳದ ಬಳಿ ಕರೆದೊಯ್ದರು. ಅಲ್ಲಿ ಒಂದರ ಮೇಲೊಂದು ಹೆಣೆದು, ಸುರುಳಿ ಸುತ್ತಿ ಬಿದ್ದಿದ್ದ ಹಾವುಗಳಿದ್ದವು. ಹಸಿವೆ ನೀಗಿಸಲು ಏನೂ ಸಿಗದಾಗ ಹಾವುಗಳ ಮಾಂಸವನ್ನೇ ತಿಂದು ಬದುಕಬೇಕಾದ ಪರಿಸ್ಥಿತಿಯೂ ಕಮಾಂಡೋಗಳಿಗಿರುತ್ತದೆ ಎಂಬ ವಿಚಾರವನ್ನೂ ಮೇಜರ್ ತಿಳಿಸಿದರು.

ಹಾವುಗಳ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರದ ಮೂಲಕ ತೆಳ್ಳಗಿನ ಕೋಲುಗಳನ್ನು ಬಳಸಿ ಹಾವುಗಳನ್ನು ಹಿಡಿಯಲಾಗುತ್ತದೆ. ಇದೊಂದು ಸೂಕ್ಷ್ಮವಾದ ಕೆಲಸ. ಪಳಗಿದ ಕೈಯಲ್ಲಿ ಹಿಡಿದ ಹಾವುಗಳಿಂದ ಕಚ್ಚಿಸಿಕೊಳ್ಳುವುದು ಅಸಂಭವ ಎನ್ನುವುದು ಮೇಜರ್ ಪನ್ವಾರ್ ಅವರನ್ನು ಗಮನಿಸುತ್ತಿದ್ದ ನಮಗೆ ತಿಳಿಯಿತು. ಮೇಜರ್ ಬಹಳ ಜಾಗರೂಕರಾಗಿದ್ದರು. ಹಾವಿನ ದವಡೆಯಿಂದ ಬಿಳಿ ಲೋಳೆ ದ್ರವರೂಪದ ಉಗ್ರವಿಷ ಹೊರ ಒಸರಿತು. ಅರೆ ಕ್ಷಣದ ಅಜಾಗರೂಕತೆಯೂ ಗಂಡಾಂತರವನ್ನೇ ಸೃಷ್ಟಿಮಾಡಬಹುದಿತ್ತು. ಆದರೆ ಹಾವು ಹಿಡಿಯುವುದರಲ್ಲಿ ಪಳಗಿದ ಆ ಕೈಗಳಿಂದ ಪ್ರಮಾದ ಸೃಷ್ಟಿ ಅಸಾಧ್ಯ!

ಆದರೆ ಈ ಗಂಡಾಂತರಗಳು, ಸಂದಿಗ್ಧತೆಗಳು ಕಮಾಂಡೋ ಜೀವನದ ಅವಿಭಾಜ್ಯ ಅಂಗಗಳು. ಕೊನೆಯವರೆಗೂ ಇವೆಲ್ಲವನ್ನೂ ಎದುರಿಸಿ ಗೆದ್ದರೆ ಮಾತ್ರ ಯಶಸ್ವಿ ಕಮಾಂಡೋ ಎನಿಸಿಕೊಳ್ಳಲು ಸಾಧ್ಯ.

ಆತ್ಮವಿಶ್ವಾಸದ ನಡಿಗೆ (ಪಾರಿಭಾಷಿಕ ಪದ- 'ದ ಕಾನ್ಫಿಡೆನ್ಸ್ ವಾಕ್') ಕಮಾಂಡೋಗಳಿಗೆ ದೃಢಚಿತ್ತದ ಕ್ಷಿಪ್ರ ಚಲನೆಯನ್ನು ಅಭ್ಯಾಸಮಾಡಿಸುತ್ತದೆ. ಅಲ್ಲೇ ಪಕ್ಕದಲ್ಲಿ ಕೊಂಡಿಯೊಂದಕ್ಕೆ ತಮ್ಮನ್ನು ಬಿಗಿದು ನೀರಿನಾಳಕ್ಕೆ ಜಿಗಿಯುವ ತರಬೇತಿ ನಡೆಯುತ್ತಿತ್ತು. ದಿಢೀರ್ ನಿರ್ಧಾರ ಕೈಗೊಳ್ಳುವ ಶಕ್ತಿಯನ್ನು ಕಮಾಂಡೋಗಳಿಗೆ ನೀಡುವುದೇ ಈ ತರಬೇತಿಯ ಉದ್ದೇಶ. ಕಾಲ ಕೆಳಗಿನ ಭೂಮಿ ಕುಸಿಯುತ್ತಿದ್ದರೂ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವವರೇ ಕಮಾಂಡೋಗಳು. ಪ್ರತಿದಿನವೂ 30 ಮೈಲಿ ದೂರವನ್ನು ಕ್ರಮಿಸುತ್ತಿದ್ದ ನಮಗೆ ಅದು ಕೊನೆಯೇ ಇಲ್ಲದ ಪಯಣವೇನೋ ಎನಿಸಿದ್ದು ಸುಳ್ಳಲ್ಲ! ಮೊದಲೇ ಹೇಳಿದಂತೆ ಅಲ್ಲಿ ಲಭ್ಯವಿದ್ದ ಆಹಾರ ವಿವಿಧ ಹಾವುಗಳ ಮಾಂಸ ಮಾತ್ರ!

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಭಾರತೀಯ ಸೇನೆ

  ರಕ್ಷಣೆಯ ನೊಗಹೊತ್ತ ಹೋರಾಟಗಾರರು

  ಕಠಿಣ ಕಮಾಂಡೋ ಜೀವ

  ಸರಹದ್ದಿನ ಸೋಲರಿಯದ ಸರದಾರ

  ಹೋರಾಟದ ಬದುಕಿಗೆ ಮುನ್ನುಡಿ

  ಯುದ್ಧ ತಂತ್ರಜ್ಞರ ಸಾಹಸಗಾಥೆ

  'ಗೆರಿಲ್ಲಾ' ಕಲೆ ಕಲಿಸುವ ಅಪರೂಪದ ಶಾಲೆ

  ಇವರೆಂದರೆ ಭಯವೂ ಬೆಚ್ಚುತ್ತದೆ!

  'ನಮಗೀಗ ಸಮರ್ಥ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ' : ಜನರಲ್ ದೀಪಕ್ ಕಪೂರ್

  ವೇತನ ಸುಳಿಯಲ್ಲಿ ಸೇನಾ ಸಿಬ್ಬಂದಿ

ಭಾರತೀಯ ನೌಕಾಪಡೆ

  ಅಜೇಯ 'ಐಎನ್‌ಎಸ್ ಮುಂಬೈ'

  'ಚೀನಾದೊಂದಿಗಿನ ಸ್ಪರ್ಧೆ ಯುದ್ಧದಲ್ಲಿ ಪರ್ಯವಸಾನವಾಗದಂತೆ ತಡೆಯಬೇಕು' : ಅಡ್ಮಿರಲ್ ಸುರೀಶ್ ಮೆಹ್ತಾ

 "ಸರ್ಕಾರಿ ನೀತಿಯಲ್ಲಿ ನೌಕಾಪಡೆಗೆ ಪ್ರಮುಖ ಆದ್ಯತೆ' :ಅಡ್ಮಿರಲ್ ಅರುಣ್ ಪ್ರಕಾಶ್

ಭಾರತೀಯ ವಾಯುಪಡೆ

  ಹಾರುವ ಯಂತ್ರಗಳ ಬೆನ್ನೇರಿ ಹೊರಟಾಗ

  'ಸಿಬ್ಬಂದಿ ಆಯ್ಕೆ: ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ' : ಫಾಲಿ ಮೇಜರ್

ಇತರ

ಯಾರೂ ಅರಿಯದ ಹೀರೋ ಪಡೆ

  ಬಾಲಿವುಡ್ ಗ್ಲಾಮರ್ ಸೇನೆ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .