|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಈ ಬೇಸಿಗೆಯ ಝಳ ಯುಪಿಎಗೆ ಸರಿಯಾಗೇ
ಬೆವರಿಳಿಸಿದೆ.
ಎಡ ಪಕ್ಷಗಳೊಂದಿಗಿನ ಕಿತ್ತಾಟ
(ಅಣು
ಒಪ್ಪಂದದ ಕುರಿತು)
ಸಾಲದೇನೋ ಎಂಬಂತೆ ಕಚ್ಚಾ ತೈಲದ ಬೆಲೆ ಏರಿಕೆ,
ಹಣದುಬ್ಬರ ಮುಂತಾದ ಸಮಸ್ಯೆಗಳು ಸರ್ಕಾರಕ್ಕೆ
ಅಟಕಾಯಿಸಿಕೊಂಡು ದೇಶದ ಆರ್ಥಿಕತೆಯನ್ನೇ ಡೋಲಾಯಮಾನವಾಗಿಸಿಬಿಟ್ಟಿವೆ.
ಈ ಎಲ್ಲಾ ವಿಷಯಗಳು ಒಂದೊಕ್ಕೊಂದು ತಳುಕು
ಹಾಕಿಕೊಂಡಿವೆ ಎನಿಸಿದರೂ ಸರ್ಕಾರವಂತೂ ಅಣು ಒಪ್ಪಂದದ ಕುರಿತೇ ಹೆಚ್ಚು
ಚಿಂತಾಕ್ರಾಂತವಾಗಿದೆ ಎಂಬುದು ಮಾಧ್ಯಮಗಳಿಂದ ಸ್ಪಷ್ಟ.
ಒಟ್ಟು ಆಮದಿನಲ್ಲಿ ಶೇ.70ರಿಂದ
ಶೇ.75ರಷ್ಟು
ಪ್ರಮಾಣವನ್ನು ಕಚ್ಚಾ ತೈಲವೇ ಆಕ್ರಮಿಸಿರುವುದರಿಂದ ಕಚ್ಚಾ ತೈಲದ
ಬೆಲೆಯೇರಿಕೆ ದೇಶದ ಉದ್ದಗಲಕ್ಕೂ
'ಇಂಧನ ಆಘಾತ'
ಸೃಷ್ಟಿಸಿದೆ.
ಆರ್ಥಿಕತೆಯ ದೃಷ್ಟಿಯಲ್ಲಿ ನೋಡಿದರೆ
(ಇತರೆ ಕುಂದು-
ಕೊರತೆಗಳನ್ನೆಲ್ಲಾ ಬದಿಗಿಟ್ಟು)
ಅಣು ಒಪ್ಪಂದ ಕಚ್ಚಾ ತೈಲದ ಮೇಲಿನ ಕೊಂಚ ಅಧಿಕವೇ
ಎನಿಸುವಂಥ ಅವಲಂಬನೆಯನ್ನು ತಗ್ಗಿಸುತ್ತದೆ.
ಆದರೆ ಈ ಯೋಜನೆ ತೀರಾ ದೂರದೃಷ್ಟಿಯ ಉತ್ತಮ
ಆರ್ಥಿಕತೆಗೆ ಸಂಬಂಧಿಸಿದ್ದು,
ಹಾಗಾಗಿ ನಮ್ಮ ಇಂದಿನ
'ಜನಪ್ರಿಯ
ರಾಜಕಾರಣ'ಕ್ಕೆ
ತಕ್ಕುದಲ್ಲ.
ಅದೂ ಅಲ್ಲದೆ ಈ ಹಿಂದೆಂದೂ ಕಂಡಿರದಂಥ ಹಣದುಬ್ಬರದ
ಹೊಡೆತಕ್ಕೆ ಸಿಕ್ಕು ಜನ ತತ್ತರಿಸುತ್ತಿರುವ ಕಾಲದಲ್ಲಿ ಇದೊಂದು
ವಿವೇಚನೆಯಿಲ್ಲದ ಒಪ್ಪಂದ ಎಂದೆನಿಸುತ್ತದೆ.
ಹಣದುಬ್ಬರವನ್ನು ಕಡೆಗಣಿಸಿ ಅಣು ಒಪ್ಪಂದಕ್ಕೆ
ಸಹಿ ಹಾಕಲು ಯುಪಿಎ ಸರ್ಕಾರ ತುದಿಗಾಲಲ್ಲಿ ನಿಂತಿರುವುದು ಅಸಮಾಧಾನ
ತರುವಂಥದ್ದೇ,
ಅದೂ ಚುನಾವಣೆ ಬಾಗಿಲು ಬಡಿಯುತ್ತಿರುವ ಸಂದರ್ಭದಲ್ಲಿ!
ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ
ಪಾತ್ರವಹಿಸುವುದು ಅಣು ಒಪ್ಪಂದವೂ ಅಲ್ಲ,
ಕಚ್ಚಾ ತೈಲದ ಬೆಲೆಯೂ ಅಲ್ಲ.
ಬದಲಿಗೆ ಹಣದುಬ್ಬರ ತಮ್ಮ ಭವಿಷ್ಯವನ್ನು
ನಿರ್ಧರಿಸಲಿದೆ ಎಂಬುದು ಅವರಿಗೂ ಗೊತ್ತು.
ಪ್ರಸ್ತುತ ಬೆಲೆ ಏರಿಕೆ ಶೇ.20ರಷ್ಟು
ಕಡುಬಡವರನ್ನು ಬಾಧಿಸುತ್ತಿದೆ ಎಂಬುದನ್ನು ನಾವು ಬದಿಗಿಟ್ಟು ನೋಡಿದರೂ,
ಉಳಿದ ಶೇ.80ರಷ್ಟು
ಉಳ್ಳವರನ್ನೂ ಅದು ಬಿಟ್ಟಿಲ್ಲ ಎಂಬುದು ಗಮನಾರ್ಹ.
ಈ ವಾಸ್ತವ ಯುಪಿಎ ಸರ್ಕಾರವನ್ನು
ಚಿಂತೆಗೀಡುಮಾಡಬೇಕಿತ್ತು.
ಆದರೆ ಈ ಕ್ಷಣದವರೆಗೂ ಅಂಥ ಯಾವುದೇ ಕುರುಹುಗಳೂ
ಕಂಡುಬಂದಿಲ್ಲ.
ಬದಲಿಗೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ರಿಸರ್ವ್
ಬ್ಯಾಂಕ್ ಮೇಲೆ ಗೂಬೆ ಕೂರಿಸುತ್ತಾ ಸರ್ಕಾರ ಕಾಲ ತಳ್ಳುತ್ತಿದೆ.
ಹಣದುಬ್ಬರ ಎಂಬುದು
'ಆಮ್ ಆದ್ಮಿ'ಯ
(ಶ್ರೀಸಾಮಾನ್ಯ)
ಪ್ರಾಥಮಿಕ ಅವಶ್ಯಕತೆಗಳನ್ನು
ಗಗನಕುಸುಮವಾಗಿಸಿರುವುದು ಮಾತ್ರವಲ್ಲ,
ಷೇರು ಮಾರುಕಟ್ಟೆಯನ್ನು ಕಂಗಾಲಾಗಿಸಿ,
ಹೂಡಿಕೆದಾರರ ಜಂಘಾಬಲವನ್ನೇ ಉಡುಗಿಸಿದೆ,
ಉದ್ಯಮಲೋಕವನ್ನೇ ಕಂಗೆಡಿಸಿಬಿಟ್ಟಿದೆ.
ನಷ್ಟದ ಫಸಲನ್ನೇ ಕೊಯ್ಯುತ್ತಿರುವ
ಹೂಡಿಕೆದಾರರಿಗೆ ನೆರವಾಗುವಂಥ ಯಾವುದೇ ಕ್ರಮಗಳೂ ಸರ್ಕಾರದ ಕಡೆಯಿಂದ ಇಲ್ಲ.
ಇವೆಲ್ಲದರ ನಡುವೆ ಇನ್ನೊಂದು ಕುಚೋದ್ಯದ
ವಿಷಯವೆಂದರೆ,
ಆರ್ಥಿಕ ರಂಗದಲ್ಲಿ ಯುಪಿಎ ಸರ್ಕಾರ ಪರಿಸ್ಥಿತಿಯನ್ನು
'ನಿರ್ವಹಿಸಿದ'
ಬಗೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸರ್ಕಾರ ಸೂಕ್ತ
ಕ್ರಮ ತೆಗೆದುಕೊಂಡಿದ್ದರೆ ಬಹುಶಃ ಮುಂದಿನ ಚುನಾವಣೆಯಲ್ಲಿ ಅಂತಹ
ಪ್ರಯತ್ನದ ಉತ್ತಮ ಫಸಲು ತೆಗೆಯಬಹುದಿತ್ತೋ ಏನೋ.
ಆದರೆ ಸರ್ಕಾರ ಹಣದುಬ್ಬರವನ್ನು
'ನಿರ್ವಹಿಸಿದ'
ಬಗೆಯೇ ವ್ಯತಿರಿಕ್ತವಾದುದು.
ಅಗತ್ಯವಸ್ತುಗಳ ಬೆಲೆ ಏರಿಕೆಗೆ ಕಡಿವಾಣ
ಹಾಕುವಲ್ಲಿ ಕೂಡ ದೃಢ ಹೆಜ್ಜೆಗಳನ್ನು ಇಟ್ಟಿದ್ದರೂ ಮುಂದಿನ ಚುನಾವಣಾ
ಸಮರವನ್ನು ಜಯಿಸಬಹುದಿತ್ತು.
ಆದರೆ,
ಅಗತ್ಯ ವಸ್ತುಗಳ ಬೆಲೆ ವ್ಯತ್ಯಾಸ
(ಚಿಲ್ಲರೆ
ಹಾಗೂ ಸಗಟು ಮಾರಾಟ ಬೆಲೆ)
ಕೂಡ ತೀರಾ ಆತಂಕಕಾರಿ ಪ್ರಮಾಣದಲ್ಲಿದೆ ಎಂದು
ಹಲವು ವರದಿಗಳು ಎಚ್ಚರಿಕೆಯ ಕರೆಗಂಟೆ ಬಾರಿಸಿದರೂ ಸರ್ಕಾರ ನಿದ್ದೆ ಮಾಡಿತು.
ನನ್ನ ಪ್ರಕಾರ,
ಇಂಥ ಸಂದಿಗ್ಧ ಕಾಲದಲ್ಲಿ ಸರ್ಕಾರ ಅಣು
ಒಪ್ಪಂದಕ್ಕೆ ಸಹಿ ಹಾಕಲು ಶತಾಯ-
ಗತಾಯ ಪ್ರಯತ್ನ ಮಾಡುವ ಬದಲಿಗೆ,
ಅಗತ್ಯವಸ್ತುಗಳ ಸಗಟು ಮತ್ತು ಚಿಲ್ಲರೆ ಮಾರಾಟ
ಬೆಲೆಯಲ್ಲಿನ ಕಂದಕ ತುಂಬುವ ನಿಟ್ಟಿನಲ್ಲಿ ದೇಶದ ಮೂಲೆ-
ಮೂಲೆಯಲ್ಲೂ ಮಳಿಗೆಗಳನ್ನು ತೆರೆಯಬೇಕಿತ್ತು.
ಅದು ಹೆಚ್ಚು ತುರ್ತಿನ ಕಾರ್ಯವಾಗಿತ್ತು.
ಆರ್ಥಿಕ ದೃಷ್ಟಿಯಿಂದ ನೋಡಿದರೆ ಈ ಪ್ರಯತ್ನ
ಅಂಥ ಹೆಚ್ಚಿನ ಖರ್ಚನ್ನೇನೂ ಸರ್ಕಾರದಿಂದ ಬಯಸುತ್ತಿರಲಿಲ್ಲ.
ಆದರೆ
'ಶ್ರೀ
ಸಾಮಾನ್ಯ'ನ
ನಂಬಿಕೆಯಿಂದ ಯುಪಿಎ ಅದೆಷ್ಟೋ ದೂರ ಸಾಗಿಯಾಗಿದೆ.
ಅಧಿಕಾರದ ಗದ್ದುಗೆ ಏರಿದ ಅಂದಿನಿಂದಲೂ ಸರ್ಕಾರ
ಮತದಾರನ ಕೆಂಗಣ್ಣಿಗೆ ಗುರಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ.
ಆಡಳಿತಾರೂಢ ಪಕ್ಷದ ಅಧಿನಾಯಕಿ ಇಂತಹ
ಸಂದರ್ಭವನ್ನು ಮತದಾರರ ಸಂಕಷ್ಟ ದೂರಮಾಡುವ ಅವಕಾಶವನ್ನಾಗಿ
ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರೆ,
ಮುಂಬರುವ ಚುನಾವಣೆ ಅವರ ಪಾಲಿಗೆ ಹೂವಿನ
ಹಾಸಿಗೆಯಾಗಿರುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ.
ಇದೀಗ ಕಾಲ ಮಿಂಚಿ ಹೋಗಿದೆ.
ಸೋಲಿನ ನಿಸ್ತೇಜ ಯಾತ್ರೆಯನ್ನು
ಎದುರುಗೊಳ್ಳುವುದಷ್ಟೇ ಈಗ ಸರ್ಕಾರಕ್ಕಿರುವ ಏಕೈಕ ಮಾರ್ಗ!
ಐಐಪಿಎಂ
'ಥಿಂಕ್ ಟ್ಯಾಂಕ್'
|