ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಹಾಗೂ
ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಶಿಬು ಸೊರೆನ್ ನಡುವಿನ ಮಾತುಕತೆಯ
ಸ್ಯಾಂಪಲ್ ಕೇಳಿದರೆ ಸಾಕು, ಯುಪಿಎ ಸರ್ಕಾರ ಕೆಡವಿ ಹೋಗದಿರಲು ಮಾಡಿರುವ
ಸರ್ಕಸ್ಗಳೆಲ್ಲಾ ಬಹಿರಂಗವಾಗುತ್ತವೆ. "ಅಣು ಒಪ್ಪಂದ ಭಾರತಕ್ಕೆ ಅತಿ ಮುಖ್ಯ
ಎನ್ನುವುದು ಎಲ್ಲರಿಗೂ ಗೊತ್ತು. ಹೀಗಾಗಿ ಇಂತಹ ಪ್ರಮುಖ ವಿಷಯಕ್ಕಾಗಿ
ಸರ್ಕಾರ ಉರುಳಬಾರದು. ಆದರೂ ಗಂಭೀರ ವಿಷಯಗಳನ್ನೆಲ್ಲಾ ದೂರವಾಣಿ ಮೂಲಕ
ಚರ್ಚಿಸುವುದು ಉಚಿತವಾಗಿ ಕಾಣಿಸದು. ದಯವಿಟ್ಟು ನೀವು ನಮ್ಮ ಮನೆಗೆ ಒಮ್ಮೆ
ದಯಮಾಡಿಸಬೇಕು" ಎಂದು ಲಾಲೂ ಅವರು ಸೊರೆನ್ ಅವರಿಗೆ ಸೂಚ್ಯ ಆಹ್ವಾನ
ನೀಡಿದ್ದರು.
ಲಾಲೂ ಪ್ರಸಾದ್ ಅವರಂತಹ ವ್ಯಕ್ತಿ ಇಷ್ಟೊಂದು
ಜಾಗರೂಕವಾಗಿ ವ್ಯವಹರಿಸಿದ್ದಾರೆ ಎಂದರೆ ಸೋನಿಯಾ ಗಾಂಧಿ ಅವರ ರಾಜಕೀಯ
ಸಲಹೆಗಾರ ಅಹಮದ್ ಪಟೇಲ್ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್
ಅದೆಂತಹ ಚಾಣಾಕ್ಷತೆ ತೋರಿಸಿರಬಹುದು? ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟದ
ಕೆಲವು ಪಕ್ಷಗಳು ಅಣು ಒಪ್ಪಂದದ ನೆಪದಲ್ಲಿ ಪಕ್ಷವನ್ನು ತೊರೆದು ಹೋಗಲು
ಸಿದ್ಧರಾದಾಗ ಸರ್ಕಾರ ಉಳಿಸಿಕೊಳ್ಳುವ ಕಾಂಗ್ರೆಸ್ನ ಒಣಪ್ರತಿಷ್ಠೆ ಸಣ್ಣ
ಪುಟ್ಟ ಪಕ್ಷಗಳಿಗೆ ಲಾಭದಾಯಕ ಒಡಂಬಡಿಕೆಯಾಗಿದ್ದು ಸುಳ್ಳಲ್ಲ.
ಮೂಲಗಳ ಪ್ರಕಾರ ಸಮಾಜವಾದಿ ಪಕ್ಷ ಮತ್ತು
ಕಾಂಗ್ರೆಸ್ ನಡುವಿನ ಮೈತ್ರಿಗೆ ವೇದಿಕೆ ಸಿದ್ಧವಾಗಿದ್ದು ಕಳೆದ
ನವೆಂಬರ್ನಲ್ಲಿ ಕಾಂಗ್ರೆಸ್ ಪ್ರತಿನಿಧಿಗಳು ಸಮಾಜವಾದಿ ಪಕ್ಷದ
ಪ್ರಮುಖರನ್ನು ಭೇಟಿಯಾದಾಗ. ಅಹಮದ್ ಪಟೇಲ್ ದೆಹಲಿಯ ಹೊರವಲಯದಲ್ಲಿರುವ
ಫಾರ್ಮ್ ಹೌಸ್ ಒಂದರಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್
ಸಿಂಗ್ ಅವರ ಜೊತೆ ಈ ಬಗ್ಗೆ ಚರ್ಚಿಸಿದ್ದರು. ಅಚ್ಚರಿಯೆಂದರೆ ಮುಲಾಯಂ ಸಿಂಗ್
ಅವರ ಕಟ್ಟಾ ರಾಜಕೀಯ ವೈರಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಈ ಚರ್ಚೆಯ
ಪ್ರಮುಖ ಮಧ್ಯವರ್ತಿ. ಎಡಪಕ್ಷಗಳು ಮತ್ತು ವಿರೋಧ ಪಕ್ಷಗಳು ಸರ್ಕಾರದ
ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲು ಸಿದ್ಧರಾದಾಗ, "ಕೂಡಿ ಬಾಳುವ ದಿನಗಳು
ಬಂದಿವೆ" ಎಂಬ ಸಂದೇಶ 10 ಜನಪತ್ನಿಂದ ಸಮಾಜವಾದಿ ಪಕ್ಷಕ್ಕೆ ಹೋಗಿತ್ತು.
ಆಗ ತಮ್ಮ ತಾತ್ಕಾಲಿಕ ಅಮೆರಿಕ ಪ್ರವಾಸವನ್ನು
ತ್ಯಜಿಸಿ ತಕ್ಷಣವೇ ವಾಪಸಾಗಿದ್ದ ಅಮರ್ಸಿಂಗ್ ಪ್ರಣಬ್ ಮುಖರ್ಜಿ ಜೊತೆ
ರಹಸ್ಯ ಮಾತುಕತೆ ನಡೆಸಿ ನಿರ್ಣಾಯಕ ಹಂತದಲ್ಲಿ ಸರ್ಕಾರಕ್ಕೆ ಬೆಂಬಲ ನೀಡಲು
ಎಲ್ಲಾ ಸಮಾಜವಾದಿ ಪಕ್ಷದ ಸದಸ್ಯರನ್ನೂ ಒಪ್ಪಿಸುವ ಹೊಣೆ ಹೊತ್ತುಕೊಂಡರು. ಈ
ಬಾಂಧವ್ಯದಲ್ಲಿ ಮುಖ್ಯ ಪಾತ್ರ ವಹಿಸಿದ್ದು ಉತ್ತರಪ್ರದೇಶದ ಮುಖ್ಯಮಂತ್ರಿ
ಮಾಯಾವತಿ ಹಾಗೂ ಅಮರ್ ಸಿಂಗ್ ನಡುವಿನ ಹಗೆತನ. ಮಾಯಾವತಿ ಆಸ್ತಿ ವಿವರಗಳ
ತನಿಖೆ ನಡೆಸಿ ಅವ್ಯವಹಾರಗಳನ್ನು ಬಯಲಿಗೆ ಎಳೆಯಲು ಸಿಬಿಐ ತನಿಖೆಗೆ
ಆದೇಶಿಸಬೇಕು ಮತ್ತು ಮೇಲ್ಜಾತಿಯ ನಾಯಕರನ್ನು ಬಿಎಸ್ಪಿಯಿಂದ ಪ್ರತ್ಯೇಕಿಸಿ
ರಾಜ್ಯದಲ್ಲಿ ತಮ್ಮ ಸರ್ಕಾರ ರಚಿಸುವ ಹುನ್ನಾರಕ್ಕೆ ನೆರವಾಗಬೇಕು ಎನ್ನುವ
ಬೇಡಿಕೆಯನ್ನೂ ಅಮರ್ಸಿಂಗ್ ಇಟ್ಟಿದ್ದರು.
ಬಿಜೆಪಿ ನೇತೃತ್ವದ ಎನ್ಡಿಎ ಒಳಗಿನ
ಭಿನ್ನಮತೀಯ ಚಟುವಟಿಕೆಗಳು ಕಳೆದವಾರ ನಡೆದ ಸಭೆಯ ನಂತರ
ಹೊರಬರಲಾರಂಭಿಸಿತ್ತು. ಈ ಸಭೆಯಲ್ಲಿ ಸರ್ಕಾರ ಬಿದ್ದ ಮೇಲೆ ಮುಂದೇನು ಎಂಬ
ಪ್ರಶ್ನೆಗೆ ಎನ್ಡಿಎ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿ ಬಳಿ
ಉತ್ತರವಿರಲಿಲ್ಲ. ಆಗಲೇ ಈ ಪಕ್ಷಗಳಿಗೆ ಅನಿಶ್ಚಿತ ಮತ್ತು ಅಸ್ಪಷ್ಟ ಭವಿಷ್ಯ
ಕಂಡು ಬಂದಿತ್ತು ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥರೊಡನೆ ಮಾತುಕತೆಗೆ
ಇಳಿದರು. ಹಾಗೇ ತಮ್ಮ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆಗೂ ಚರ್ಚಿಸಿದರು.
ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಬಿಜು ಜನತಾ ದಳದಿಂದ ಸರ್ಕಾರಕ್ಕೆ
ಬೆಂಬಲ ನೀಡಿದ ಸಂಸದರನ್ನು ಪಕ್ಷದಿಂದ ಹೊರಗಟ್ಟಿದಲ್ಲಿ 15ನೇ ಲೋಕಸಭೆಯಲ್ಲಿ
ಸ್ಪರ್ಧಿಸಲು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆಯನ್ನೂ ನೀಡಲಾಯಿತು.
ಈಗಾಗಲೇ ಬಿಜೆಪಿಯ ಬೃಜ್ಭೂಷಣ್ ಶರಣ್ ಸಿಂಗ್ (ಬಲರಾಂಪುರ), ಮಂಜುನಾಥ
ಕುನ್ನೂರು (ಧಾರಾವಾಡ), ಚಂದ್ರ ಭಾನು ಸಿಂಗ್ (ದಾಮೋಹ್), ಎಚ್.ಟಿ.
ಸಾಂಗ್ಲಿಯಾನ (ಬೆಂಗಳೂರು ಉತ್ತರ), ಮನೋರಮಾ ಮಧ್ವರಾಜ್ (ಉಡುಪಿ), ಹರಿಭಾವ್
ಮಾಧವ್ ಜಾವಲೆ (ಜಲಗಾಂವ್), ಬಾಬುಭಾಯ್ ಕಟಾರ (ದೋಹಡ್) ಮತ್ತು ಸೋಮುಭಾಯ್
ಪಟೇಲ್ (ಸುರೇಂದ್ರನಗರ್) ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಹಾಗೆಯೇ
ಬಿಜು ಜನತಾ ದಳದಿಂದ ಹರಿಹರ್ ಸ್ವೈನ್, ತೆಲುಗು ದೇಶಂನಿಂದ ಎಂ. ಜಗನ್ನಾಥಂ
ಮತ್ತು ಕೆ. ಆದಿಕೇಶವಲು ನಾಯ್ಡು, ಎಂಡಿಎಂಕೆಯಿಂದ ಎಲ್. ಗಣೇಶನ್ ಮತ್ತು
ಜಿಂಗೀ ರಾಮಚಂದ್ರನ್ ಅವರನ್ನು ಹೊರಗಟ್ಟಲಾಗಿದೆ. ಇವರೆಲ್ಲರಿಗೂ ಕಾಂಗ್ರೆಸ್
ಟಿಕೆಟ್ ಸಿಗುವುದೆ?
ಜುಲೈ ೨೨ರಂದು ಸಂಜೆ ಆರು ಗಂಟೆಗೆ ಸಭಾಪತಿ
ಸೋಮನಾಥ ಚಟರ್ಜಿ ಅರ್ಧ ಗಂಟೆಗಳ ಬಿಡುವು ನೀಡಿದರು. ಸಂಜೆ 6.30ಕ್ಕೆ
ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾಷಣವಿತ್ತು. ಈ ಅವಧಿಯನ್ನು ಸಂಪೂರ್ಣವಾಗಿ
ಬಳಸಿಕೊಂಡಿತು ಕಾಂಗ್ರೆಸ್. ಆಗಲೇ ಗುಲಾಮ್ ನಬಿ ಆಜಾದ್ ಕರಾಮತ್ತು
ನಡೆದದ್ದು! ಸಭೆ ಮತ್ತೆ ಆರಂಭವಾದಾಗ ಸಂಸದೀಯ ವ್ಯವಹಾರಗಳ ಸಚಿವ ವಯಲಾರ್ ರವಿ
ಸಣ್ಣ ಪಕ್ಷಗಳಿಗೂ ಮಾತನಾಡುವ ಅವಕಾಶ ಕೊಡಲು ಕೋರಿದರು.
ಹೀಗೆ ಮಣಿಪುರದ ಸ್ವತಂತ್ರ ಅಭ್ಯರ್ಥಿ ಮಣಿ
ಚರೇನಮೈ, ಲೋಕಜನ್ ಶಕ್ತಿಯ ರಂಜಿತ್ ಕೌರ್ ರಂಜನ್, ಅಖಿಲ ಭಾರತ ಮಜ್ಲಿಸ್-ಇ
ಇತ್ತೆಹದುಲ್ ಮುಸ್ಲಿಮ್ಮೆನ್ನ ಅಸಾದುದ್ದೀನ್ ಒವಾಸಿ, ಬೋಡೋಲ್ಯಾಂಡ್
ಪೀಪಲ್ಸ್ ಫ್ರಂಟ್ನ ಎಸ್.ಕೆ. ಬಿಸುಮತ್ರಾಯ್ ಮತ್ತಿತರರು ಕಾಂಗ್ರೆಸ್ಗೆ
ಬೆಂಬಲ ಸೂಚಿಸಿದರು. ಆದರೆ ಮನಮೋಹನ್ ಸಿಂಗ್ಗೆ ಅಚ್ಚರಿಯಾಗಿದ್ದು ನ್ಯಾಷನಲ್
ಫ್ರಂಟ್ ನಾಯಕ ಓಮರ್ ಅಬ್ದುಲ್ಲಾ ಮತ್ತು ಅವರ ರಾಜಕೀಯ ವೈರಿ
ಮೆಹಬೂಬ ಮುಫ್ತಿ ಬೆಂಬಲ ಪ್ರಕಟಿಸಿದಾಗ. ಈ
ಮಾಂತ್ರಿಕ ಬದಲಾವಣೆಯ ಕಾರಣಕರ್ತರು ಯಾರು ಎಂದು ಅಚ್ಚರಿಯಿಂದ ಮನ್ ಮೋಹನ್
ಸಿಂಗ್ ಪ್ರಶ್ನಿಸಿದರೆ ಸಿಕ್ಕ ಉತ್ತರ: ಗುಲಾಂ ನಬಿ ಆಜಾದ್.
ಟಿಎಸ್ಐ