ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪರಿಸರ ಅರಿವು
 
ಸರ್ವನಾಶಕ್ಕೆ ಮುನ್ನ ಸಂರಕ್ಷಣೆಗೆ ಸಜ್ಜಾಗಿ
 

ವನ್ಯಜೀವಿಗಳ ಬದುಕಿನ ಭರವಸೆ ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳಲ್ಲಿದೆ

 
ಡಾ.ಎಚ್.ಎಸ್. ಸಿಂಗ್ (ಐಎಫ್‌ಎಸ್)

ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಗುಜರಾತ್

ಚೀನಾ ಮತ್ತು ಅಮೆರಿಕದ ಮೂರನೇ ಒಂದು ಭಾಗದಷ್ಟಿರುವ ಭೂಮಿಯಲ್ಲಿ ಬರೋಬ್ಬರಿ ಒಂದು ಬಿಲಿಯನ್ ಭಾರತೀಯರು ತುಂಬಿಕೊಂಡಿದ್ದರೂ, ಜಗತ್ತಿನ ಸಮೃದ್ಧ ರಾಷ್ಟ್ರದಲ್ಲಿ ವನ್ಯಜೀವಿಗಳ ಗಣತಿಯೂ ಉತ್ತಮವಾಗೇ ಇದೆ. ಇದಕ್ಕೆ ಕಾರಣ ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳಲ್ಲಿ ಅಡಗಿರುವ ಹಸಿರು ಪ್ರೀತಿ. ನಮ್ಮ ಪುರಾಣಗಳು, ಪುರಾತನ ಕಲೆ, ಸಾಹಿತ್ಯ, ಜನಪದ, ಧರ್ಮ, ಶಿಲ್ಪ ಶಾಸನಗಳು ಮತ್ತು ಲಿಪಿಗಳು ಎಲ್ಲವೂ ಭಾರತೀಯ ಪುರಾತನ ಇತಿಹಾಸದಲ್ಲಿ ವನ್ಯಜೀವಿಗಳ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಬರೆಯಲಾದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಮೌರ್ಯ ವಂಶದ ಆಡಳಿತಾವಧಿಯಲ್ಲಿ ಕೆಲವು ದಟ್ಟ ಅರಣ್ಯಗಳನ್ನು ಈಗಿನ ಮಾದರಿಯಲ್ಲೇ ಅಭಯಾರಣ್ಯಗಳೆಂದು ಘೋಷಿಸಿ ಸಂರಕ್ಷಿಸಿರುವ ಉಲ್ಲೇಖವಿದೆ. ಆಗ ಆನೆಗಳು, ಕಾಡುಕೋಣ, ಕೆಲವು ಜಾತಿಯ ಜಿಂಕೆಗಳು ಹಾಗೂ ಪಕ್ಷಿಗಳು ಮತ್ತಿತರ ವನ್ಯಜೀವಿಗಳನ್ನು ಬೇಟೆಯಾಡಿದರೆ ಅಥವಾ ಬಂಧಿಸಿದರೆ ಅಧಿಕ ಪ್ರಮಾಣದ ದಂಡ, ಕಠಿಣ ಶಿಕ್ಷೆ ವಿಧಿಸುವ ಕಾನೂನು ಇತ್ತು.

ಪುರುಷೋಪನಿಶತ್‌ನಲ್ಲಿ 'ಅಹಿಂಸೋ ಪರಮೋ ಧರ್ಮ' ಎನ್ನಲಾಗಿದೆ. ಎಲ್ಲಾ ಶ್ರೇಷ್ಠ ಭಾರತೀಯರು ಇದನ್ನು ಪಾಲಿಸಿದ್ದಾರೆ. ಮಹಾವೀರ ಜೈನ್, ಗೌತಮ ಬುದ್ಧ, ಮಹಾತ್ಮಾ ಗಾಂಧಿ ಮತ್ತು ಇನ್ನೂ ಅನೇಕರು. ಇದರಿಂದ ಮನುಕುಲ ಮತ್ತು ಪ್ರಾಣಿಗಳು ಶಾಂತಿ ಮತ್ತು ಸಹಬಾಳ್ವೆ ನಡೆಸಲು ಪ್ರೇರೇಪಣೆ ಸಿಕ್ಕಿತ್ತು. ಪ್ರಾಣಿಗಳು ಮತ್ತು ಪಕ್ಷಿಗಳ ರಕ್ಷಣೆ ಪವಿತ್ರ ಕಾರ್ಯ ಎಂದು ತಿಳಿಯಲಾಗಿತ್ತು. ಅರಣ್ಯದಲ್ಲಿ ಕಲಿಕಾ ಕೇಂದ್ರಗಳಾಗಿದ್ದ ಋಷಿಗಳ ಆಶ್ರಮಗಳಿಗೆ ಪ್ರಾಣಿಗಳು ದೌರ್ಜನ್ಯದ ಭಯವಿಲ್ಲದೆ ಪ್ರವೇಶಿಸುತ್ತಿದ್ದವು. ಪುರಾತನ ಭಾರತೀಯ ಸಾಹಿತ್ಯದ ಭಾಗಗಳಾಗಿರುವ ವೇದಗಳು, ರಾಮಾಯಣ, ಮಹಾಭಾರತ, ಉಪನಿಷತ್‌ಗಳು, ಪುರಾಣಗಳು, ಅರ್ಥಶಾಸ್ತ್ರ ಮತ್ತು ಪಂಚತಂತ್ರ ಕಥೆಗಳು ಮಾನವ ಸಮಾಜದ ಮೇಲೆ ಅರಣ್ಯಗಳ ಪ್ರೇರಣೆಯ ಬಗ್ಗೆ ವಿವರಿಸುತ್ತವೆ. ಭಾರತೀಯರು ಹಿಂದಿನಿಂದಲೂ ಪ್ರಕೃತಿಯನ್ನು ಗೌರವಿಸುತ್ತಿದ್ದರು. ಸರ್ಪ ವಿಷ ಕಾರುವ ಸರೀಸೃಪ. ಆದರೆ ಸರ್ಪಗಳ ಸಂತಾನೋತ್ಪತ್ತಿ ಸಮಯವಾದ ಮುಂಗಾರು ಸಮಯದಲ್ಲಿ ಬಹುತೇಕ ಹಿಂದೂ ಕುಟುಂಬಗಳು ಸರ್ಪಕ್ಕೆ ಹಾಲೆರೆಯುವ ಮೂಲಕ ತಮ್ಮ ಗೌರವವನ್ನು ತೋರುತ್ತಾರೆ. ಫಸಲುಗಳಿಗೆ ವಿಪರೀತ ಸಮಸ್ಯೆಗಳನ್ನು ತಂದೊಡ್ಡುತ್ತಿವೆಯಾದರೂ ದೇಶದ ಬಹುತೇಕ ರಾಜ್ಯಗಳಲ್ಲಿ ಕೃಷ್ಣಮೃಗ, ಕಾಡುಕೋಣ, ನವಿಲು, ಕೊಕ್ಕರೆಗಳಿಗೆ ಅಪಾಯವೊಡ್ಡುವ ಮಾತಿರಲಿ, ಅವುಗಳನ್ನು ಸಂರಕ್ಷಿಸುವ ಪರಂಪರೆ ನಮ್ಮದು.

ಭಾರತದ ಪ್ರಭಾವೀ ಮಹಾರಾಜರಲ್ಲಿ ಒಬ್ಬರಾಗಿರುವ ಅಶೋಕ ವನ್ಯಜೀವಿಗಳ ಸಂರಕ್ಷಕ. ಅಶೋಕನ ಆಡಳಿತಾವಧಿಯಲ್ಲಿ ಬಂಡೆಗಳ ಮೇಲೆ ಕೆತ್ತಲಾದ ಹದಿನಾಲ್ಕು ಶಾಸನಗಳು, ಸ್ತೂಪಗಳ ಮೇಲೆ ಕೆತ್ತಿದ ಅನೇಕ ಶಾಸನಗಳು ಮತ್ತು ಸಣ್ಣ ಪುಟ್ಟ ಕೆತ್ತನೆಗಳಲ್ಲಿ ಆ ಕಾಲದ ಆಡಳಿತ, ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳು ಧರ್ಮದ ರೂಪದಲ್ಲಿ ಪ್ರಾಣಿ ರಕ್ಷಣೆಗೆ ಮುಂದಾಗುವ ಬದ್ಧತೆಯನ್ನು ತೋರಿಸಿರುವುದಕ್ಕೆ ಸಾಕ್ಷಿಗಳಾಗಿವೆ.

ವಿದೇಶಿ ಆಕ್ರಮಣಕಾರರು ಭಾರತೀಯ ಅರಣ್ಯಗಳು ಮತ್ತು ಅಲ್ಲಿನ ಜೀವವೈವಿಧ್ಯದ ಹಾನಿಗೆ ಕಾರಣರಾದರು. ಬ್ರಿಟಿಷ್ ಕಾಲದಲ್ಲಿ ಬೇಟೆಯಾಡುವ ಹವ್ಯಾಸದಿಂದಾಗಿ ವನ್ಯಜೀವಿಗಳು ಕಣ್ಮರೆಯಾಗಲಾರಂಭಿಸಿದವು. ಹಾಗಿದ್ದರೂ ಪ್ರಬಲ ಆಂತರಿಕ ಪ್ರತಿರೋಧದಿಂದಾಗಿ ಭಾರತೀಯ ಜೀವವೈವಿಧ್ಯ ಈ ಭೀಕರ ದೌರ್ಜನ್ಯವನ್ನೂ ಎದುರಿಸಿ ನಿಂತಿದೆ. ಕೆಲವು ಪರಿಸರವಾದಿಗಳು ಹೇಳುವ ಪ್ರಕಾರ ಭಾರತದಲ್ಲಿ 20ನೇ ಶತಮಾನದ ಆರಂಭದಲ್ಲಿ ಸುಮಾರು 4 ದಶಲಕ್ಷ ಕೃಷ್ಣ ಮೃಗಗಳಿದ್ದವು. ಆದರೆ 1970ರಲ್ಲಿ ಇದು 40,000ಕ್ಕಿಳಿದಿತ್ತು. ನಂತರದ ದಿನಗಳಲ್ಲಿ ಸತತ ಬೇಟೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆಯೂ ತೀವ್ರವಾಗಿ ಕುಸಿದಿತ್ತು. 20ನೇ ಶತಮಾನದ ಆರಂಭದಲ್ಲಿ 25,000- 40,000ವಿದ್ದ ಹುಲಿಗಳ ಸಂಖ್ಯೆ 1970ರಲ್ಲಿ ಮೊದಲ ಬಾರಿ ಸಂಖ್ಯಾಗಣತಿ ಮಾಡಿದಾಗ ಕನಿಷ್ಟ 1,800ಕ್ಕಿಳಿದಿತ್ತು. 30 ವರ್ಷಗಳ 'ವ್ಯಾಘ್ರ ಯೋಜನೆ'ಯ ಬಳಿಕ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಆರಂಭದಲ್ಲಿ ಇದ್ದಷ್ಟಿಲ್ಲ.

ವನ್ಯಜೀವಿಗಳ ಅವನತಿ ಮತ್ತು ಸಂಖ್ಯೆ ಜಾಗತಿಕವಾಗಿ ಚರ್ಚೆಗೆ ಆಸ್ಪದವಾಗಿದೆ. ಭಾರತದಲ್ಲಿಯೂ ಪರಿಸರದ ಮೇಲೆ ತೀವ್ರ ಸ್ವರೂಪದ ದೌರ್ಜನ್ಯಗಳು ನಡೆದಿವೆ. ಆದರೆ ಪರಂಪರಾಗತ ಭಾರತೀಯ ಶೈಲಿಯ ಸಂರಕ್ಷಣಾ ವಿಧಾನಗಳು ಮೃಗಗಳನ್ನು ರಕ್ಷಿಸಿವೆ. ಕೆಲವು ಪ್ರಮುಖ ವನ್ಯಜೀವಿಗಳ ಕುರಿತ ಈಗಿನ ಗಣತಿ ಈ ಸಿದ್ಧಾಂತಕ್ಕೆ ಪುರಾವೆ ಒದಗಿಸುತ್ತದೆ. ಪ್ರಸ್ತುತ ಅರಣ್ಯದಲ್ಲಿರುವ ಸುಮಾರು 20,000 ಏಷ್ಯಾ ಚಿರತೆಗಳಲ್ಲಿ 13,000- 14,000 ಭಾರತದಲ್ಲಿವೆ. ಸುಮಾರು 45,000 ಏಷ್ಯಾ ಆನೆಗಳಲ್ಲಿ 32,000 ಭಾರತದಲ್ಲಿವೆ. ಹುಲಿಗಳ ಸಂತತಿ ಅಪಾಯವನ್ನು ಎದುರಿಸುತ್ತಿವೆಯಾದರೂ ಅರ್ಧದಷ್ಟು ಜಾಗತಿಕ ಹುಲಿಗಳ ತವರೂರಾಗಿರುವ ಭಾರತದಲ್ಲೇ ಅದಕ್ಕೆ ಭವಿಷ್ಯವಿರುವುದು. ಸುಮಾರು ನೂರು ವರ್ಷಗಳ ಹಿಂದೆ, ಅಂದರೆ 1890ರ ದಶಕದಲ್ಲಿ ಇರಾನ್ ಮತ್ತು ಇರಾಕ್‌ನಲ್ಲಿ ಏಷ್ಯಾ ಸಿಂಹಗಳು ಸಾಮಾನ್ಯವಾಗಿದ್ದು, ಗುಜರಾತ್‌ನ ಗಿರ್ ಅರಣ್ಯದಲ್ಲಿ ಅವಸಾನದ ಅಂಚಿಗೆ ತಲುಪಿದ್ದವು. ಆದರೆ ಕೆಲವು ದಶಕಗಳ ನಂತರ ಅವುಗಳು ಎಲ್ಲಾ ಪ್ರಾಂತ್ಯಗಳಿಂದಲೂ ಕಣ್ಮರೆಯಾದವು. ಆದರೆ ಅಭಯಾರಣ್ಯ ಎಂದು ಘೋಷಿಸಲಾದ ಗಿರ್ ಅರಣ್ಯದಲ್ಲಿ ಮಾತ್ರ ಅವುಗಳ ಸಂಖ್ಯೆ ದ್ವಿಗುಣವಾಯಿತು. ಈಗ ಗಿರ್‌ನಲ್ಲಿ 360 ಸಿಂಹಗಳಿವೆ. ವನ್ಯಜೀವಿಗಳ ಉಳಿವಿನ ಪರಮಾವಧಿ ಎನಿಸಿರುವ ಅಹಿಂಸಾ ತತ್ವ ಮತ್ತು ಪ್ರಕೃತಿಗೆ ಗೌರವ ಸಲ್ಲಿಸುವುದು ನಮ್ಮ ಪರಂಪರೆ ಮತ್ತು ಸಂಸ್ಕೃತಿ. ಇದೇ ಕಾರಣದಿಂದ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ವನ್ಯಜೀವಿಗಳು ಹೆಚ್ಚು.

ನಮ್ಮ ಭೂಮಿಯಲ್ಲಿ ಜನಸಂಖ್ಯಾ ಒತ್ತಡ ಇತರೆಲ್ಲಾ ದೇಶಗಳಿಗಿಂತ ವ್ಯಾಪಕವಾಗಿದ್ದರೂ, ವನ್ಯಜೀವಿಗಳ ಸಂರಕ್ಷಣೆ ಮಾತ್ರ ಹೋಲಿಸಲಸದಳ. ಇದಕ್ಕೆ ತಳಹದಿಯಾದದ್ದು ಭಾರತೀಯ ಸಮಾಜದ ಸಂಸ್ಕೃತಿ ಮತ್ತು ಧಾರ್ಮಿಕ ದೃಢತೆ. ಆದರೆ ಈ ನಮ್ಮ ಪರಂಪರಾಗತ ಮೌಲ್ಯಗಳು ಎಷ್ಟು ದಿನ ಗ್ರಾಹಕೀಕರಣ ಸಂಸ್ಕೃತಿಯ ಪ್ರವಾಹವನ್ನು ತಡೆಹಿಡಿದು ಸುಸ್ಥಿರ ಅಭಿವೃದ್ಧಿಯನ್ನು ನಿಜವಾಗಿಸಬಲ್ಲುದು ಎನ್ನುವುದು ಮಾತ್ರ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಇತ್ತೀಚೆಗಿನ ದಿನಗಳಲ್ಲಿ ತೆಗೆದುಕೊಳ್ಳಲಾದ ಕೆಲವು ನಿರ್ಣಯಗಳು ಸಂರಕ್ಷಣಾ ಪದ್ಧತಿಯನ್ನು ಬೆಂಬಲಿಸಿವೆ. ಹಾಗೆಯೇ ಅಭೂತಪೂರ್ವ ವೇಗದಲ್ಲಿ ನಶಿಸುತ್ತಿದ್ದ ವನ್ಯಜೀವಿಗಳ ಸಂಖ್ಯೆಗೆ ಕಡಿವಾಣ ಹಾಕುವಲ್ಲಿ ಸಫಲವಾಗಿವೆ. 1975ರಿಂದ 2000ವರೆಗಿನ ಸಂರಕ್ಷಣಾ ಯುಗದಲ್ಲಿ ಆಶಾವಾದ ಬೆಳಗಿತ್ತು. ಆದರೆ ನಂತರದ ವರ್ಷಗಳಲ್ಲಿ ತೆಗೆದುಕೊಳ್ಳಲಾದ ಕೆಲವು ನಿರ್ಧಾರಗಳು ಮುಖ್ಯವಾಗಿ 'ಬುಡಕಟ್ಟು ಹಕ್ಕು ಕಾಯ್ದೆ 2006'ರ ನಂತರ ಇವೆಲ್ಲಾ ತಲೆಕೆಳಗಾಗುವ ಲಕ್ಷಣಗಳು ಕಂಡು ಬಂದಿವೆ. ಗ್ರಾಹಕೀಕರಣ, ಆರ್ಥಿಕ ಉದಾರೀಕರಣ, ವಿಶೇಷ ವಿತ್ತ ವಲಯದ ವಿಸ್ತಾರ ಮತ್ತು ಉದ್ಯಮಗಳು, ಅಭಿವೃದ್ಧಿ ಒತ್ತಡದಿಂದ ವಾಸಸ್ಥಾನ ನಾಶ, ಅತಿಕ್ರಮಣ ಮತ್ತು ಬುಡಕಟ್ಟು ಹಕ್ಕು ಕಾಯ್ದೆ ಆಧಾರದಲ್ಲಿ ಅರಣ್ಯ ಪ್ರದೇಶಗಳ ಹಂಚಿಕೆಯಿಂದಾಗಿ ಈಗಿರುವ ವನ್ಯಜೀವಿಗಳ ಉಳಿವು ಕೂಡಾ ಅಸಾಧ್ಯ ಎನ್ನುವ ಸಂಶಯ ಸಂರಕ್ಷಣಕಾರರಿಗೆ ಬರಲಾರಂಭಿಸಿವೆ. ಪ್ರಕೃತಿ ಮತ್ತು ಪರಿಸರದ ಉಪ ಪ್ರಭೇದಗಳಾಗಿರುವ ಹೋಮೋ ಎರಕ್ಟಸ್‌ನಿಂದ ಹೋಮೋ ಸೆಫಿಯನ್ಸ್ ಮತ್ತು ಈಗಿನ 21ನೇ ಶತಮಾನದ ಸೂಪರ್ ಬೌದ್ಧಿಕ ಮನುಷ್ಯರಾಗಿರುವ ಹೋಮೋ ಸೆಫಿಯನ್ಸ್ ಸೂಪರ್- ಇಂಟೆಲಿಜೆನ್ಶಿಯಾಗಳ ಮರ್ಜಿಯನ್ನು ಅನುಸರಿಸಿ ಬದುಕಬೇಕಾದ ಸ್ಥಿತಿ ಇದೆ. ಈ ತಲೆಮಾರಿನ ಮಾನವನ ಸೂಪರ್ ಮೆದುಳು ಪರಂಪರೆ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಅರಿತುಕೊಂಡು ಸರ್ವನಾಶಕ್ಕೆ ಮುನ್ನವೇ ಪ್ರಕೃತಿಯನ್ನು ಕಾಪಾಡಿಕೊಳ್ಳುತ್ತಾನೆ ಎಂಬ ಆಶಯವಷ್ಟೇ ಉಳಿದಿದೆ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .