|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಜಾಗತಿಕವಾಗಿ ಸಮಾಜ ಹಾಗೂ ಪರಿಸರದ ಮೇಲೆ
ಉದ್ಯಮವಲಯ ಭಾರೀ ಪರಿಣಾಮವನ್ನೇ ಬೀರುತ್ತಿದೆ.
ಅರಣ್ಯನಾಶದಿಂದ ಹಿಡಿದು ಸ್ಥಳಾಂತರದವರೆಗೆ,
ಇಂಗಾಲದ ವಿಸರ್ಜನೆಯಿಂದ ಜಲಮೂಲಗಳ ಬತ್ತುವಿಕೆಯವರೆಗೆ,
ತೈಲ ಸೋರಿಕೆ ಹಾಗೂ ಮಾನವ ಹಕ್ಕು ಉಲ್ಲಂಘನೆಯವರೆಗಿನ ಎಲ್ಲಾ
ವಿಷಯಗಳಲ್ಲೂ ಕಾರ್ಪೊರೇಟ್ ಕ್ಷೇತ್ರದ ಕೈವಾಡ ಇದ್ದೇ ಇರುತ್ತದೆ.
ಕಾರ್ಪೊರೇಟ್ ದುರ್ವ್ಯವಹಾರ ಹಾಗೂ ಇತರೆ ಸಾಮಾಜಿಕ ಪಿಡುಗುಗಳಿಂದ
ಸಮಾಜ ಹಾಗೂ ಪರಿಸರ ಇಂದಿನವರೆಗೆ ಅನುಭವಿಸಿದ ಕಷ್ಟಕೋಟಲೆಗಳಿಗೆ
ಲೆಕ್ಕವಿಲ್ಲ. ಇಂಥ ನಷ್ಟಗಳನ್ನು ತುಂಬಿಸಲು
ಪ್ರಸ್ತುತ ಜಾಗತಿಕ ಉದ್ಯಮಗಳು ನೀಡುತ್ತಿರುವ ಸಿಎಸ್ಆರ್
(ಕಾರ್ಪೊರೇಟ್ ಸೋಷಿಯಲ್
ರೆಸ್ಪಾನ್ಸಿಬಿಲಿಟಿ) ಅನುದಾನಗಳು ಹಾಗೂ
ಇತರೆ ನೆರವುಗಳು ಪರಿಸರ ಹಾಗೂ ಸಮಾಜದ ಮೇಲೆ ಉದ್ಯಮ ಲೋಕ ಬೀರಿರುವ ಭಾರೀ
ದುಷ್ಪರಿಣಾಮಗಳ ಮುಂದೆ ತೃಣಸಮಾನ ಅಷ್ಟೇ.
ಆದರೂ, ಅಂಥ ಮಾರಕ ಪರಿಣಾಮಗಳ ನಡುವೆಯೂ
ಕೆಲವು ಜಾಗತಿಕ ಉದ್ಯಮಸಂಸ್ಥೆಗಳು ಹಾಗೂ ವಾಣಿಜ್ಯೋದ್ಯಮಿಗಳು ಪರಿಸರ ಹಾಗೂ
ಸಮಾಜದ ಬಗ್ಗೆ ತೋರುತ್ತಿರುವ ಕಾಳಜಿ ಗಮನಾರ್ಹ.
ಅವರ ವೈಯಕ್ತಿಕ ನೆರವು ಸಿಎಸ್ಆರ್ಗೂ ಉಪಯುಕ್ತವಾದದ್ದು
ಮಾತ್ರವಲ್ಲದೆ ಸ್ವತಃ ಸಿಎಸ್ಆರ್ ತನ್ನಲ್ಲೇ ಹಲವು ಉತ್ತಮ ಬದಲಾವಣೆಯನ್ನೂ
ಕಂಡುಕೊಂಡಿತು. ಎಲ್ಲಕ್ಕಿಂತ ಹೆಚ್ಚಾಗಿ ಈ
ವೈಯಕ್ತಿಕ ನೆರವುಗಳು ಇತರ ಉದ್ಯಮ ಸಂಸ್ಥೆಗಳ ಆರಾಧನೆಗೂ ಪಾತ್ರವಾಯಿತು.
ಬ್ರಿಟನ್ ಮುಂತಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಚಿಂತಕರ
ಚಾವಡಿ ಕ್ರಿಯಾತ್ಮಕ ಸಿಎಸ್ಆರ್ ರೂಪಿಸುವ ಮೂಲಕ ಉದ್ಯಮಗಳಿಗೆ ಸಹಾಯಹಸ್ತ
ಚಾಚುತ್ತವೆ ಎಂಬ ವರದಿಗಳು ಆಗಾಗ್ಗೆ ಬರುತ್ತವೆ.
ಅಲ್ಲದೆ ಅಮೆರಿಕದ ಎಲ್ಲಾ ಪ್ರಮುಖ ಉದ್ಯಮ ಸಂಸ್ಥೆಗಳು ಸಿಎಸ್ಆರ್ಗೆ
ತಮ್ಮ ಸಮೃದ್ಧ ದೇಣಿಗೆ ನೀಡುತ್ತವೆ. ಸಿಎಸ್ಆರ್
ಎಂಬುದು ಸಾಮಾಜಿಕ ಕಾಳಜಿಯಂತೆ ಕಂಡುಬಂದರೂ ಬಹುತೇಕ ಸಂದರ್ಭಗಳಲ್ಲಿ ಯಾವ
ಕೆಲಸಕ್ಕೂ ಬಾರದ ನೆನೆಗುದಿಗೆ ಬಿದ್ದ ಯೋಜನೆಯೊಂದರಂತೆ ಕಂಡು ಬರುವುದೇ
ಹೆಚ್ಚು. ಮಾದರಿ ಕೆಲಸ ಎಂದೆನಿಸಬೇಕಾದರೆ
ಗುರಿಗೂ ಮೀರಿದ ಸಾಧನೆ ಮಾಡಬೇಕಾಗುತ್ತದೆ.
ಕಾರ್ಪೊರೇಟ್ ಪ್ರತಿಷ್ಠೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಿಎಸ್ಆರ್ನಲ್ಲಿ
ಸಂಸ್ಥೆಯ ಸಾಧನೆಯಲ್ಲದೆ ಬೇರೇನೂ ಗಮನಾರ್ಹವಾಗುವುದಿಲ್ಲ ಎಂಬುದನ್ನು
ನೀಲ್ಸೆನ್ನಂಥ ಸಂಸ್ಥೆಗಳು ತಮ್ಮ ನೀಲ್ಸೆನ್ ಕಾರ್ಪೊರೇಟ್ ಇಮೇಜ್ ಮಾನಿಟರ್
2007 (ಸಿಐಎಂ)
ಮೂಲಕ ತೋರಿಸಿವೆ.
ಭಾರತದ ಸಿಎಸ್ಆರ್ಗೂ ಜಾಗತಿಕ ಸಿಎಸ್ಆರ್ಗೂ
ಅಜಗಜಾಂತರವಿದೆ. ಸಿಎಸ್ಆರ್ ಎಂಬುದು
ಅರ್ಥವ್ಯವಸ್ಥೆ, ಸಮಾಜ ಹಾಗೂ ಪರಿಸರದ
ನಡುವಿನ ಸಮತೋಲನ ಕಾಯ್ದುಕೊಳ್ಳುವಿಕೆ ಹಾಗೂ ಸಂಸ್ಥೆಯೊಂದರ ಪ್ರತಿಷ್ಠೆಯ
ಪ್ರತೀಕವಾಗಿರುವಾಗ ನಮ್ಮ ದೇಶದಲ್ಲಿ ಇದರ ಅಗತ್ಯವಿದೆಯೇ ಎಂಬ ಪ್ರಶ್ನೆ
ಉದ್ಭವಿಸುವಷ್ಟರ ಮಟ್ಟಿಗೆ ಸಿಎಸ್ಆರ್ ಸೊರಗಿದೆ.
ಸಿಎಸ್ಆರ್ಗೆ ಗಮನಾರ್ಹ ದೇಣಿಗೆ ನೀಡುವ ಕೆಲವೇ ಕೆಲವು ಭಾರತೀಯ
ಕಂಪನಿಗಳನ್ನು ಬಿಟ್ಟರೆ ಬೇರೆಲ್ಲಾ ಕಂಪನಿಗಳು ನೀಡುತ್ತಿರುವ ನೆರವು
ನೆಪಮಾತ್ರ. ವರದಿಗಳ ಪ್ರಕಾರ ರಿಲೈಯನ್ಸ್
ಇಂಡಸ್ಟ್ರೀಸ್ ಹಾಗೂ ಎಂ ಆಂಡ್ ಎಂ ಸಿಎಸ್ಆರ್ಗೆ ನೀಡುತ್ತಿರುವ ಮೊತ್ತ
ಕ್ರಮವಾಗಿ ತಮ್ಮ ಆದಾಯದ ಶೇ.0.4
ಹಾಗೂ ಶೇಕಡಾ ಒಂದರಷ್ಟು ಮಾತ್ರ.
'ಕರ್ಮಯೋಗ್ ಸಿಎಸ್ಆರ್ ರೇಟಿಂಗ್'
ಗುರುತಿಸಿದ ಭಾರತದ ಮೊದಲ 500 ಬೃಹತ್
ಸಂಸ್ಥೆಗಳು (2006-2007)
ಕನಿಷ್ಠ ಶೇ.
0.02ರಷ್ಟು
ಅಂಶವನ್ನು ಸಿಎಸ್ಆರ್ಗೆ ನೀಡಿದ್ದರೂ 2900
ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಅದೇ
ಸಮೀಕ್ಷೆಯ ಪ್ರಕಾರ ಮೊದಲ 500 ಬೃಹತ್
ಸಂಸ್ಥೆಗಳ ಪಟ್ಟಿಯಲ್ಲಿದ್ದ ಯಾವುದೇ ಒಂದು ಕಂಪನಿಯೂ
5ರಲ್ಲಿ 5
ಅಂಕಗಳನ್ನು ಪಡೆದಿಲ್ಲ. ಅಲ್ಲದೆ
5ರಲ್ಲಿ ನಾಲ್ಕು ಅಂಕಗಳನ್ನು ಪಡೆಯುವಲ್ಲಿ
ಸಫಲವಾಗಿದ್ದು ಶೇಕಡಾ ಒಂದರಷ್ಟು ಕಂಪನಿಗಳು (ಕೇವಲ
ನಾಲ್ಕು ಕಂಪನಿಗಳು) ಮಾತ್ರ.
ಭಾರತೀಯ ಉದ್ಯಮ ಲೋಕದಲ್ಲಿ ಇಂಥ ಉದಾಹರಣೆಗಳು
ಇಲ್ಲವೆಂದೇನಲ್ಲ. ಟಾಟಾ ಹಾಗೂ
ಹಿಂದೂಸ್ತಾನ್ ಯುನಿಲೆವರ್ ಮುಂತಾದ ಸಂಸ್ಥೆಗಳು 'ಮಾನವಪ್ರೇಮ'
ಎಂಬ ಸಿದ್ಧಾಂತಕ್ಕೂ ಮೀರಿದ ಸಾಧನೆ ಮಾಡಿವೆ.
ಈ ಸಂದರ್ಭದಲ್ಲಿ ಐಐಪಿಎಂ- ಪ್ಲಾನ್ಮನ್
ಸಿಬ್ಬಂದಿ ತಮ್ಮ ಸಂಸ್ಥೆಯ ಸಮಾಜಸೇವಾ ವಿಭಾಗ 'ಗ್ರೇಟ್
ಇಂಡಿಯನ್ ಡ್ರೀಂ ಫೌಂಡೇಷನ್'
(ಜಿಐಡಿಎಫ್)ಗೆ ತಿಂಗಳ ವೇತನದ ಶೇ.ಒಂದರಿಂದ
ಶೇ.೩ರಷ್ಟು ನೀಡುವ ಮೂಲಕ ಸಿಎಸ್ಆರ್ಗೆ
ನೆರವು ನೀಡುತ್ತಿದ್ದಾರೆ. ಅಲ್ಲದೆ
ಜಿಐಡಿಎಫ್ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಸಮಾಜ ಹಾಗೂ ಪರಿಸರಪರ ಕಾರ್ಯ
ನಿರ್ವಹಿಸುತ್ತದೆ ಎಂಬುದು ಹೆಮ್ಮೆಯ ಸಂಗತಿ.
ತಾವು ನೀಡುವ ಸಿಎಸ್ಆರ್ ಅಂಶವೇ
ಭವಿಷ್ಯದಲ್ಲಿ ಉತ್ತಮ ಮಾರುಕಟ್ಟೆ ಒದಗಿಸುತ್ತದೆ ಎಂಬುದನ್ನು ಭಾರತೀಯ
ಉದ್ಯಮ ಅರಿಯಬೇಕಿದೆ. ನನ್ನ ವಾದಗಳು
ಸಾಲುವುದಿಲ್ಲ ಎಂದಾದರೆ ಸಂಸ್ಥೆಯ ಹವಾನಿಯಂತ್ರಿತ ಕೊಠಡಿಯಲ್ಲಿ ನಿದ್ದೆ
ಹೊಡೆಯುತ್ತಿರುವ ವ್ಯವಸ್ಥಾಪಕ ನಿರ್ದೇಶಕರು ಉತ್ಕಲ್ ಅಲ್ಯುಮಿನ,
ವೇದಾಂತ ರಿಸೋರ್ಸಸ್, ಮಾನ್ಸ್ಯಾಂಟೊ,
ಯೂನಿಯನ್ ಕಾರ್ಬೈಡ್ ಮುಂತಾದ ಸಂಸ್ಥೆಗಳ ಬಗ್ಗೆ ಓದಲಿ!
ಐಐಪಿಎಂ
'ಥಿಂಕ್ ಟ್ಯಾಂಕ್'
|