|
ಅಬಲೆ ಪ್ರೀತಿ!
ಡಿಂಪಲ್ ಕೆನ್ನೆಗಳ ದಿಟ್ಟೆ ಪ್ರೀತಿ ಜಿಂಟಾ ಈಗ ಅಬಲೆ! ಹೌದು ಕಣ್ರೀ, ದೀಪಾ ಮೆಹ್ತಾ ಅವರ 'ಹೆವೆನ್ ಆನ್ ಅರ್ತ್' ಚಿತ್ರದಲ್ಲಿ ಕ್ರೂರ ಪತಿಯ ಸಾದ್ವಿ ಪಂಜಾಬಿ ಪತ್ನಿಯಾಗಿ ಎಲ್ಲ ಕಷ್ಟಕೋಟಲೆಗಳನ್ನೂ ಸಹಿಸಿದ್ದಾಳೆ ಪ್ರೀತಿ. ಪಂಜಾಬ್ 'ಐಪಿಎಲ್' ತಂಡದ ಒಡತಿಯಾಗಿದ್ದರೂ ಪಂಜಾಬಿ ಬಾರದ ಪ್ರೀತಿ, ಈ ಚಿತ್ರಕ್ಕಾಗಿ ವಿಶೇಷ ಆಸಕ್ತಿಯಿಂದ ಭಾಷೆ ಕಲಿತಿದ್ದಾಳೆ. ಹಾಗೆಯೇ ಕೌಟುಂಬಿಕ ದೌರ್ಜನ್ಯ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆಯೂ ಅಧ್ಯಯನ ಮಾಡಿದ್ದಾಳೆ. ಇದೆಲ್ಲದರ ಫಲಿತಾಂಶ ನಟನೆಯಲ್ಲಿ ಕಂಡು ಬಂದಿದೆ. ಇಂತಹ ಅದ್ಭುತ ನಟಿ ಜೊತೆ ನಾನು ಈವರೆಗೆ ಕೆಲಸ ಮಾಡಿಲ್ಲ ಎಂದು ಹೊಗಳಿ ಹೊನ್ನ ಶೂಲಕ್ಕೇರಿಸಿದ್ದಾರೆ ನಿರ್ದೇಶಕಿ ದೀಪಾ.

ಜಸ್ಟ್ ಫ್ರೆಂಡ್
ಪ್ರೀತಿಗೆ ಮೂರನೇ ಆಯಾಮ ಇಲ್ಲದೆ ಹೋದರೆ ಏನು ಚೆನ್ನ? ಡ್ರ್ಯೂ ಬ್ಯಾರಿಮೋರ್ ಮತ್ತು ಜಸ್ಟಿನ್ ಲಾಂಗ್ ಇತ್ತೀಚೆಗಷ್ಟೇ ಬೇರ್ಪಟ್ಟಿದ್ದಾರೆ. ಇಂಥ ಮಿಲಿಯನ್ ಡಾಲರ್ ಅವಕಾಶವನ್ನು ಯಾರು ಬಿಟ್ಟಾರು? ಹಾಗಾಗಿ ಸ್ಪೈಡರ್ ಬೆಡಗಿ ಕ್ರಿಸ್ಟಿನ್ ಡನ್ಸ್ಟ್ ಚಂಗನೆ ಆ ಜಾಗಕ್ಕೆ ಜಿಗಿದಿದ್ದಾಳೆ. 'ನಾವಿಬ್ಬರು ಒಳ್ಳೇ ಗೆಳೆಯರು' ಎನ್ನುತ್ತಲೇ ಕೈಹಿಡಿದು ಚುಂಬಿಸುತ್ತಾ ಜಸ್ಟಿನ್ನ ಘಾಸಿ ಹೃದಯಕ್ಕೆ ಕ್ರಿಸ್ಟಿನ್ ಮುಲಾಮು ಹಚ್ಚಲಾರಂಭಿಸಿದ್ದಾಳೆ. ಅದೇನೇ ಇರಲಿ, ಡ್ರ್ಯೂ ಜೊತೆ ಹತ್ತು ತಿಂಗಳು ಓಡಾಡಿದ್ದ ಜಸ್ಟಿನ್ ಮೇಲೆ ಗತ ಕಾಲದಿಂದಲೇ ಕಣ್ಣು ಹಾಕಿದ್ದ ಕ್ರಿಸ್ಟಿನ್ಗಂತೂ ಬಯಸಿದ ಭಾಗ್ಯ ಕೈಗೆಟಕಿದಂತಾಗಿದೆ.
ಹೂವಿನೊಂದಿಗೆ ನಾರೂ...
'ಎಕ್ಸ್ಕ್ಯೂಸ್ ಮಿ' ಚಿತ್ರ ಯಶಸ್ವಿಯಾದರೂ ನಾಯಕ ಅಜಯ್ ಲಕ್ ಮಾತ್ರ ತಿರುಗಲೇ ಇಲ್ಲ. 'ಗ್ರೀನ್ ಸಿಗ್ನಲ್', 'ಓ ಪ್ರಿಯತಮ', 'ಹೆತ್ತರೆ ಹೆಣ್ಣೇ ಹೆರಬೇಕು'... ಅಂತ ಸಾಲು ಸಾಲು ಚಿತ್ರಗಳು ಪ್ಲಾಪ್ ಆಗಿದ್ದೇ ಬಂತು, ಪಾಪ! ಆದರೆ ಅದೇನು ಅದೃಷ್ಟವೋ, ಈಗ ಅಜಯ್ ಅಭಿನಯದ 'ತಾಜ್ ಮಹಲ್' ಇಂಗ್ಲೆಂಡ್ನಲ್ಲೂ ಬಿಡುಗಡೆಯಾಗುತ್ತಿದೆ. ಸಾಲು ಸಾಲು ಪ್ಲಾಪ್ಗಳಿಂದ ಬೇಸತ್ತಿರುವ ಅಜಯ್ ಈಗ ಯಶಸ್ಸಿಗಾಗಿ ಕಂಡ ಕಂಡ ದೇವರಿಗೆಲ್ಲಾ ಮೊರೆ ಇಡುತ್ತಿದ್ದಾನೆ. ಟಾಪ್ ತಾರೆ ರಮ್ಯಾ ನೀಡಿದ ಯಶಸ್ಸನ್ನು ಮಳೆ ತಾರೆ ಪೂಜಾಗಾಂಧಿ ಪುನರಾವರ್ತಿಸುವಳೆ? ಹಾಗೇನಾದರೂ ಆದರೆ...? ಹೂವಿನೊಂದಿಗೆ ನಾರೂ ಸ್ವರ್ಗ ಸೇರುತ್ತೆ!
ಮಲ್ಲಿಕಾ ಈಗ ನಾಗಕನ್ಯೆ

ಅಬ್ಬಾ! ನಾಗ-ನಾಗಿಣಿಯರ ಚಿತ್ರವನ್ನು ನೋಡೋ ಕರ್ಮ ಈಗಿಲ್ಲ ಅಂತ ನಿಟ್ಟುಸಿರು ಬಿಡಬೇಡಿ. ಹೊಸ ಸುದ್ದಿಯೊಂದು ಬಂದಿದೆ... ಮಾದಕ ನಟಿ ಮಲ್ಲಿಕಾ ನಾಗಕನ್ಯೆಯಾಗುತ್ತಿದ್ದಾಳೆ! 'ನಾಗಿನ್- ದ ಸ್ನೇಕ್ ಉಮೆನ್' ಚಿತ್ರದ ನಾಯಕಿಯಾಗಲು ಎಸ್ ಅಂದಿದ್ದಾಳೆ ಈ ಬಾಲಿವುಡ್ ಬಾಂಬ್ಶೆಲ್. ಅದೆಲ್ಲಾ ಸರಿ. ಮಲ್ಲಿಕಾ ಎಂಬ ಮಾದಕ ಕನ್ಯೆ, ಹೋಗಿ ಹೋಗಿ ಇಂತಹ ಸಿ-ಗ್ರೇಡ್ ಚಿತ್ರದಲ್ಲಿ ಯಾಕಪ್ಪಾ ನಟಿಸುತ್ತಿದ್ದಾಳೆ ಅಂದ್ಕೊಂಡ್ರಾ? ಕಾರಣವಿದೆ ಸ್ವಾಮಿ. ಹಾಲಿವುಡ್ ನಿರ್ದೇಶಕ ಜೆನ್ನಿಫರ್ ಲಿಂಚ್ ನಿರ್ದೇಶನದ ಚಿತ್ರವಿದು. ಈ ಚಿತ್ರದಲ್ಲಿ ಸಖತ್ ಗ್ರಾಫಿಕ್ ಬೇರೆ ಬಳಸುತ್ತಿದ್ದಾರೆ. ಯಾವ ಡಬ್ಬಾ ಚಿತ್ರವಾದರೆ ಏನು ಶಿವ? ಪಡ್ಡೆ ಹುಡುಗರಿಗೆ ಮಲ್ಲಿಕಾಳ ಬಳುಕುವ ಸೊಂಟದ ಕರಾಮತ್ತು ಸವಿಯೋ ಸೂಪರ್ ಅವಕಾಶ ಸಿಕ್ಕಿದೆ ಬಿಡಿ.
ಎಲ್ಲಾ ಬಲ್ಲ ಹುಡುಗ...
ಸುರಸಂದರಾಂಗ. ಹುಡುಗಿಯರ ಹೃದಯ ಗೆದ್ದ ಚೋರ, ಅದ್ಭುತ ನಟ, ಸ್ಫೂರ್ತಿಯೇ ಮೈತಳೆದಂತಹ ಸೂಪರ್ ಹೀರೋ. ಮಹಾನ್ ನೃತ್ಯ ಪಟು. ಇಷ್ಟೆಲ್ಲಾ ವಿಶೇಷಣಗಳಿರೋ ಹೃತಿಕ್ ಈಗ ಸ್ವಂತ ಬ್ಯಾನರ್ ನಿರ್ಮಾಣದ 'ಕೈಟ್ಸ್' ಚಿತ್ರಕ್ಕೆ ಗಾಯಕನಾಗುತ್ತಿದ್ದಾನೆ! ಈ ಹಿಂದೆ ಬಿಗ್-ಬಿ, ಅಮೀರ್ ಖಾನ್, ಶಾರುಖ್ ಖಾನ್ ತಮ್ಮ ಕಂಠ ಸಾಮರ್ಥ್ಯ ಪ್ರದರ್ಶಿಸಿದ್ದರು. ಅಂದರೆ, ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಅಂದಿರಾ? ಆದ್ರೆ ನಮ್ ಸೂಪರ್ ಹೀರೋ ಅವರನ್ನೆಲ್ಲಾ ಮೀರಿಸಿದ್ದಾನೆ. ಈ ಚಿತ್ರಕ್ಕಾಗಿ ಅಮೆರಿಕನ್ ಇಂಗ್ಲಿಷ್ ಉಚ್ಚಾರಣೆಯನ್ನು ಕಲಿತಿದ್ದಾನೆ ಹೃತಿಕ್. ಯಾಂಕಿಗಳಂತೆ ನಾಲಗೆ ತಿರುಚಿ ಮಾತನಾಡೋ ನಮ್ ಹುಡುಗನ್ನ ನೋಡೋ ಸೌಭಾಗ್ಯ ಸದ್ಯದಲ್ಲೇ ಅಭಿಮಾನಿಗಳಿಗೂ ಸಿಗಲಿದೆ. ಇದಕ್ಕೇ ತಾನೆ ಹೃತಿಕ್ ಎಲ್ಲರಿಗಿಂತ ಭಿನ್ನ ಅನ್ನೋದು?
ರಾಧಿಕಾ ಧಿಮಾಕು?
ನಟಿಯರ ಕೊರತೆ ಎದುರಿಸುತ್ತಿದ್ದ ಸ್ಯಾಂಡಲ್ವುಡ್ಗೆ 'ಮೊಗ್ಗಿನ ಮನಸ್ಸು' ಮೂಲಕ ಪ್ರತಿಭಾನ್ವಿತ ನಟಿಯೊಬ್ಬಳ ಪ್ರವೇಶವಾಗಿದೆ. ಈಕೆ ರಾಧಿಕಾ ಪಂಡಿತ್. ಅಚ್ಚ ಕನ್ನಡತಿ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಡ್ತಿ ಪಡೆದಿರುವ ಈ ಮುದ್ದು ಮೊಗದ ಬೆಡಗಿ ಹದಿಹರೆಯದ ಹುಚ್ಚು ಮನಸ್ಸಿನ ಹತ್ತು ಮುಖಗಳ ಭಾವಾಭಿವ್ಯಕ್ತಿಯಲ್ಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾಳೆ. 'ಮೊಗ್ಗಿನ ಮನಸ್ಸು' ಚಿತ್ರ ಬಿಡುಗಡೆಯಾಗೋ ಮೊದಲೇ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಒಲವೇ ಜೀವನ ಲೆಕ್ಕಾಚಾರ'ಕ್ಕೆ ನಾಯಕಿಯಾಗೋ ಲಕ್ ರಾಧಿಕಾಗೆ ದಕ್ಕಿತ್ತು. ಆದರೆ ಈಗ ಹಾಸ್ಯನಟ ಕೋಮಲ್ ಜೊತೆ ನಟಿಸಲು ಒಪ್ಪಲ್ಲ ಅಂದಿದ್ದೇ ತಡ, 'ಧಿಮಾಕಿನ ಹುಡುಗಿ' ಎಂಬ ಕುಖ್ಯಾತಿಯೂ ರಾಧಿಕಾಗೆ ಅಂಟಿಕೊಂಡು ಬಿಟ್ಟಿದೆ. ಪಾಪ! ಅಭಿನಯಕ್ಕೆ ಪ್ರಾಶಸ್ತ್ಯವಿರುವ ಚಿತ್ರಗಳು ಮಾತ್ರ ಬೇಕು ಅನ್ನೋದು ಈ ಪಂಡಿತೆಯ ಆಕಾಂಕ್ಷೆ!
ಪೂಜಾ ಖುಷಿ
ಈಗೀಗ ಪೂಜಾ ಗಾಂಧೀನ ಹಿಡಿಯೋರೇ ಇಲ್ರಪ್ಪೋ! ಈಜುಡುಗೆ ತೊಟ್ಟು ಭರ್ಜರಿ ಪೋಸ್ ಕೊಟ್ಟು ಖುಷಿ ಪಡ್ತಿರೋದಿಕ್ಕೆ ಹೀಗೆಲ್ಲಾ ಹೇಳೋದಲ್ರಿ. 'ಮುಂಗಾರು ಮಳೆ' ನಂತರ ಬರೀ ವಿಶೇಷ ಪಾತ್ರ ಮತ್ತು ಅಭಿನಯಕ್ಕೆ ಅವಕಾಶವಿಲ್ಲದ ಬೆರಳೆಣಿಕೆಯ ಚಿತ್ರಗಳಷ್ಟೆ ಸಿಕ್ಕರೂ ಈಕೆಯ ಪ್ರಸಿದ್ಧಿಗೆ ಕೊರತೆ ಇರಲಿಲ್ಲ. 'ಟಾಟಾ ಬಿರ್ಲಾ', 'ಕೋಡಗನ ಕೋಳಿ ನುಂಗಿತ್ತ್ತ' ಅಂತ ಕುಣೀತಿದಾಳಲ್ಲಾ... ಅಂತ ಬೇಜಾರು ಪಡೋರೆ ಆಗಿತ್ತು. ಇದೆಲ್ಲಾ ಮುಗಿದ ಕಾಲ. ನೋಡ್ತಿರಿ, ಇನ್ನು ಮುಂದೆ ಪೂಜಾ ಸಖತ್ ಮಿಂಚಲಿದ್ದಾಳೆ. 'ಅನು', 'ತಾಜ್ಮಹಲ್', 'ಮಹರ್ಷಿ', 'ನಿನಗಾಗಿ ಕಾದಿರುವೆ'... ಹೀಗೆ ಪೂಜಾ ವಿಭಿನ್ನ ಪಾತ್ರಗಳಲ್ಲಿ ನಟಿಸಿರೋ ಸಾಲು ಸಾಲು ಚಿತ್ರಗಳು ಬರಲಿವೆ. ಕಣ್ಣಿಗೆ ಎಣ್ಣೆ ಬಿಟ್ಟು ಕಾದಿರಿ!
ಎನ್.ಕೆ. ಸುಪ್ರಭಾ, ಕನ್ನಿಕಾ ಧೂಪರ್ ಹಾಗೂ ನೇಹಾ ಸರೀನ್
|