|
ರಮ್ಯಾ ಪೈಪೋಟಿ
'ಮುಸ್ಸಂಜೆ ಮಾತು' ನೂರು ದಿನ ಓಡಿದ್ದೇ ರಮ್ಯಾ ಆಕಾಶಕ್ಕೆ ಮೂರೇ ಗೇಣು ಅಂತಿದ್ದಳು! ಹಾಗೇ ಬ್ಯುಸಿ ಚಿತ್ರೀಕರಣದಿಂದ ರಜಾ ತಗೊಂಡು ಸುತ್ತಾಡ್ಕೊಂಡು ಬಂದಿದ್ದಾಳೆ. ಸುದೀಪ್ ನಾಯಕನಾಗಿರೋ, ಸಾಧುಕೋಕಿಲ ನಿರ್ದೇಶನದ ಮುಂದಿನ ಚಿತ್ರ 'ವೀರ ಮದಕರಿ' ತನ್ನ ಬುಟ್ಟಿಗೇ ಬೀಳುತ್ತದೆ ಅಂದ್ಕೊಂಡಿದ್ದ ರಮ್ಯಾಗೆ ಸಖತ್ ಶಾಕ್ ಹೊಡೆದಿದೆ! ಕಾಡಿಸಿ- ಪೀಡಿಸಿ ಕೊನೆಗೆ 'ಎಸ್' ಅನ್ನೋಣ ಅಂದ್ಕೊಂಡ್ರೆ ನಿರ್ಮಾಪಕರು ನೇರ ಹೈದರಾಬಾದ್ಗೆ ಹಾರಿದ್ದಾರೆ. ರಮ್ಯಾ ಸಿಕ್ಕಿಲ್ಲ ಅಂದ್ರೆ ಬಾಲಿವುಡ್ ತಾರೆ ತನೀಷಾ ಮುಖರ್ಜಿ ಸಿಕ್ರೂ ಒ.ಕೆ ಅನ್ನೋದು ನಿರ್ಮಾಪಕ ದಿನೇಶ್ ಗಾಂಧಿ ಆಶಯ. ಅಯ್ಯೋ, ಕನ್ನಡದ ನಂಬರ್ವನ್ ನಟಿ ಅವಕಾಶಕ್ಕಾಗಿ
ಯಃಕಶ್ಚಿತ್ ಬಾಲಿವುಡ್ ಪ್ಲಾಪ್ ತಾರೆ ಜೊತೆ ಸ್ಪರ್ಧಿಸಬೇಕಾಗಿ ಬಂದಿದೆಯೇ? ಅಂದರೆ? ಸ್ಯಾಂಡಲ್ವುಡ್ ಈಗ ಫ್ಲಾಪ್ ತಾರೆಗಳ 'ಡಂಪಿಂಗ್ ಗ್ರೌಂಡ್'!!

ಎಲ್ಲಾ ಅದೃಷ್ಟದಾಟ
'ಗಾಳಿಟಪ'ದ ಬಜಾರಿ ಈಗ ಬರಗೂರು ರಾಮಚಂದ್ರಪ್ಪ ಅವರ 'ಉಗ್ರಗಾಮಿ' ಚಿತ್ರೀಕರಣದಲ್ಲಿ ಬ್ಯುಸಿ. ಚೊಚ್ಚಲ ತುಳು ಚಿತ್ರ 'ಕೋಟಿ ಚೆನ್ನಯ'ದ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿರೋ ನೀತುಗೆ ಕಲಾತ್ಮಕ ಪಾತ್ರ ಇದೇ ಮೊದಲಲ್ಲ. ಬರಗೂರು ಅವರಂತಹ ಖ್ಯಾತ ನಿರ್ದೇಶಕರ ಸಿನಿಮಾದಲ್ಲಿ ಅವಕಾಶ ಸಿಕ್ಕಿರೋದಕ್ಕೆ ನೀತು ಖುಷಿಯಾಗಿದ್ದಾಳೆ. ಏನೇ ಆಗಲಿ, ಸ್ಯಾಂಡಲ್ವುಡ್ ನೀತು ಪ್ರತಿಭೆಯನ್ನು ಬಳಸಿಕೊಂಡದ್ದು ಅಷ್ಟರಲ್ಲೇ ಇದೆ. ಅದಕ್ಕೇ ಏನೋ ಈ ಬೆಡಗಿಯೂ ನೆರೆಯ ಚಿತ್ರರಂಗದತ್ತ ಮುಖ ಮಾಡಿದ್ದಾಳೆ. ಯಾರ ಲಕ್ ಎಲ್ಲಿದೆಯೋ ಬಲ್ಲವರಾರು?
ಪ್ರೇಮ ಕಲಹ
ಸೈಫ್-ಕರೀನಾ ನಡುವೆ ಮತ್ತೆ ಜಟಾಪಟಿ. ಯಪ್ಪೋ! ಏನಾಗೈತೆ ಇಬ್ರುಗೂ ಅಂತ ಏಳ್ತೀವ್ನೀ ಕೇಳಿ... ಮೊನ್ನೆ ಏನಾಯ್ತು ಅಂತಂದ್ರೆ, ಕರೀನಾ ಲಾಸ್ ಏಂಜಲೀಸ್ನಲ್ಲಿ 'ಕಂಬಕ್ತ್ ಇಷ್ಕ್' ಚಿತ್ರೀಕರಣ ಸಂದರ್ಭ ಸಿಲ್ವಸ್ಟರ್ ಸ್ಟಲೋನ್ ಕೆನ್ನೆಗೆ ಮುತ್ತು ಕೊಟ್ಟಳು. ಆಗ ಸೆಟ್ನಲ್ಲಿ ಇದ್ದ ಈ ನಮ್ ಕರೀನಾ ಪ್ರೇಮಿ ಅದನ್ನು ವಿರೋಧಿಸಿದ. ಬೇಬೊಗೂ ಸಿಟ್ಟು ಬಂದು ಹೀಗೆಲ್ಲಾ ಹೇಳೋದಾದ್ರೆ ಚಿತ್ರೀಕರಣಕ್ಕೆ ಬರೋದಾದ್ರೂ ಏಕೆ ಅಂತ ಗುರ್ಗುಟ್ಟಿದ್ದಳು. ಅಂತೂ ಇಂತೂ ಸಂಜೆ ಹೊತ್ತಿಗೆ ಈ ಪ್ರೇಮ ಕಲಹ ಸರಿಹೋಯ್ತು ಬಿಡಿ. ಈ ಹಿಂದೆ ಬ್ಯಾಂಕಾಕ್ನಲ್ಲಿ ನಡೆದ ಐಫಾ ಪುರಸ್ಕಾರದಲ್ಲಿ ತನ್ನ ನೃತ್ಯ ಪ್ರದರ್ಶನವೊಂದರಲ್ಲಿ ಕರೀನಾ ತೊಟ್ಟಿದ್ದ ಉಡುಗೆ ಬಗ್ಗೆ ಸೈಫ್ ಕಿರಿಕ್ ಮಾಡಿದ್ದ. ಎಲ್ಲಾ ಬಾಯ್ಫ್ರೆಂಡ್ಗಳ ಹಣೆಬರಹನೂ ಇಷ್ಟೇ ಕಣ್ರೀ!
ಮಸ್ತ್ ಮಸ್ತ್ ಶಿಲ್ಪಾ

ಕೇಳ್ರಪ್ಪೋ ಕೇಳಿ... ಶಿಲ್ಪಾ ಶೆಟ್ಟಿ ಮುಂದಿನ ಬಾಂಡ್ ಗರ್ಲ್ ಅಲ್ಲ ಅಂತ ಘಂಟಾಘೋಷವಾಗಿ ಹೇಳಿದ್ದಾಳೆ. ಬರಲಿರುವ ಒಂದು ಹಾಲಿವುಡ್ ಚಿತ್ರ ಬಿಟ್ಟರೆ ಮತ್ತಾವುದನ್ನೂ ಆಕೆ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಯೋಗದ ಕುರಿತಾದ ಡಿವಿಡಿ ಹೊರತಂದ ಶಿಲ್ಪಾ, ಮನೀಶ್ ಷಾ ನಿರ್ದೇಶನದ ಚಿತ್ರಕ್ಕೆ ಪ್ರಥಮ ಬಾರಿ ನಿರ್ಮಾಪಕಿಯೂ ಆಗುತ್ತಿದ್ದಾಳೆ. ಸನ್ನಿ ಡಿಯೋಲ್ ಜೊತೆ 'ದ ಮ್ಯಾನ್'ನಲ್ಲಿ ನಟಿಸುತ್ತಿದ್ದಾಳೆ. ವೋಡ್ಕಾ ಬ್ರ್ಯಾಂಡ್ ಒಂದಕ್ಕೆ ರಾಯಭಾರಿ. ವೋಡ್ಕಾ ರಾಯಭಾರಿಯಾದ ಪ್ರಥಮ ಮಹಿಳೆ ಎಂಬ 'ಕಿಕ್' ಬೇರೆ. ಉಫ್! ಇಷ್ಟೇನಾ ಇನ್ನೂ ಏನಾದ್ರೂ ಇದ್ಯಾ? ನಮ್ಮ ಕಿಂಗ್ ಅಕ್ಷಯ್ಗೂ ಗಾಳ ಹಾಕುತ್ತಿದ್ದಾಳೆ ಅನ್ನೋ ಸುದ್ದಿ ಬಂದಿದೆ. ಭಯ ಬೇಡ, ಇದು ವೈಯಕ್ತಿಕ ಅಲ್ಲ ಸ್ವಾಮಿ ವೃತ್ತಿಪರ ಲಿಂಕ್!!
ಮಲಯಾಳಂ ಮಹಿಮೆ!
ಕನ್ನಡದ ಪ್ರಮುಖ ಬ್ಯಾನರ್ಗಳ ಚಿತ್ರಗಳತ್ತ ಒಮ್ಮೆ ಕಣ್ಣಾಡಿಸಿ ನೋಡಿ. ಸ್ಪಷ್ಟ ಗೋಚರವಾಗುವುದೇನು ಗೊತ್ತೆ? ಮಲಯಾಳಂ ಮಹಿಮೆ! ಪುನೀತ್ ರಾಜ್ಕುಮಾರ್ ಚಿತ್ರಗಳೆಲ್ಲಾ 'ಮೀರಾ'ಮಯವಾಗುತ್ತಿವೆ. ಪುನೀತ್ಗೆ ನಾಯಕಿಯಾಗಿದ್ದ ಮೀರಾ ಜಾಸ್ಮಿನ್ ಈಗ ಯೋಗರಾಜ್ ಭಟ್ ನಿರ್ದೇಶನದಲ್ಲಿ 'ಲಗೋರಿ' ಹೊಡೆಯೋದು ಗ್ಯಾರಂಟಿಯಾಗಿದೆ! ಇನ್ನು 'ಗಜ' ಚಿತ್ರದ ನಾಯಕಿ ನವ್ಯ ನಾಯರ್ 'ನಂ ಯಜಮಾನ್ರು' ಚಿತ್ರದಲ್ಲಿ ಬ್ಯುಸಿ. ನಟಿಯರು ಬೇಕು ಎಂದು ಜಾಹೀರಾತು ಕೊಟ್ಟು ಪ್ರಚಾರ ಪಡೆದ ಯೋಗರಾಜ್ ಭಟ್ ಅವರೇ ತೃಷಾ- ಮೀರಾ ಎಂದು ಓಡಾಡುತ್ತಿದ್ದಾರೆ. ಕನ್ನಡದಲ್ಲಿ ನಟಿಯರಿಗೆ ಇಷ್ಟೊಂದು ಬರವಿದೆಯೆ ಅಥವಾ ನಿರ್ದೇಶಕರ ಕಣ್ಣಿಗೆ ಗೋಚರಿಸುತ್ತಿಲ್ಲವೆ?
ಕೈರಾಯಣ
ಕೈರಾ ನೈಟ್ಲೀ ಹೊಸ ರಾಮಾಯಣ ಕೇಳಿ. 'ದ ಡಚೆಸ್' ಚಿತ್ರದ ಪ್ರಚಾರ ಭಾವಚಿತ್ರಗಳಲ್ಲಿ ಕೈರಾಳ ಸ್ತನಗಳನ್ನು ಇರುವುದಕ್ಕಿಂತ ಹೆಚ್ಚು ಎದ್ದು ಕಾಣುವಂತೆ ಮಾಡಲಾಗುವುದು ಎಂದದ್ದಕ್ಕೆ ಬ್ಯಾಡಾ ಬ್ಯಾಡಾ ಎಂದು ಬೊಬ್ಬಿಡುತ್ತಿದ್ದಾಳೆ. 2004ರ 'ಕಿಂಗ್ ಆರ್ಥರ್' ಚಿತ್ರದ ಪ್ರಚಾರ ಸಂದರ್ಭದಲ್ಲೂ ಇದೇ ಆಗಿತ್ತು. ಆಗ ಭಾವಚಿತ್ರಗಳಲ್ಲಿ ಸ್ತನಗಳನ್ನು ಡಿಜಿಟಲ್ ಎಫೆಕ್ಟ್ ಕೊಟ್ಟು ತಿದ್ದಿದ್ದಕ್ಕೆ ಚಸಕ್ ಪಿಸಕ್ ಎಂದು ಅಸಮಾಧಾನಗೊಂಡಿದ್ದಳು. ಹಾಲಿವುಡ್ನಲ್ಲಿ ಅತೀ ಹೆಚ್ಚು ಸಂಭಾವನೆ ಸ್ವೀಕರಿಸುತ್ತಿರುವ ಎರಡನೇ ನಟಿಯಾದ ಈಕೆಗೆ ತನ್ನ ದೇಹ ಹೇಗಿದೆಯೋ ಹಾಗಿದ್ದರೆ ಮಾತ್ರ ಚೆನ್ನವಂತೆ. ಮೊನಿಕಾ ಬಲೂಚಿ ಅಲ್ಲದಿರಬಹುದು, ಆದರೆ ಕೈರಾಗೆ ಅವಳದ್ದೇ ಆದ ಅಭಿಮಾನಿ ದೇವರುಗಳಿದ್ದಾರೆ ಎಂಬುದು ಸುಳ್ಳಲ್ಲ!
ಮಂಜರಿ ಅದೃಷ್ಟ
'ಜಾನೇ ತೂ ಯಾ ಜಾನೇ ನಾ'ದಲ್ಲಿ ಜಾದೂ ಮಾಡಿದ ಮಂಜರಿ ಫಡ್ನಿಸ್ ಈಗ ಚಿರಪರಿಚಿತ ಮುಖ. 'ಚಕ್ ದೆ'ಯ 'ಮೌಲಾ ಮೇರೆ' ಮತ್ತು 'ನಮಸ್ತೆ ಲಂಡನ್' ಚಿತ್ರದ 'ಮೆ ಜಹಾಂ ರಹೂಂ' ಹಾಡಿನ ಖ್ಯಾತಿಯ ಕೃಷ್ಣ ಅವರ ಮುಂದಿನ ಸೂಫಿ ಸಂಗೀತ ಸುರುಳಿಯಲ್ಲೂ ಈಕೆ ಕಾಣಿಸಿಕೊಳ್ಳುತ್ತಿದ್ದಾಳೆ. ಮಂಜರಿ ಈ ಕುರಿತು ಸಖತ್ ಖುಷಿಯಾಗಿದ್ದಾಳೆ. ಆಕೆಯ ಮುಂದಿನ ಚಿತ್ರ 'ಐ ಆಮ್ ೨೪' ಮಂಜರಿಯೇ ಹೇಳುವಂತೆ ವಿಭಿನ್ನ ಹಾಸ್ಯ ಚಿತ್ರ. ಅದು ನಿಜವೇ ಅನ್ನೋದನ್ನು ಚಿತ್ರ ನೋಡಿ ತೀರ್ಮಾನಿಸೋಣ ಬಿಡಿ.
ಎನ್.ಕೆ. ಸುಪ್ರಭಾ,
ಅನು ಗುಲ್ ಮೋಹರ್ |