|
1
ಒಡಲೊಳಗಿನ ಬೆಂಕಿಯುಂಡೆ
ಅನಂತ ಕುಮಾರ್ ಬಣ, ರೆಡ್ಡಿ ಬ್ರದರ್ಸ್ ಮತ್ತು
ಪಕ್ಷೇತರರು ಯಡಿಯೂರಪ್ಪ ಪಾಲಿಗೆ ಹಗಲು-ರಾತ್ರಿಯಿಡೀ ದುಸ್ವಪ್ನವಾಗಿ
ಕಾಡಲಿದ್ದಾರೆ. ಬಿಜೆಪಿ ಸರ್ಕಾರ, ಯಡಿಯೂರಪ್ಪ ಭವಿಷ್ಯ ಈ ಮೂವರನ್ನೇ
ಅವಲಂಬಿಸಿದೆ.
ಮೇಲ್ನೋಟಕ್ಕೆ
ಕರ್ನಾಟಕದ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖದಲ್ಲಿ ನಗು ತುಂಬಿದೆ.
'ಪರಶುರಾಮ',
ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತ ನಂತರ ಪ್ರಸನ್ನವದನ. ಆದರೆ, ಒಡಲೊಳಗೆ
ಬೆಂಕಿಯುಂಡೆ ಕಟ್ಟಿಕೊಂಡು, ಅದರ ಬಿಸಿಯನ್ನು ಒಂದೊಂದು ಕ್ಷಣವೂ ಅವರು
ಅನುಭವಿಸುತ್ತಲೇ ಇದ್ದಾರೆ, ಅನುಭವಿಸುತ್ತಲೇ ಇರಬೇಕು. ಬಯಸಿ, ಬಯಸಿ ಕೊನೆಗೂ
ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತ ಮೇಲೆ ಮುಂದಿರುವುದು ಸುಲಭದ ದಾರಿಯಲ್ಲ;
ಕಲ್ಲು ಮುಳ್ಳಿನ ಹಾದಿ ಎಂದು ಅವರಿಗೂ ಗೊತ್ತಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ
ಬಾರಿಸಿದ ಮೇಲಲ್ಲ, ಅದಕ್ಕಿಂತ ಮೊದಲೂ ಬಿಜೆಪಿಯೊಳಗಿನ ಎರಡು ಬಣಗಳ ನಡುವಿನ
ಶೀತಲ ಸಮರ ನಡೆಯುತ್ತಲೇ ಬಂದಿದೆ. ಅದೇನೂ ಗೌಪ್ಯ ವಿಷಯವೇನಲ್ಲ. ಜೆಡಿ(ಎಸ್)
ವಚನಭಂಗ ಮಾಡಿದ ಮೇಲೆ, ಸಾರ್ವಜನಿಕವಾಗಿ ನಾವು ಬೀದಿ ರಂಪ ಮಾಡಿದಲ್ಲಿ
ಉಳಿಗಾಲವಿಲ್ಲ ಎಂಬ ವಿಷಯವನ್ನು ಯಡಿಯೂರಪ್ಪ ಮತ್ತು ಅನಂತ ಕುಮಾರ್ ಇಬ್ಬರೂ
ಅರಿತುಕೊಂಡರು. ಆ ಕಾರಣ, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅವಿಭಕ್ತ
ಕುಟುಂಬದಂತೆ ಕಂಗೊಳಿಸಿತು. ಆದರೀಗ ಅಧಿಕಾರ ಸಿಕ್ಕ ಕೂಡಲೇ ಎರಡು ಬಣಗಳ
ನಡುವಿನ ಭಿನ್ನಾಭಿಪ್ರಾಯ ಜಗದೀಶ್ ಶೆಟ್ಟರ್ ರೂಪದಲ್ಲಿ ಸ್ಫೋಟಿಸಿದೆ.
ಯಡಿಯೂರಪ್ಪ ಪ್ರಕಾರ, ಪಕ್ಷದ ಹಿತದೃಷ್ಟಿಯಿಂದ ಶೆಟ್ಟರ್ಗೆ
ವಿಧಾನಸಭಾಧ್ಯಕ್ಷ ಸ್ಥಾನದ ಆಸೆ ತೋರಿಸಲಾಗಿದೆ. ಆದರೆ, ಶೆಟ್ಟರ್ ನನಗೆ
ಸರ್ವಥಾ ವಿಧಾನಸಭಾಧ್ಯಕ್ಷ ಸ್ಥಾನ ಬೇಡವೇ ಬೇಡ ಎಂದಾಗಿದೆ. ಕೊನೆಯ ಕ್ಷಣದಲ್ಲಿ
ಭಿನ್ನಮತ ಶಮನ ಮಾಡುವ ಸಲುವಾಗಿ ಯಡಿಯೂರಪ್ಪ, ಅನಂತ ಕುಮಾರ್ ಬಣದ ಶೆಟ್ಟರ್ಗೆ
ಯಾವುದಾದರೂ ಸಚಿವ ಪದವಿಯನ್ನು ನೀಡಲೂಬಹುದು ಅಥವಾ ಶೆಟ್ಟರ್
'ದೊಡ್ಡವರು
ಹೇಳಿದ್ದ'ಕ್ಕೆ
ಒಪ್ಪಿಗೆ ಕೂಡ ಸೂಚಿಸಬಹುದು. ಆದರೆ, ಇದಿನ್ನೂ ಆರಂಭ. ಟಿಎಸ್ಐಗೆ ನೀಡಿದ
ವಿಶೇಷ ಸಂದರ್ಶನದ ಸಂದರ್ಭದಲ್ಲಿ ಅನಂತ ಕುಮಾರ್ "ಯಡಿಯೂರಪ್ಪ ಸರ್ಕಾರ
5
ವರ್ಷಗಳ ಕಾಲ ಭದ್ರವಾಗಿ ಉಳಿದು ಕೊಳ್ಳುತ್ತದೆ" ಎಂದು ಹೇಳಿದ್ದರೂ, ಬುಡ
ಅಲುಗಾಡಿಸುವ ಕೆಲಸ ನಡೆಯುತ್ತಲೇ ಇರುತ್ತದೆ.
ಈ ನಡುವೆ ಬಿಜೆಪಿಯಲ್ಲಿ ಒಂದು
'ಭಸ್ಮಾಸುರ'
ಪಡೆ ಹುಟ್ಟಿಕೊಂಡಿದೆ. ದುರಂತವೆಂದರೆ ಮ್ಯಾಜಿಕ್ ಸಂಖ್ಯೆ
113ದಾಟಲು
6
ಪಕ್ಷೇತರ ಶಾಸಕರ ಬೆಂಬಲಗಳಿಸಲು ಯಡಿಯೂರಪ್ಪ ಅದೇ
'ಭಸ್ಮಾಸುರ'ರನ್ನೇ
ನಂಬಬೇಕಾಯಿತು. ಸದ್ಯದ ಮಟ್ಟಿಗೆ ಹೇಳುವುದಾದರೆ ಕರ್ನಾಟಕದ ರಾಜಕೀಯವನ್ನೇ
ಬಳ್ಳಾರಿಯ 'ರೆಡ್ಡಿ
ಬ್ರದರ್ಸ್'
ನಿಯಂತ್ರಿಸುತ್ತಿದ್ದಾರೆ. ಆದರೆ, ಕೆಲವೇ ತಿಂಗಳಲ್ಲಿ ಇದೇ
'ಭಸ್ಮಾಸುರ'
ಪಡೆ ಯಡಿಯೂರಪ್ಪ ಅವರಿಗೆ ಕಂಟಕವಾದಲ್ಲಿ ಅಚ್ಚರಿ ಪಡಬೇಕಿಲ್ಲ.
'ಯಾವುದೇ
ಷರತ್ತುಗಳಲ್ಲಿದೇ'
6
ಶಾಸಕರನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಳ್ಳುವ ಸುಸಜ್ಜಿತ ಕಾರ್ಯಾಚರಣೆಯ
ಮೇಲ್ವಿಚಾರಣೆ ಹೊತ್ತಿತ್ತು ಈ ಪಡೆ. ಒಮ್ಮೆ ಕಾರ್ಯಾಚರಣೆ ಯಶಸ್ವಿಯಾದ ಕೂಡಲೇ
ಕರುಣಾಕರ ರೆಡ್ಡಿ ಕಣ್ಣು, ಇಲ್ಲದ 'ಉಪ
ಮುಖ್ಯಮಂತ್ರಿ'
ಹುದ್ದೆಯ ಮೇಲೆ ಬಿತ್ತು. "ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ
ನಾವು" ಎಂಬಂತಹ ಭಾವನೆ ಈಗಾಗಲೇ ರೆಡ್ಡಿ ಬ್ರದರ್ಸ್ ಮನದಲ್ಲಿ ಆಳವಾಗಿ
ನೆಟ್ಟಿದೆ. ಅದರ ಪರಿಣಾಮದಿಂದಾಗಿಯೇ ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ
ಇಟ್ಟಿದ್ದು. ಅವರನ್ನು ಸಂತೃಪ್ತಿಗೊಳಿಸುವುದು ಅನಿವಾರ್ಯವಾದ ಕಾರಣದಿಂದಲೇ
ಯಡಿಯೂರಪ್ಪ ಅವರು ಜನಾರ್ಧನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಇಬ್ಬರನ್ನೂ
ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು. ಮಾತ್ರವಲ್ಲ, ಅವರ
'ಸಹೋದರ'
ಶ್ರೀರಾಮುಲು ಅವರಿಗೆ ಕೂಡ ಸಚಿವ ಪಟ್ಟ ನೀಡಲಾಗಿದೆ. ಒಂದೇ ಮನೆಯಲ್ಲಿ ಮೂರು
ಮಂತ್ರಿಗಳು! ಇದೇ ಪರಿಸ್ಥಿತಿ ಮುಂದುವರಿದಲ್ಲಿ 'ರೆಡ್ಡಿ
ಬ್ರದರ್ಸ್'
ಒಂದು ದಿನ ಯಡಿಯೂರಪ್ಪ ಅವರಿಗಿಂತ ದೊಡ್ಡದಾಗಿ ಬೆಳೆದು ನಿಲ್ಲುತ್ತಾರೆ.
ಇನ್ನು ಜೊತೆಯಲ್ಲಿರುವ
6 ಪಕ್ಷೇತರರು.
ಯಡಿಯೂರಪ್ಪ ಸರ್ಕಾರ ಅಸ್ತಿತ್ವದಲ್ಲಿ ಇರಬೇಕಾದರೆ ಈ ಪೈಕಿ ಕನಿಷ್ಠ
ಮೂವರನ್ನಾದರೂ ದಿನದ 24
ಗಂಟೆಗಳ ಕಾಲ ಸಂತೃಪ್ತರಾಗಿರಬೇಕು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಏನನ್ನೇ
ಮಾಡಲಿ ಅಥವಾ ಬಿಡಲಿ. ಅದ್ಯಾವುದೂ ಅವರನ್ನು ಉಳಿಸಲಾರದು. ಅವರ ಅಳಿವು-ಉಳಿವು
ಯಾರ ಕೈಯಲ್ಲಿದೆ ಎಂದರೆ ಆ ಮೂವರ ಕೈಯಲ್ಲಿ. ಅಧಿಕಾರದಲ್ಲಿ ಇರಬೇಕೆಂದರೆ
ಮಾನ್ಯ ಮುಖ್ಯಮಂತ್ರಿಗಳು, 6ರ
ಪೈಕಿ 3ಮಂದಿಯ
ಎಲ್ಲ ಆಗು-ಹೋಗುಗಳನ್ನು ಪೂರೈಸುತ್ತಲೇ ಇರಬೇಕು. ಇವರು ಯಡಿಯೂರಪ್ಪ ಪಾಲಿಗೆ
ಬಿಸಿ ತುಪ್ಪ. ಹೀಗೆ, ಪಕ್ಷದೊಳಗಿನ ಹಾಗೂ ಪಕ್ಷದ ಹೊರಗಿನ
'ಭಿನ್ನಮತ'
ಯಡಿಯೂರಪ್ಪ ಪಾಲಿಗೆ ದುಸ್ವಪ್ನವಾಗಿ ಕಾಡಲಿವೆ. ಈ
'ಭಿನ್ನಮತ'ವನ್ನು
ಯಾರ ರೀತಿ 'ಮ್ಯಾನೇಜ್'
ಮಾಡುತ್ತಾರೆ ಎನ್ನುವುದರ ಮೇಲೆ ಬಿಜೆಪಿ ಹಾಗೂ ಯಡಿಯೂರಪ್ಪ ಭವಿಷ್ಯ ನಿಂತಿದೆ.
ಟಿಎಸ್ಐ
2
ಸಮಸ್ಯೆಗಳ 'ರಾಜಧಾನಿ'
ಬೆಂಗಳೂರು
ಯಡಿಯೂರಪ್ಪ ಸರ್ಕಾರದ ಪಾಲಿಗೆ ಬೆಂಗಳೂರು ಕೂಡ
ಒಂದು ಬೃಹತ್ ಸಮಸ್ಯೆಯೇ. ಸರ್ಕಾರ ಇಲ್ಲಿ ಔದ್ಯಮಿಕ ಮತ್ತು ರಿಯಲ್ ಎಸ್ಟೇಟ್
ಮಾಫಿಯ ಜೊತೆ ಜನಸಾಮಾನ್ಯನನ್ನೂ ಸಂತೃಪ್ತಿಗೊಳಿಸಬೇಕು. ಸರ್ಕಸ್ ಆರಂಭವಾಗಿದೆ...
ದೂರದ ಬೆಟ್ಟ ನುಣ್ಣಗೆ ಎಂಬ ಮಾತಿಗೆ ಸಾಕ್ಷಿ
ನಮ್ಮ ರಾಜಧಾನಿ, 'ಸಿಲಿಕಾನ್
ಸಿಟಿ',
ಉದ್ಯಾನನಗರಿ, ಬೆಂಗಳೂರು. ಹತ್ತಿರ-ಹತ್ತಿರ ಒಂದು ಕೋಟಿ ಜನರನ್ನು ತನ್ನ
ಒಡಲಲ್ಲಿ ಇಟ್ಟುಕೊಂಡಿರುವ ಬೆಂಗಳೂರು ಈಗ ಬೆಳೆಯುತ್ತಿರುವ ಪರಿಯನ್ನು ಕಂಡಾಗ
ಇನ್ನು ಕೆಲವೇ ದಿನಗಳಲ್ಲಿ ಅದು ಸಮಸ್ಯೆಗಳ 'ರಾಜಧಾನಿ'ಯಾಗಿ
ಅಧಿಕಾರಾರೂಢ ಪಕ್ಷದ ಪಾಲಿಗೆ ನುಂಗಲಾರದ ತುತ್ತಾಗಲಿದೆ. ದೇಶದಲ್ಲಿ ನೆಲೆ
ನಿಂತಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಶೇಕಡಾ
33ರಷ್ಟು
ಬೆಂಗಳೂರಿನಲ್ಲಿಯೇ ಇವೆ. ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಪೈಕಿ ಶೇಕಡಾ
48ರಷ್ಟು
ಉದ್ಯಾನನಗರಿಯಲ್ಲಿಯೇ ತಳವೂರಿವೆ. ಆರ್ಥಿಕವಾಗಿ ಬೆಂಗಳೂರು ಎಗ್ಗಿಲದೇ
ಬೆಳೆಯುತ್ತಿದೆ. ಇಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಯುವಜನರು ಅವರಿಗೆ
ಸಿಕ್ಕಿದ ಆರ್ಥಿಕ ಸ್ವಾತಂತ್ರ್ಯದ ಮೂಲಕ ಇಂದ್ರಲೋಕವನ್ನೇ ಇಲ್ಲಿ ಸೃಷ್ಟಿಸಿ
ಬಿಟ್ಟಿದ್ದಾರೆ. ಇನ್ನೊಂದೆಡೆ, ನಗರದಲ್ಲಿನ 22
ಲಕ್ಷ ಜನರು 733ಕೊಳಗೇರಿಗಳಲ್ಲಿ
ನೆಲೆ ನಿಂತಿದ್ದಾರೆ! ಒಂದೆಡೆ ಇಂದ್ರಲೋಕ, ಮತ್ತೊಂದೆಡೆ ಕೊಳಗೇರಿಗಳ
ಸಾಮ್ರಾಜ್ಯ. ಒಂದರ್ಥದಲ್ಲಿ ಬೆಂಗಳೂರು ಆಧುನಿಕ ಜಗತ್ತಿನ ವಿಪರ್ಯಾಸ.
ಒಟ್ಟಾರೆ ಸಾಮಾಜಿಕ ಅಸಮಾನತೆಯ ಕೂಪವಾಗಿ ಪರಿವರ್ತನೆಗೊಂಡಿರುವ ಬೆಂಗಳೂರು
ಮೂಲಸೌಲಭ್ಯಗಳ ಕೊರತೆಯಿಂದ ನಲುಗಿದೆ.
ಒಂದೆಡೆ ಇನ್ಫೋಸಿಸ್ನ ದೊಡ್ಡ ತಲೆಗಳು,
ಬಯೋಟೆಕ್ನ ಕಿರಣ್ ಮಜುಂದಾರ್ ಷಾ "ನಮಗೆ ಎಲ್ಲ ಮೂಲಸೌಲಭ್ಯಗಳನ್ನು ನೀಡಿ.
ಇಲ್ಲವಾದರೆ, ಬೇರೆ ರಾಜ್ಯಗಳತ್ತ ಮುಖ ಮಾಡುತ್ತೇವೆ" ಎಂಬ ಬೆದರಿಕೆಯನ್ನು
ಆಗಾಗ ಸರ್ಕಾರಕ್ಕೆ ಹಾಕುತ್ತಲೇ ಇರುತ್ತಾರೆ. ಇನ್ನೊಂದೆಡೆ ಶ್ರೀರಾಂಪುರದ
ಕೊಳಗೇರಿಯಲ್ಲಿ ಒಂದು ಹನಿ ನೀರಿಗಾಗಿ ಜನಸಾಮಾನ್ಯ ಪರಿಪಾಟಲು ಪಡುತ್ತಲೇ
ಇರುತ್ತಾನೆ. ಹೀಗೆ ಎರಡು ಮೊನಚಾದ ಅಲಗುಗಳು ಸರ್ಕಾರವನ್ನು ಪದೇ, ಪದೇ
ಚುಚ್ಚುತ್ತಲೇ ಬಂದಿವೆ. ಚುಚ್ಚುತ್ತಲೇ ಇರುತ್ತವೆ. ಯಡಿಯೂರಪ್ಪ ಸರ್ಕಾರ ಕೂಡ
ಇದಕ್ಕೆ ಹೊರತಾಗಿಲ್ಲ. ಔದ್ಯಮಿಕ ಹಾಗೂ ರಿಯಲ್ ಎಸ್ಟೇಟ್
'ಲಾಬಿ'ಗಳು
ಸದಾ ಸರ್ಕಾರದ ಮೇಲೆ ಒತ್ತಡ ಹೇರಿ ತಮಗೇನು ಬೇಕೋ, ಅದನ್ನು ಪಡೆಯಲು
ಯಶಸ್ವಿಯಾಗುತ್ತವೆ. ಆದರೆ, ಜನಸಾಮಾನ್ಯರ ಪರ ಲಾಬಿ ಮಾಡಲು ಇಲ್ಲಿ ಯಾರೂ
ಇಲ್ಲ. ಈಗ ಆ ಜವಾಬ್ದಾರಿಯನ್ನು ಯಡಿಯೂರಪ್ಪ ಮತ್ತು ಅವರ ಸಚಿವ ಪಡೆ
ಹೊರಬೇಕಾಗಿದೆ. ಹಾಗೆ ನೋಡಿದರೆ ರಾಜಕೀಯವಾಗಿ ಕೂಡ ಔದ್ಯಮಿಕ ಹಾಗೂ ರಿಯಲ್
ಎಸ್ಟೇಟ್ ಲಾಬಿ ಬಲ ಹೆಚ್ಚಿದೆ. ರಾಜಕಾರಣಿಗಳಿಗೆ ಜನಸಾಮಾನ್ಯ ಬೇಕಾಗುವುದು
ಚುನಾವಣೆಗಿಂತ ಮೊದಲು ಮಾತ್ರ. ಚುನಾವಣಾ ಫಲಿತಾಂಶ ಬಂದು ಅಧಿಕಾರ ದಕ್ಕಿದ
ಮೇಲೆ ಎಲ್ಲರೂ ಮುಖ ಮಾಡಿ ನಿಲ್ಲುವುದು ಔದ್ಯಮಿಕ ಹಾಗೂ ರಿಯಲ್ ಎಸ್ಟೇಟ್
ಲಾಬಿಯತ್ತಲೇ. ಎಲ್ಲ ಸರ್ಕಾರಗಳು ಮುಖ್ಯವಾಗಿ ಕೆಲಸ ಮಾಡುವುದು ಆ ಲಾಬಿಯನ್ನು
ಸಂತೃಪ್ತಿಗೊಳಿಸುವುದಕ್ಕಾಗಿಯೇ. ಯಡಿಯೂರಪ್ಪ ಸರ್ಕಾರ ಈ ನಿಟ್ಟಿನಲ್ಲಿ
ವಿಭಿನ್ನವಾಗಿ ನಿಲ್ಲಲಿದೆಯೇ?
ಹಾಗೆ ನೋಡಿದಲ್ಲಿ ಬೆಂಗಳೂರು ಮೂಲಸೌಲಭ್ಯಗಳ
ಸದ್ಯದ ಸ್ಥಿತಿ ಜನಸಾಮಾನ್ಯನನ್ನೂ ಸಂತೃಪ್ತಗೊಳಿಸಿಲ್ಲ. ನೀರು, ರಸ್ತೆ,
ಶುಚಿತ್ವ, ಮಿತಿ ಮೀರಿದ ಟ್ರಾಫಿಕ್ ...ಹೀಗೆ ಸಾಮಾನ್ಯ ಸಂಗತಿಗಳು ಕೂಡ ಜನರ
ಪಾಲಿಗೆ ದೊಡ್ಡ ಸಮಸ್ಯೆಯಾಗಿ ನಿಂತಿವೆ. "ನಿಯಂತ್ರಣವಿಲ್ಲದ ಬೆಳವಣಿಗೆ
ಇದಕ್ಕೆಲ್ಲ ಕಾರಣ" ಎಂದು ಸುಲಭವಾಗಿ ನುಣುಚಿಕೊಳ್ಳಬಹುದು. ಆದರೆ, ಆ
ನಿಯಂತ್ರಣವಿಲ್ಲದ ಬೆಳವಣಿಗೆಗೆ ಸರ್ಕಾರ ಕೂಡ ಕಾರಣ ಎನ್ನುವುದನ್ನು ಆಡಳಿತದ
ಹೊಣೆ ಹೊತ್ತವರು ಅರ್ಥ ಮಾಡಿಕೊಳ್ಳಬೇಕು. ಜೊತೆ-ಜೊತೆಯಲ್ಲಿಯೇ ಆರ್ಥಿಕವಾಗಿ
ಬೆಂಗಳೂರನ್ನು ಇನ್ನೂ ಸದೃಢ ಮಾಡುವ ನಿಟ್ಟಿನಲ್ಲಿ ನೂತನ ಸರ್ಕಾರ ದಿನದ
24
ಗಂಟೆಗಳ ಕಾಲ ಕಾರ್ಯ ನಿರತವಾಗಬೇಕಿದೆ.
ಈ ನಡುವೆ ದೇವನಹಳ್ಳಿಯಲ್ಲಿ ನೂತನವಾಗಿ
ಅಸ್ತಿತ್ವಕ್ಕೆ ಬಂದ 'ಬೆಂಗಳೂರು
ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ'ಕ್ಕೆ
ಸುಸಜ್ಜಿತ ಸಂಪರ್ಕ, ನಗರದ ಮಧ್ಯದಲ್ಲಿನ ಎಚ್ಎಎಲ್ ವಿಮಾನ ನಿಲ್ದಾಣವನ್ನು
ಉಳಿಸಿಕೊಳ್ಳುವುದು, ಮೆಟ್ರೋ ಕಾಮಗಾರಿ, ಬೆಂಗಳೂರು-ಮೈಸೂರು ಕಾರಿಡಾರ್
ರಸ್ತೆಗೆ ಮುಕ್ತಿ...ಇವು ಯಡಿಯೂರಪ್ಪ ಸರ್ಕಾರದ ಮುಂದಿರುವ ಸದ್ಯದ ಸವಾಲುಗಳು.
ಬೃಹತ್ ಬೆಂಗಳೂರು ಯೋಜನೆಯನ್ನು ಸಮರ್ಪಕ ಹಾಗೂ ಸಮರ್ಥವಾಗಿ ಜಾರಿಗೆ ತರಲು
ಗಂಭೀರ ಪ್ರಯತ್ನಗಳನ್ನು ಮಾಡಬೇಕಿದೆ.
ಒಟ್ಟಾರೆ ಇನ್ಫೋಸಿಸ್- ಬಯೋಟೆಕ್ ದಣಿಗಳನ್ನು
ಸಂತೃಪ್ತಿಗೊಳಿಸುತ್ತಲೇ, ಜನಸಾಮಾನ್ಯರ ಮನಸ್ಸನ್ನು ತಣಿಸುವ ಕೆಲಸ ಕೂಡ ನೂತನ
ಸರ್ಕಾರ ಮಾಡಬೇಕಿದೆ. ಇದನ್ನು ಯಡಿಯೂರಪ್ಪ ಎಷ್ಟು ಸಮರ್ಥವಾಗಿ ಮಾಡುತ್ತಾರೆ
ಎನ್ನುವುದರ ಮೇಲೆ ಅವರ ಭವಿಷ್ಯ ನಿಂತಿದೆ. ಏಕೆಂದರೆ, ಬೆಂಗಳೂರಿನ
28 ವಿಧಾನಸಭಾ
ಕ್ಷೇತ್ರಗಳ ಪೈಕಿ ಬಿಜೆಪಿ 17
ಸ್ಥಾನಗಳನ್ನು ಪಡೆದಿದೆ. ಆ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ
ಯಡಿಯೂರಪ್ಪ ಹೆಗಲೇರಿ ಕುಳಿತಿದೆ.
ಟಿಎಸ್ಐ
3
ಸಮೃದ್ಧ ಕರ್ನಾಟಕ? ಅಧಿಕಾರ?
ರಾಜ್ಯವನ್ನು ಆರ್ಥಿಕವಾಗಿ ಸಬಲ ಮಾಡಬೇಕಿದ್ದರೆ
ಯಡಿಯೂರಪ್ಪ ಗಣಿ ಉದ್ಯಮ ಮತ್ತು ರಿಯಲ್ ಎಸ್ಟೇಟ್ ಮಾಫಿಯಾವನ್ನು
ನಿಯಂತ್ರಿಸಬೇಕು. ಅವುಗಳಿಗೆ ಕಾನೂನಿನ ಚೌಕಟ್ಟಿನಡಿ ಕಡಿವಾಣ ಹಾಕಬೇಕು.
ಔದ್ಯಮಿಕ
ವಲಯದಲ್ಲಿ ಕರ್ನಾಟಕ ದೇಶದ ಪ್ರಮುಖ ಆಧಾರಸ್ತಂಭ. ದೇಶದ ಔದ್ಯಮಿಕ ಪ್ರಗತಿಗೆ
ರಾಜ್ಯದ ಐಟಿ, ಬಿಟಿ ಕ್ಷೇತ್ರಗಳ ಕೊಡುಗೆ ಅತ್ಯಂತ ನಿರ್ಣಾಯಕ. ಹಾಗೇ ವಿದೇಶಿ
ನೇರ ಬಂಡವಾಳ ಹೂಡಿಕೆದಾರರಿಗೆ ಕೂಡ ರಾಜ್ಯ ಮೊದಲ ಆದ್ಯತೆಯಾಗಿದೆ. ಉತ್ಪಾದನೆ,
ಕೃಷಿ ಮತ್ತು ಸೇವಾ ವಲಯ ಆಧಾರಿತ ಉದ್ಯಮಗಳು ರಾಜ್ಯದ ಅಭಿವೃದ್ಧಿಯನ್ನು
ನಿರ್ಧರಿಸುತ್ತಿವೆ.
ಐಟಿ ವಲಯ ಮತ್ತು ಗಣಿ ಉದ್ಯಮದ ರಫ್ತು
ಪ್ರಮಾಣಗಳು ರಾಜ್ಯದ ಪ್ರಮುಖ ವಿದೇಶಿ ವಿನಿಮಯ ಗಳಿಕೆ ಮಾನದಂಡಗಳಾಗಿರುವಂತೆಯೇ
ಜೈವಿಕ ತಂತ್ರಜ್ಞಾನ, ಕೃಷಿ, ಜವಳಿ, ಸಕ್ಕರೆ, ಆಟೋಮೊಬೈಲ್ ಉತ್ಪನ್ನಗಳು ಕೂಡ
ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ವಿನಿಮಯ ಗಳಿಸುತ್ತಿವೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಬಂಡವಾಳ
ಹೂಡಿಕೆದಾರರನ್ನು ಆಕರ್ಷಿಸಲು ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು ಮತ್ತು
ಮಹಾರಾಷ್ಟ್ರ ರಾಜ್ಯಗಳು ಪೈಪೋಟಿಗಿಳಿದಿವೆ. ರಾಜ್ಯದ ಮೂಲಸೌಕರ್ಯಗಳ
ನಿರಾಶಾದಾಯಕ ಸ್ಥಿತಿ ಮತ್ತು ಆಡಳಿತಶಾಹಿಯ ನಿಧಾನವೇ ಪ್ರಧಾನ ಧೋರಣೆಯಿಂದಾಗಿ
ಹಲವು ಉದ್ಯಮಗಳು ಈಗಾಗಲೇ ಬೇರೆ ರಾಜ್ಯಗಳತ್ತ ಮುಖಮಾಡಿವೆ. ಜೊತೆಗೆ ವಿಶೇಷ
ಆರ್ಥಿಕ ವಲಯಗಳಿಗಾಗಿ ಕೃಷಿ ಭೂಮಿ ಬಿಟ್ಟು ಕೊಡಲು ರೈತರು ಸಿದ್ಧರಿಲ್ಲ. ಆ
ಸಂಬಂಧ ಈಗಾಗಲೇ ಮಂಗಳೂರು, ಕೊಪ್ಪಳ, ಚಾಮರಾಜನಗರ, ಗದಗ, ಬೆಂಗಳೂರು
ಗ್ರಾಮಾಂತರ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಹಿನ್ನಡೆ ಅನುಭವಿಸಿದೆ.
ಹಾಗೇ ರಾಜ್ಯದ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವಲ್ಲಿ
ವಿಫಲವಾಗಿರುವ ಕಾರಣ ಸಾಕಷ್ಟು ರೈತರು ಕಬ್ಬು ಬೆಳೆಯುವುದನ್ನೇ
ಕೈಬಿಟ್ಟಿದ್ದಾರೆ. ಅದರ ಪರಿಣಾಮ ಸಕ್ಕರೆ ಉತ್ಪಾದನೆಯ ಮೇಲಾಗುವುದು ನಿಶ್ಚಿತ.
ಜವಳಿ ಪಾರ್ಕ್, ವೈನ್ ಪಾರ್ಕ್, ಜೈವಿಕ ಪಾರ್ಕ್ಗಳ ಆರಂಭದ ಕಳೆದ ಬಜೆಟ್
ಭರವಸೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಜೊತೆಗೆ ರಾಜ್ಯದ ರಸ್ತೆ, ರೈಲು ಮತ್ತು ವಿಮಾನ
ಸಂಪರ್ಕ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿಲ್ಲ. ಬಂದರುಗಳಿಗೆ ರಾಜ್ಯದ
ವಿವಿಧ ಔದ್ಯಮಿಕ ನಗರಗಳಿಂದ ರೈಲು ಮತ್ತು ರಸ್ತೆ ಸಂಪರ್ಕ ವ್ಯವಸ್ಥೆ ತೀರಾ
ಹದಗೆಟ್ಟಿದೆ. ಜಲ ಸಂಪನ್ಮೂಲ ಮತ್ತು ವಿದ್ಯುತ್ ಕೊರತೆ ಮುಂದಿನ ದಿನಗಳಲ್ಲಿ
ರಾಜ್ಯದ ಉದ್ಯಮ ವಲಯವನ್ನು ಕಂಗೆಡಿಸುವ ಸ್ಥಿತಿ ಇದೆ. ಮೂಲ ಸೌಕರ್ಯಗಳನ್ನು
ಉತ್ತಮಪಡಿಸುವ ಮೂಲಕ ಉದ್ಯಮಿಗಳನ್ನು ರಾಜ್ಯದಲ್ಲೇ ಉಳಿಸಿಕೊಳ್ಳುವುದರ ಜೊತೆಗೆ
ಇನ್ನಷ್ಟು ಬಂಡವಾಳವನ್ನು ಆಕರ್ಷಿಸುವುದು ಈಗಿನ ಅಭಿವೃದ್ಧಿ ದರವನ್ನು
ಕಾಯ್ದುಕೊಳ್ಳುವಲ್ಲಿ ಅನಿವಾರ್ಯ. ಹಾಗೇ ಉದ್ಯಮದ ಆದ್ಯತೆ ಕೃಷಿ ಮತ್ತು ಇತರ
ವಲಯಗಳಿಗೆ ಕಂಟಕಪ್ರಾಯವಾಗದಂತೆ ಎಚ್ಚರಿಕೆ ವಹಿಸುವ ಅಗತ್ಯ ಕೂಡ ಹೆಚ್ಚಿದೆ.
ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳನ್ನು
ಖಾಸಗಿ ವಲಯ ಹಿಂದಿಕ್ಕಿದೆ. ಆದರೆ, ಸಾರ್ವಜನಿಕ ವಲಯದ ಹಲವು ಉದ್ಯಮಗಳು
ಇಂದಿಗೂ ಗಣನೀಯ ಪ್ರಮಾಣದ ಕೊಡುಗೆ ನೀಡುತ್ತಿವೆ ಎಂಬುದನ್ನು ಮರೆಯುವಂತಿಲ್ಲ.
ಹಾಗೇ ಬೃಹತ್ ಮತ್ತು ಸಣ್ಣ ಉದ್ಯಮಗಳು ಸಮತೋಲನ ಕೂಡ ಗಮನಿಸಬೇಕಾದ ಅಂಶ.
ವಿದ್ಯುತ್ನಂತಹ ಮೂಲ ಸೌಕರ್ಯದ ಕೊರತೆಯಿಂದಾಗಿ ಕಳೆದ ವರ್ಷ ಶೇ.50ರಷ್ಟು
ಸಣ್ಣ ಉದ್ಯಮಗಳು ಬಾರಿ ನಷ್ಟ ಅನುಭವಿಸಿವೆ.
ಇನ್ನು ರಾಜ್ಯದಲ್ಲಿ ಆಟೋಮೊಬೈಲ್,
ಎಲೆಕ್ಟ್ರಾನಿಕ್, ಜವಳಿ, ಉಕ್ಕು ಮತ್ತು ಜೈವಿಕ ತಂತ್ರಜ್ಞಾನ ಉದ್ಯಮದ
ಸಾಧ್ಯತೆಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಈ ಮಾತು
ಪ್ರವಾಸೋದ್ಯಮ ಕ್ಷೇತ್ರಕ್ಕೂ ಅನ್ವಯಿಸದೇ ಇರದು.
ಪ್ರಮುಖವಾಗಿ ಗಣಿ ಉದ್ಯಮದಲ್ಲಿ ಪಾರದರ್ಶಕತೆ
ತರಬೇಕಿದೆ. ಉದ್ಯಮದ ಹೆಸರಲ್ಲಿ ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಲೂಟಿ
ಹೊಡೆಯುತ್ತಿರುವ ಗಣಿ ದಣಿಗಳಿಗೆ ಕಡಿವಾಣ ಹಾಕಬೇಕಿದೆ. ಗಣಿ ನೀತಿಯನ್ನು
ಸಂಪೂರ್ಣ ಪರಿಷ್ಕರಣೆಗೊಳಪಡಿಸಿ ಅಕ್ರಮ ಹಣವನ್ನು ಸರ್ಕಾರದ ಬೊಕ್ಕಸಕ್ಕೆ
ತಿರುಗಿಸಬೇಕಿದೆ. ಹಾಗೇ ರಿಯಲ್ ಎಸ್ಟೇಟ್ ಉದ್ಯಮ ಕೂಡ ತೀವ್ರ ಪ್ರಮಾಣದಲ್ಲಿ
ಬೆಳೆಯುತ್ತಿದ್ದು, ಅದನ್ನೂ ಕಾನೂನಿನ ಅಂಕುಶದಲ್ಲಿ ಪಳಗಿಸಿದಲ್ಲಿ ಸಾವಿರಾರು
ಕೋಟಿ ರೂಪಾಯಿ ಆದಾಯ ಮೂಲವಾಗಲಿದೆ. ಆದರೆ, ಆ ಎರಡೂ ವಲಯದ ಪ್ರಭಾವಿಗಳು ಈಗ
ಮುಖ್ಯಮಂತ್ರಿಗಳ ಸರ್ಕಾರದಲ್ಲೂ ಪಾಲುದಾರರಾಗಿದ್ದಾರೆ. ಹಾಗಾಗಿ ಈಗ
ಅವರೆದರುರು ತಾವೇ ಹೇಳಿದ ಸಮೃದ್ಧ ಕರ್ನಾಟಕದ ಕನಸು ಮತ್ತು ತಮ್ಮ ಅಧಿಕಾರದ
ಆಧಾರ ಸ್ತಂಭಗಳಾಗಿರುವ ಈ ಎರಡು ಉದ್ಯಮಗಳಲ್ಲಿ ಯಾವುದನ್ನು
ಆಯ್ಕೆಮಾಡಿಕೊಳ್ಳಬೇಕು ಎಂಬ ಬಹುದೊಡ್ಡ ಸವಾಲಿದೆ. ಕರ್ನಾಟಕವನ್ನು ಮಾದರಿ
ರಾಜ್ಯವನ್ನಾಗಿ ಮಾಡುತ್ತೇವೆ, ಸಮಗ್ರ ಅಭಿವೃದ್ಧಿಗಾಗಿ ತಮಗೆ ಮತ ನೀಡಿ ಎಂದು
ಅಧಿಕಾರದ ಗದ್ದುಗೆ ಏರಿರುವ ಮಾನ್ಯ ಮುಖ್ಯಮಂತ್ರಿಗಳು ಯಾವುದನ್ನು
ಆಯ್ಕೆಮಾಡಿಕೊಳ್ಳುತ್ತಾರೆ ಕಾದು ನೋಡೋಣ.
ಟಿಎಸ್ಐ
4
ಬಣಗುಡುವ ಉದ್ಯಮ, ಹಸಿದ ಹೊಲ...
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ
ಹೆಚ್ಚಿದ್ದರೂ ಕೊರತೆ ಅನುಭವಿಸುತ್ತಿದ್ದೇವೆ. ಇನ್ನೊಂದೆಡೆ ನೀರಾವರಿ
ಯೋಜನೆಗಳು ಕೂಡ ಭ್ರಷ್ಟಾಚಾರದ ಕೂಪವಾಗಿ ಪರಿವರ್ತನೆಗೊಂಡು ನರಳುತ್ತಿವೆ.
ರಾಜ್ಯದ
ಅರ್ಥ ವ್ಯವಸ್ಥೆ ನಿಂತಿರುವುದು ಕೃಷಿ ಮತ್ತು ಉದ್ಯಮ ವಲಯದ ಮೇಲೆ. ರಾಜ್ಯದ
ಸಮಗ್ರ ಅಭಿವೃದ್ಧಿಗೆ ಅವೆರಡೂ ವಲಯಗಳ ಏಳಿಗೆ ಅನಿವಾರ್ಯ. ಆ ಎರಡೂ ವಲಯಗಳಿಗೆ
ವಿದ್ಯುತ್ ನಿರ್ಣಾಯಕ. ದುರದೃಷ್ಟವೆಂದರೆ ವಿದ್ಯುತ್ ಕೊರತೆಯಿಂದಾಗಿ ಕಳೆದ
ಬೇಸಿಗೆಯಲ್ಲಿ ರಾಜ್ಯದ ಉದ್ಯಮ ವಲಯ ಶೇ.20
ರಷ್ಟು ನಷ್ಟ ಅನುಭವಿಸಿದೆ. ಇನ್ನು ಕೃಷಿ ವಲಯದ ನಷ್ಟವನ್ನು
ಲೆಕ್ಕವಿಟ್ಟವರಿಲ್ಲ.
ಮಳೆ ಪ್ರಮಾಣದ ತೀರಾ ಕಡಿಮೆ ಇರುವ ಗುಜರಾತ್ನಲ್ಲಿ
ವಿದ್ಯುತ್ ಸ್ವಾವಲಂಬನೆ ಸಾಧಿಸುವುದು ಸಾಧ್ಯವಾದರೆ ಹತ್ತಾರು ಪ್ರಮುಖ
ನದಿಗಳನ್ನು ಹೊಂದಿರುವ, ಯಥೇಚ್ಛ ಮಳೆ ಸುರಿಯುವ ಕರ್ನಾಟಕದಲ್ಲಿ ಏಕೆ
ಸಾಧ್ಯವಿಲ್ಲ ಎಂಬ ಪ್ರಶ್ನೆ 'ಗುಜರಾತ್
ಮಾದರಿ'ಯ
ಕನಸು ಹೊತ್ತಿರುವ ಮುಖ್ಯಮಂತ್ರಿಗಳಿಗೆ ಈಗಾಗಲೇ ಎದುರಾಗಿರಬಹುದು. ರಾಜ್ಯದ
ವಿದ್ಯುತ್ ಉತ್ಪಾದನೆ (ಜಲ ವಿದ್ಯುತ್, ಉಷ್ಣ ವಿದ್ಯುತ್ ಮತ್ತು ಪವನಶಕ್ತಿ
ಸೇರಿ) ಸಾಮರ್ಥ್ಯ 7,784
ಮೆಗಾ ವ್ಯಾಟ್. ಆದರೆ, ಉತ್ಪಾದನೆಯಾಗುತ್ತಿರುವುದು
7,048
ಮೆಗಾ ವ್ಯಾಟ್. ರಾಜ್ಯದಲ್ಲಿ ಬೇಡಿಕೆ ಇರುವುದು 6,253ಮೆಗಾ
ವ್ಯಾಟ್ಗೆ. ಅಂದರೆ, ಅಗತ್ಯ ಪ್ರಮಾಣಕ್ಕಿಂತ ಸುಮಾರು
800 ಮೆಗಾ
ವ್ಯಾಟ್ ಅಧಿಕ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೂ,
500-600
ಮೆಗಾ ವ್ಯಾಟ್ ವಿದ್ಯುತ್ ಕೊರತೆ ರಾಜ್ಯವನ್ನು ಕಾಡುತ್ತಿದೆ!
ನೀರಾವರಿ ಸೌಲಭ್ಯಗಳ ವಿಷಯದಲ್ಲಿ ರಾಜ್ಯ
ದೇಶದಲ್ಲೇ ಅತ್ಯಂತ ಹಿಂದೆ ಬಿದ್ದಿರುವ ಪ್ರದೇಶ. ಹಾಗಾಗಿ ರಾಜ್ಯದಲ್ಲಿ
ನೀರಾವರಿ ಮತ್ತಿತರ ಸಮಸ್ಯೆಯಿಂದಾಗಿ ಸುಮಾರು ನಾಲ್ಕು ಲಕ್ಷ ಹೆಕ್ಟೇರ್ ಕೃಷಿ
ಯೋಗ್ಯ ಭೂಮಿ ಇನ್ನೂ ಸಾಗುವಳಿಗೆ ಲಭ್ಯವಾಗದೆ ಪಾಳುಬಿದ್ದಿದೆ.
ರಾಜ್ಯದ ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ
ಅವಕಾಶವಿರುವಷ್ಟು ಪ್ರಮಾಣದಲ್ಲಿ ನೀರಾವರಿ ಯೋಜನೆಗಳ ಮೂಲಕ ರಾಜ್ಯದ ಪಾಲಿನ
ನೀರಿನ ಸದ್ಬಳಕೆ ಮಾಡಿಕೊಂಡಿಲ್ಲ. ಕಾವೇರಿ ಕಣಿವೆಯಲ್ಲಿ ನೀರಿನ ಬಳಕೆ
ಪ್ರಮಾಣದಲ್ಲಿ ನ್ಯಾಯಮಂಡಳಿಯ ಪಕ್ಷಪಾತದ ತೀರ್ಪು ಅಡ್ಡಗಾಲಾಗಿದೆ. ಆ
ನಿಟ್ಟಿನಲ್ಲಿ ಸರ್ಕಾರ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ತನ್ನ
ಪರವಾಗಿರುವಂತೆ ಸಮರ್ಪಕ ವಾದ ಮಂಡಿಸಬೇಕಿದೆ. ಹಾಗೇ ಕೃಷ್ಣಾ ಕಣಿವೆಯಲ್ಲಿ
ಬಚಾವತ್ ತೀರ್ಪಿನ ಪ್ರಕಾರ ರಾಜ್ಯದ ಪಾಲಿನ 734
ಟಿಎಂಸಿ ಅಡಿ ನೀರು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಆ ನೀರಿನ ಬಳಕೆಗೆ
2000ನೇ
ಸಾಲಿಗೆ ಕಾಲಮಿತಿ ಮುಗಿದಿದ್ದರೂ ಇನ್ನೂ ಕೇವಲ
600 ಟಿಎಂಸಿ ಅಡಿ ನೀರನ್ನು
ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಕಳೆದ ಹಲವು ದಶಕಗಳಿಂದ
ನೆನಗುದಿಗೆ ಬಿದ್ದಿರುವ ತುಂಗಾ ಮೇಲ್ಡಂಡೆ, ಭದ್ರಾ ಮೇಲ್ಡಂಡೆ, ಮಲಪ್ರಭಾ-
ಘಟಪ್ರಭಾ, ಬೆಣ್ಣೆತೋರಾ ಮುಂತಾದ ವಿವಿಧ ಹಂತದ ಯೋಜನೆಗಳಿಗೆ ಮುಕ್ತಿ
ನೀಡಬೇಕಿದೆ. ಭದ್ರಾ ನಾಲೆಗಳ ಆಧುನೀಕರಣ ಕಾಮಗಾರಿ ಕೂಡ ಜರೂರಾಗಿ
ಮುಗಿಯಬೇಕಿದೆ. ಆ ನಂತರ ಅಲ್ಲಿ ಉಳಿತಾಯವಾಗುವ ನೀರು ಮತ್ತು ಭದ್ರಾ ನದಿಯಲ್ಲಿ
ನಿಜವಾಗಿಯೂ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಭದ್ರಾ ಮೇಲ್ದಂಡೆ
ಯೋಜನೆಗೆ ಚಾಲನೆ ನೀಡಬೇಕಿದೆ. ಕೃಷ್ಣಾ ಮೇಲ್ದಂಡೆ ಮೊದಲ ಹಂತದ ಎರಡನೇ ಮತ್ತು
ಮೂರನೇ ವಿಭಾಗದ ಕಾಮಗಾರಿ ಕೂಡ ಜರೂರಾಗಿ ಮುಗಿಯಬೇಕಿದೆ. ಆ ಮೂಲಕ ಬರಪೀಡಿತ
ಗುಲ್ಬರ್ಗಾ, ರಾಯಚೂರು, ಬಿಜಾಪುರ ಜಿಲ್ಲೆಗಳಿಗೆ ಹಾಗೂ ಮಲಪ್ರಭಾ- ಘಟಪ್ರಭಾ
ಯೋಜನೆಗಳ ಅನುಷ್ಠಾನದ ಮೂಲಕ ಬೆಳಗಾವಿ ಜಿಲ್ಲೆಯ ಒಣ ಭೂಮಿಗೆ ನೀರು
ಹರಿಸಬೇಕಿದೆ. ಸಿಂಗಟಾಲೂರು ಏತ ನೀರಾವರಿ, ಅಮರ್ಜಾ, ಮುಲ್ಲಾಮಾರಿ, ವಾರಾಹಿ
ಯೋಜನೆಗಳು ಕೂಡ ತ್ವರಿತವಾಗಿ ಮುಗಿಯಬೇಕಿದೆ.
ಬೃಹತ್ ಯೋಜನೆಗಳಿಂದಾಗಿ ಪರಿಸರ ನಾಶ, ಜೈವಿಕ
ಸಮತೋಲನ ಏರುಪೇರು ಹಾಗೂ ಬೃಹತ್ ಬಂಡವಾಳ ಹೂಡಿಕೆಯಂತಹ ಹೊರೆಗಳು
ಎದುರಾಗುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ರೈತ
ಕಾಯಕ ಕೆರೆಯಂತಹ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ
ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪದರ್ಶಿಸಿದಲ್ಲಿ ವಿವಾದಗಳಿಲ್ಲದೆ
ಸಾಕಷ್ಟು ನೀರಾವರಿ ಸಮಸ್ಯೆ ಬಗೆಹರಿಸುವುದು ಸಾಧ್ಯ. ಗುತ್ತಿಗೆದಾರರ ಲಾಬಿಗೆ
ಮಣಿಯದ ಪ್ರಾಮಾಣಿಕತೆ ಕೂಡ ಅದಕ್ಕೆ ಬೇಕು. ಹಾಗೇ ಈಗಾಗಲೇ ಇರುವ ನೀರಾವರಿ
ಪ್ರದೇಶದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಬೆಳೆ ನೀತಿ ಉಲ್ಲಂಘನೆಯನ್ನು
ಪರಿಣಾಮಕಾರಿಯಾಗಿ ತಡೆದು ನೀರಿನ ಸದ್ಬಳಕೆಗೆ ಅವಕಾಶ ಕಲ್ಪಿಸಬೇಕು. ಅಕ್ರಮ
ಪಂಪ್ಸೆಟ್ ಮತ್ತು ಮುಗಿಬಿದ್ದು ಎಲ್ಲರೂ ಅಧಿಕ ನೀರು ಬೇಡುವ ಬೆಳೆಗಳನ್ನೇ
ಬೆಳೆಯುವುದನ್ನು ನಿಯಂತ್ರಿಸಬೇಕಿದೆ. ನೀರಾವರಿ ಸೌಲಭ್ಯದ ಕೊರತೆ ಇರುವ ಕಡೆ
ಪರ್ಯಾಯ ಬೆಳೆಗಳನ್ನು ಲಾಭದಾಯಕವಾಗಿ ಬೆಳೆಯುವಂತಹ ಪರಿಸ್ಥಿತಿ ನಿರ್ಮಾಣ
ಮಾಡಬೇಕು. ಮಾರುಕಟ್ಟೆ, ಮೂಲಸೌಕರ್ಯದಂತಹ ಸೌಲಭ್ಯ ಕಲ್ಪಿಸಬೇಕು. ಯಡಿಯೂರಪ್ಪ
ಅವರೊಬ್ಬರೇ ಇದಕ್ಕೆ ಟೊಂಕ ಕಟ್ಟಿ ನಿಂತರೆ ಸಾಲದು.
ಟಿಎಸ್ಐ
5
ನಾವು ತಿನ್ನುವ ಅನ್ನಕ್ಕೂ ಕನ್ನ!
ವ್ಯತಿರಿಕ್ತ ಕೃಷಿ ನೀತಿಯಿಂದಾಗಿ ರಾಜ್ಯದ ಕೃಷಿ
ವಲಯ ತತ್ತರಿಸಿ ಹೋಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅಪ್ಪಟ
'ಮಣ್ಣಿನ ಮಗ'
ರೈತರ ನೋವಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ.
'ರೈತರು'
ಮತ್ತು 'ಭಗವಂತ'ನ
ಹೆಸರಿನಲ್ಲಿ ನಮ್ಮ ನೂತನ ಮುಖ್ಯಮಂತ್ರಿಗಳು ಅಧಿಕಾರ ಗೌಪ್ಯತೆಯ ಪ್ರಮಾಣವಚನ
ಸ್ವೀಕರಿಸಿದ್ದಾರೆ. ಆದರೆ, ದುರಂತವೆಂದರೆ ಅವರ ಮುಂದಿರುವ ಮಹತ್ವದ
ಸವಾಲುಗಳಲ್ಲಿ ದೇವರಿಗಿಂತ (ದತ್ತಪೀಠ, ಹಿಂದುತ್ವ) ರೈತರದ್ದೇ ಒಂದು ಪಟ್ಟು
ಹೆಚ್ಚು. ಒಂದೆಡೆ ಬರ ಮತ್ತೊಂದೆಡೆ ಪ್ರವಾಹ, ಇತ್ತ ರೈತರ ಸರಣಿ ಆತ್ಮಹತ್ಯೆ
ಅತ್ತ ಕೃಷಿ ಉತ್ಪಾದನೆಯ ಭಾರೀ ಕುಸಿತ, ನೀರಾವರಿ ಸೌಲಭ್ಯದಲ್ಲಿ ದೇಶದಲ್ಲೇ
ಅತ್ಯಂತ ಹಿಂದುಳಿದಿರುವುದು, ಬಂಜರು ಭೂಮಿ ಪ್ರಮಾಣದಲ್ಲಿ ರಾಜಸ್ಥಾನದ ನಂತರದ
ಸ್ಥಾನ ಪಡೆದಿರುವುದು... ಹೀಗೆ ಸಮಸ್ಯೆಗಳ ದೊಡ್ಡ ಸಾಲೇ
'ರೈತ ನಾಯಕ'
ಯಡಿಯೂರಪ್ಪ ಅವರನ್ನು ಎದುರುಗೊಳ್ಳುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ ಒಂದು ಅಂದಾಜಿನ
ಪ್ರಕಾರ ರಾಜ್ಯದಲ್ಲಿ 20
ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವತಃ ಅವರ ಸ್ವಕ್ಷೇತ್ರ
ಶಿಕಾರಿಪುರ ತಾಲ್ಲೂಕಿನಲ್ಲೇ ಕಳೆದ ಒಂದೇ ವರ್ಷದಲ್ಲಿ ಏಳು ಮಂದಿ ರೈತರು (ಗಂಡ-
ಹೆಂಡತಿ ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೂ ಸೇರಿ) ಜೀವ
ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲೂ ರಾಜ್ಯ ಇತರ ರಾಜ್ಯಗಳನ್ನು
ಹಿಂದಿಕ್ಕಿದೆ. ಬರಗಾಲ, ಸಾಲದ ಹೊರೆ, ಹೀನಾಯ ಸ್ಥಿತಿಯಲ್ಲಿರುವ ಕೃಷಿ
ಮಾರುಕಟ್ಟೆ ವ್ಯವಸ್ಥೆ, ಸಣ್ಣ ಮತ್ತು ಅತಿಸಣ್ಣ ರೈತರ ಪ್ರಮಾಣವೇ ಹೆಚ್ಚಿರುವ
ತುಂಡು ಭೂಮಿ ಕೃಷಿ, ದುಬಾರಿಯಾಗಿರುವ ಕೃಷಿ ಮುಂತಾದವೇ ರೈತರ ಕೊಲೆಗಡುಕ
ಅಂಶಗಳು ಎಂಬುದು ತಿನ್ನುವ ಅನ್ನ ಎಲ್ಲಿಂದ ಬರುತ್ತದೆ ಎಂಬ ಅರಿವಿರುವ
ಎಲ್ಲರಿಗೂ ಗೊತ್ತಿರುವ ಸತ್ಯವೇ.
ರಾಜ್ಯದ ರೈತರ ಆದಾಯ ಕೂಡ ಕಳೆದ ಒಂದೂವರೆ
ದಶಕದಿಂದ ಏರಿಕೆ ಕಂಡಿಲ್ಲ. ಆದರೆ, ಅವರು ಕೃಷಿಗೆ ಸುರಿಯುವ ಬೀಜ, ಗೊಬ್ಬರ
ಸೇರಿದಂತೆ ಕೃಷಿ ಕೂಲಿ ದರದಲ್ಲಿ ಕೂಡ ಮೂರ್ನಾಲ್ಕು ಪಟ್ಟು
ಏರಿಕೆಯಾಗಿದೆ.ರಾಜ್ಯದ ಜಿಡಿಪಿ(ಒಟ್ಟು ರಾಜ್ಯ ಉತ್ಪನ್ನ)ಯಲ್ಲಿ ಕೃಷಿ
ಉತ್ಪನ್ನಗಳ ಕೊಡುಗೆ ಶೇ.1.5
ಮಾತ್ರ. ಕಳೆದ ಕೆಲವು ವರ್ಷಗಳಿಂದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಆತಂಕಕಾರಿ
ಪ್ರಮಾಣದಲ್ಲಿ ಕುಸಿಯುತ್ತಲೇ ಇದೆ. ಹಣಕಾಸು ಖಾತೆಯನ್ನೂ ನಿರ್ವಹಿಸಿದ
ಅನುಭವವಿರುವ ಯಡಿಯೂರಪ್ಪ ಅವರಿಗೆ, ಇಂತಹ ವ್ಯತಿರಿಕ್ತ ಬೆಳವಣಿಗೆಯಿಂದಾಗಿ
ಕೃಷಿ ವಲಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ, ಈಗಾಗಾಲೇ
ದುಬಾರಿಯಾಗುತ್ತಿರುವ ಕೃಷಿ ಮತ್ತು ಕಾರ್ಮಿಕರ ಸಮಸ್ಯೆಯಿಂದ ದಿಕ್ಕೆಟ್ಟಿರುವ
ನೀರಾವರಿ ಮತ್ತು ಮಳೆಯಾಶ್ರಿತ ಭಾಗದ ರೈತರು ಕೃಷಿಗೆ ಬೆನ್ನು ಹಾಕಿ
ನಗರಗಳತ್ತ ವಲಸೆ ಬರುವ ಪ್ರಮಾಣ ಹೆಚ್ಚಲಿದೆ ಎಂಬುದು ಅರ್ಥವಾಗದೇ ಇರದು.
ಕಳೆದ 2006ರ
ಡಿಸೆಂಬರ್ನಲ್ಲಿ ಬಿಜೆಪಿ- ಜೆಡಿ(ಎಸ್) ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ
ಬೆಳವಣಿಗೆ ಮತ್ತು ಉತ್ಪಾದನೆ ದರವನ್ನು ಮುಂದಿನ ಹತ್ತು ವರ್ಷಗಳಲ್ಲಿ
ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯಿಂದ 'ರೈತ
ಕೇಂದ್ರಿತ ಕೃಷಿ ನೀತಿ'ಯನ್ನು
ಪ್ರಕಟಿಸಿದ್ದರು. ಆದರೆ, ಆ ನೀತಿ ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬಂದಿದೆ
ಎಂಬುದರತ್ತ ಮಾನ್ಯ ಮುಖ್ಯಮಂತ್ರಿಗಳು ತುರ್ತು ಗಮನ ಹರಿಸಬೇಕಿದೆ. ಸಾಕಷ್ಟು
ಸದಾಶಯದ ಅಂಶಗಳಿಂದ ಕೂಡಿದ್ದ ಕೃಷಿ ನೀತಿಯನ್ನು ಪರಿಣಾಮಕಾರಿಯಾಗಿ
ಅನುಷ್ಠಾನಕ್ಕೆ ತರುವುದು ತೀರಾ ಜರೂರಾಗಿ ಆಗಬೇಕಿದೆ.
ರೈತ ಹಿತ ಕಾಯುವುದು ಎಂದರೆ, ಸಾಲ ಮನ್ನಾದಂತಹ
ಜನಪ್ರಿಯ ಕ್ರಮಗಳ ಘೋಷಣೆ ಎಂಬ ಮತಬ್ಯಾಂಕ್ ಕೇಂದ್ರಿತ ಆಶಯದಿಂದ ಹೊರಬಂದು
ವಾಸ್ತವಾಂಶಗಳನ್ನು ಅಧ್ಯಯನ ಮಾಡುವುದು ಮುಖ್ಯ. ಆ ನಿಟ್ಟಿನಲ್ಲಿ ಹಣಕಾಸು
ಸಚಿವರಾಗಿ ತಾವು ಕಳೆದ ಅವಧಿಯಲ್ಲಿ ಮಾಡಿದ ಸಾಲ ಮನ್ನಾದ ಪ್ರಯೋಜನ ಯಾವ
ರೈತರಿಗೆ ಅಂದರೆ; ಅವರ ಆರ್ಥಿಕ, ಭೂ ಒಡೆತನ ಪ್ರಮಾಣ, ಸಾಮಾಜಿಕ ಹಿನ್ನೆಲೆ
ಆಧರಿಸಿ- ಆಗಿದೆ ಎಂಬುದನ್ನು ವಿವೇಚಿಸಬೇಕಿದೆ. ಮೇಲ್ವರ್ಗ ಮತ್ತು ಮೇಲ್ಜಾತಿ
ರೈತರ ಆಡುಂಬೊಲಗಳಾಗಿರುವ ಸಹಕಾರ ಬ್ಯಾಂಕುಗಳು ಎಷ್ಟರಮಟ್ಟಿಗೆ ನಿಜವಾಗಿಯೂ
ಸಂಕಷ್ಟದಲ್ಲಿರುವ ಕೆಳ ವರ್ಗದ ರೈತರಿಗೆ ನೆರವು ನೀಡಿವೆ ಎಂಬುದು
ಪರಾಮರ್ಶೆಗೊಳ್ಳಬೇಕಿದೆ.
ಒಂದೆಡೆ ನೀರಾವರಿ ಕೊರತೆ, ಇನ್ನೊಂದೆಡೆ
ನೀರಿನ ಅವೈಜ್ಞಾನಿಕ ನಿರ್ವಹಣೆಯಿಂದ ಒದ್ದೆ ಮರುಭೂಮಿಯಾಗುತ್ತಿರುವ ನೀರಾವರಿ
ಭೂಮಿ. ರೈತರಿಗೆ ಸಕಾಲಕ್ಕೆ ಬೀಜ, ಗೊಬ್ಬರಗಳು ದೊರೆಯದಿರುವುದು, ಕಳಪೆ ಬೀಜ-
ಗೊಬ್ಬರ ವಂಚನೆ ಜಾಲಕ್ಕೆ ಕೃಷಿ ಅಧಿಕಾರಿಗಳೇ ಬೆಂಗಾವಲಾಗಿರುವುದು. ವಿಶೇಷ
ಆರ್ಥಿಕ ವಲಯ, ಕೈಗಾರಿಕೆಗಳು, ರಾಷ್ಟ್ರೀಯ ಬೀಜ ಮಸೂದೆಯಂತಹ ರೈತ ವಿರೋಧಿ
ಮಸೂದೆಗಳು... ಹೀಗೆ ಕೃಷಿ ಸವಾಲುಗಳು ಬೆಟ್ಟದಷ್ಟಿವೆ. ಕೃಷಿ ಸಬಲೀಕರಣದ
ಹೊರತು ಅದರೊಂದಿಗೇ ತಳಕು ಹಾಕಿಕೊಂಡಿರುವ ಆತ್ಮಹತ್ಯೆ, ಬಡತನ, ಅನಕ್ಷರತೆ,
ನಗರ ಪ್ರದೇಶಕ್ಕೆ ವಲಸೆ ಮುಂತಾದ ಸಮಸ್ಯೆಗಳನ್ನು ತೊಡೆದುಹಾಕಲಾಗದು
ಎಂಬುದನ್ನು 'ರೈತ
ನಾಯಕ'ರಿಗೆ
ನೆನಪಿಸಬೇಕಿಲ್ಲ ಎಂದು ಆಶಿಸೋಣ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ
ಅಪ್ಪಟ 'ಮಣ್ಣಿನ
ಮಗ'ನೇ
ಅಲ್ಲವೇ?
ಟಿಎಸ್ಐ
6
ಸಾಮಾಜಿಕ ಸ್ವಾಸ್ಥ್ಯದ ಹೊರೆ
ಒಂದು ಕಾಲದಲ್ಲಿ ಹಾರ್ಡ್ಕೋರ್ ಹಿಂದುತ್ವವನ್ನೇ
ತನ್ನ ಬಂಡವಾಳ ಮಾಡಿಕೊಂಡಿತ್ತು ಬಿಜೆಪಿ. ಆದರೀಗ, ಕೇಸರಿ ಪಕ್ಷ ಹಿಂದುತ್ವ
ಮುಖವಾಡ ಕಳಚಿ ಎಲ್ಲರನ್ನೂ ಅಪ್ಪಿಕೊಳ್ಳಲು ಹೊರಟಿದೆ. ಮುಂದೆ..?
ಇಪ್ಪತ್ತೊಂದು
ವರ್ಷಗಳಷ್ಟು ಕಾಲ ದೀರ್ಘ ಹೋರಾಟದ ನಂತರ ಬಿಜೆಪಿ ಕರ್ನಾಟಕದಲ್ಲಿ ನೆಲೆ
ನಿಂತಿದೆ. ಆದರೆ, ಅಂದಿನಿಂದ ಇಂದಿನವರೆಗೆ ಬಿಜೆಪಿ ಸಮಾಜದ ಮೇಲ್ವರ್ಗ ಹಾಗೂ
ಹಿಂದು ಪಕ್ಷ ಎಂಬ ಹಣೆಪಟ್ಟಿಯನ್ನೇ ಹೊತ್ತುಕೊಂಡು ಬಂದಿದೆ. ಅಲ್ಪಸಂಖ್ಯಾತರು,
ದಲಿತರು ಮತ್ತು ಸಮಾಜದ ಕೆಳಸ್ತರದಲ್ಲಿರುವ ಜನಸಾಮಾನ್ಯ ಇದುವರೆಗೆ
ಬಿಜೆಪಿಯನ್ನು ತನ್ನ ಪಕ್ಷ ಎಂದು ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿಯೇ
ಅಪ್ಪಿಕೊಂಡಿಲ್ಲ. ಇಂತಹ ಸನ್ನಿವೇಶದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ
ಒಟ್ಟಾರೆ ಸಮಾಜದ ಬೆಂಬಲವನ್ನು ಹೇಗೆ ಕಾಪಾಡುತ್ತದೆ ಮತ್ತು ಹೇಗೆ ಸಾಮಾಜಿಕ
ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಹೋಗುತ್ತದೆ ಎನ್ನುವುದು ಕುತೂಹಲಕಾರಿ ಅಂಶ.
ಏಕೆಂದರೆ ರಾಜ್ಯದಲ್ಲಿನ ಒಟ್ಟು 5.28
ಕೋಟಿ ಜನಸಂಖ್ಯೆಯ ಪೈಕಿ ಶೇಕಡಾ 40ರಷ್ಟು
ದಲಿತರು ಮತ್ತು ಅಲ್ಪಸಂಖ್ಯಾತರಿದ್ದಾರೆ. ಈಗ ಅಧಿಕಾರದ ಗದ್ದುಗೆಗೇರಿದ
ಬಿಜೆಪಿ ಯಾವುದೇ ಕಾರಣಕ್ಕೆ ಸಮಾಜದ ಈ ಭಾಗವನ್ನು ರಾಜಕೀಯ ಹಾಗೂ ಸಾಮಾಜಿಕವಾಗಿ
ಅವಗಣಿಸುವ ಹಾಗಿಲ್ಲ. ಅಕಸ್ಮಾತ್ ದಲಿತರು- ಅಲ್ಪಸಂಖ್ಯಾತರನ್ನು ಅವಗಣಿಸಿದರೆ
ಅದು ಕರ್ನಾಟಕದಲ್ಲಿ ಬಿಜೆಪಿಯ ಅಂತ್ಯಕ್ಕೆ ಬರೆದ ಮುನ್ನುಡಿ ಎಂದೇ
ತಿಳಿದುಕೊಳ್ಳಬಹುದು.
ಕರ್ನಾಟಕದ ವಿಧಾನಸಭಾ ಚುನಾವಣೆಗೆ ನಡೆದ
ಪ್ರಚಾರವನ್ನು ಗಮನಿಸಿದಾಗ, ಬಿಜೆಪಿ ನಿಧಾನವಾಗಿ ಹಿಂದುತ್ವ ಮುಖವಾಡವನ್ನು
ಕಳಚಿಕೊಳ್ಳಲಾರಂಭಿಸಿದೆ. ಬಿಜೆಪಿಯ ಹಿಂದುತ್ವದ ಸಂಕೇತವಾಗಿರುವ ಗುಜರಾತ್
ಮುಖ್ಯಮಂತ್ರಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡಿದ
ಸಂದರ್ಭದಲ್ಲಿ ಕೂಡ 'ಹಿಂದುತ್ವ'ದ
ಬಗ್ಗೆ ಒಂದೇ ಒಂದು ಪದವನ್ನೂ ಉಚ್ಛರಿಸಲಿಲ್ಲ. ಮೋದಿ ಮಾತ್ರವಲ್ಲ, ಬಿಜೆಪಿಯ
ಯಾವುದೇ ಒಬ್ಬ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರೂ ಈ ಬಗ್ಗೆ ಒಂದೇ ಒಂದು
ಮಾತನ್ನು ಪ್ರಚಾರದ ಉದ್ದಕ್ಕೂ ಆಡಿಲ್ಲ. ಈ ವಿಷಯವನ್ನು ಗಮನಿಸಿದರೆ ಕ್ರಮೇಣ
ಬಿಜೆಪಿ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ.
ಪ್ರಜ್ಞಾಪೂರ್ವಕವಾಗಿಯೇ ಪಕ್ಷ ಆ ನಿಲುವನ್ನು ತಳೆದಿದೆ ಎನ್ನುವುದು ಕೂಡ
ಪಕ್ಷದ ಹಿರಿಯ ಮುಖಂಡರನ್ನು ಮಾತನಾಡಿಸಿದಾಗ ಸ್ಪಷ್ಟವಾಗುತ್ತದೆ. ಕ್ರಮೇಣ
ಬಿಜೆಪಿ ದಲಿತರು ಮತ್ತು ಅಲ್ಪಸಂಖ್ಯಾತರನ್ನು ಓಲೈಸುವತ್ತ ಹೆಜ್ಜೆ
ಹಾಕುತ್ತಿರುವುದು ಈಗ ಸ್ಪಷ್ಟವಾಗುತ್ತಿದೆ. ಆ ನಿಟ್ಟಿನಲ್ಲಿ ಬಿಜೆಪಿ
ಸ್ವಲ್ಪ ಮಟ್ಟಿನ ಯಶಸ್ಸು ಕೂಡ ಸಾಧಿಸಿದೆ ಎನ್ನುವುದು ನಿಜಾಂಶ. ಅದು ಹೇಗೆ
ಸಾಧ್ಯವಾಯಿತು ಎಂಬ ಪ್ರಶ್ನೆಗೆ ಒಂದು ಅಚ್ಚರಿಯ ಉತ್ತರವೂ ಇದೆ. ಅದೇನೆಂದರೆ,
ಮೀಸಲಾತಿ ಮೂಲಕ ಕಾಂಗ್ರೆಸ್ ತನ್ನ ಮತಬ್ಯಾಂಕ್ ಮತ್ತಷ್ಟು ಗಟ್ಟಿಯಾಗುತ್ತದೆ
ಎಂದು ಭಾವಿಸಿತ್ತು. ಆ ಹಿನ್ನಲೆಯಲ್ಲಿ ಜಾರಿಗೆ ಬಂದ ಮೀಸಲಾತಿಯಿಂದ ಈಗ
ನಿಜವಾಗಿಯೂ ಲಾಭವಾಗುತ್ತಿರುವುದು ಬಿಜೆಪಿಗೆ. ಏಕೆಂದರೆ ಒಂದು ಕಾಲದಲ್ಲಿ
ಕೇವಲ ಮೇಲ್ವರ್ಗದವರಿಗೆ ಮಾತ್ರ ಬಿಜೆಪಿ ಬಾಗಿಲು ತೆರೆದುಕೊಂಡಿರುತ್ತಿತ್ತು.
ಆದರೀಗ ಪಕ್ಷವು ಅನಿವಾರ್ಯವಾಗಿ ಸಮಾಜದ ಕೆಳ ವರ್ಗದ ಪ್ರತಿನಿಧಿಗಳಿಗೆ ಕೂಡ
ಸ್ಥಾನ-ಮಾನ ನೀಡಲೇಬೇಕಾಗಿದೆ. ಇದರಿಂದಾಗಿ ಮೊದಲು ಪಕ್ಷ ಮತ್ತು ಸಮಾಜದ ಒಂದು
ಭಾಗದ ನಡುವೆ ಇದ್ದ ಕಂದಕ ಕುಗ್ಗುತ್ತಿದೆ. ದಲಿತರು ಮತ್ತು ಅಲ್ಪಸಂಖ್ಯಾತರು
ಕೂಡ ನಿಧಾನವಾಗಿ ಬಿಜೆಪಿಯತ್ತ ಸರಿಯುತ್ತಿದ್ದಾರೆ. ಆರ್ಎಸ್ಎಸ್ ಮತ್ತು
ವಿಎಚ್ಪಿ ಏನೇ ಹೇಳಿದರೂ, ಬಿಜೆಪಿ ಕೂಡ ಅವರನ್ನು ಅಪ್ಪಿಕೊಳ್ಳಲು
ಹಿಂಜರಿಯುತ್ತಿಲ್ಲ. ಏಕೆಂದರೆ, 'ಹಾರ್ಡ್ಕೋರ್
ಹಿಂದುತ್ವ'
ಪಕ್ಷದ ಪಾಲಿಗೆ ಮಾರಕ ಎನ್ನುವುದು ಮುಂದಿನ ಪ್ರಧಾನಿ ಎಂದು
ಬಿಂಬಿಸಲಾಗುತ್ತಿರುವ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಒಳಗೊಂಡು ಎಲ್ಲ
ಬಿಜೆಪಿ ಮುಖಂಡರಿಗೂ ಅರ್ಥವಾಗುತ್ತಿದೆ.
ಇಷ್ಟರೊಳಗೆ ಯಡಿಯೂರಪ್ಪ ಮತ್ತು
ಕರ್ನಾಟಕದಲ್ಲಿನ ಬಿಜೆಪಿ ಮುಖಂಡರಿಗೂ ಈ ವಿಷಯ ಸ್ಪಷ್ಟವಾಗಿರಬಹುದು.
ಆಗಿರದಿದ್ದರೆ, ಸ್ಪಷ್ಟ ಮಾಡಿಕೊಂಡು ಯಡಿಯೂರಪ್ಪ ಅಂಡ್ ಕಂಪನಿ ರಾಜ್ಯದಲ್ಲಿನ
ಎಲ್ಲ ವರ್ಗದ ಜನರ ಏಳಿಗೆಗಾಗಿ ದುಡಿಯುವ ಯತ್ನ ಮಾಡಬೇಕು. ಏಕೆಂದರೆ, ಇನ್ನು
ಮುಂದೆ ಚುನಾವಣೆಗಳಲ್ಲಿ ಜನರು ಜನಪರ ಕಾರ್ಯಗಳನ್ನು ಮಾಡಿದವರಿಗೆ ಮಾತ್ರ ಮಣೆ
ಹಾಕುತ್ತಾರೆ. ಇಲ್ಲವಾದಲ್ಲಿ ಯಾವುದೇ ಭಾವನಾತ್ಮಕ ಸಂಬಂಧ ಇಟ್ಟುಕೊಳ್ಳದೇ
ಬುದ್ಧಿ ಕಲಿಸುತ್ತಾರೆ. ಇನ್ನು ಭಾರತದಲ್ಲಿ ಮತಬ್ಯಾಂಕ್ ರಾಜಕೀಯಕ್ಕೆ
ಬೆಲೆಯಿಲ್ಲ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದಲಿತರು ಮತ್ತು ಅಲ್ಪಸಂಖ್ಯಾತರ
ಏಳಿಗೆಗಾಗಿ ಪ್ರಾಮಾಣಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಸಾಮಾಜಿಕ
ಸ್ವಾಸ್ಥ್ಯ ಕಾಪಾಡುವ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ. ಏಕೆಂದರೆ
ಸಮಾಜದ ಪ್ರತಿಯೊಂದು ವರ್ಗ ಕೂಡ ಏಳಿಗೆಯಾದಲ್ಲಿ ಮಾತ್ರ ಸಮಾನತೆ ಮೂಡಲು ಮತ್ತು
ಸಾಮಾಜಿಕ ಸ್ವಾಸ್ಥ್ಯ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಜವಾಬ್ದಾರಿಯನ್ನು
ಯಡಿಯೂರಪ್ಪ ಸರ್ಕಾರ ಎಷ್ಟರ ಮಟ್ಟಿಗೆ ನಿರ್ವಹಿಸಲಿದೆ?
ಟಿಎಸ್ಐ
7
ನಕ್ಸಲ್- ಭಯೋತ್ಪಾದನೆ ಭೂತ
ಮುಖ್ಯಮಂತ್ರಿ ಯಡಿಯೂರಪ್ಪ ಸಿಕ್ಕಿಹಾಕಿಕೊಂಡಿರುವ
ಅಡಕತ್ತರಿಯ ಒಂದು ಅಲಗು ಭಯೋತ್ಪಾದನೆ. ಇನ್ನೊಂದು ನಕ್ಸಲ್ ಚಳವಳಿ. ಈ ವಿಷಯ
ಗಳನ್ನು ಚಾಣಾಕ್ಷವಾಗಿ ನಿಯಂತ್ರಿಸಬೇಕು.
ಸುಮಾರು
ಎಂಟು ವರ್ಷಗಳ ಹಿಂದಿನವರೆಗೆ ಕರ್ನಾಟಕ ಮತ್ತು ಭಯೋತ್ಪಾದನೆ ಎಂಬ ಎರಡು ಪದಗಳ
ನಡುವೆ ಅಂತಹ ಭಾರಿ ದೊಡ್ಡ ಸಂಬಂಧ ಇರಲಿಲ್ಲ. ಆದರೆ,
2001ರಲ್ಲಿ
ದೀನದಾರ್ ಅಂಜುಮಾನ್ ಭಯೋತ್ಪಾದನೆಯ ಬೀಜವನ್ನು ರಾಜ್ಯದಲ್ಲಿ ಬಿತ್ತಿತು.
ನಂತರ ಕೇವಲ ಎಂಟು ವರ್ಷಗಳ ಅವಧಿಯೊಳಗೆ ಆ ಭೂತ ಈಗ ಹೆಮ್ಮರವಾಗಿ ನಿಂತಿದೆ.
ಈಗ ಪರಿಸ್ಥಿತಿ ಯಾವ ಹಂತವನ್ನು ತಲುಪಿದೆಯೆಂದರೆ, ಭಾರತದ ಯಾವುದೇ ಮೂಲೆಯಲ್ಲಿ
ಭಯೋತ್ಪಾದಕರ ಅಟ್ಟಹಾಸ ನಡೆದರೂ, ಅದರ ಮೂಲ ಕೊನೆಗೆ ಕರ್ನಾಟಕಕ್ಕೆ ಬಂದು
ತಲುಪುವಷ್ಟರ ಮಟ್ಟಿಗೆ ಪರಿಸ್ಥಿತಿ ವಿಷಮಗೊಂಡಿದೆ. ದುರಂತವೆಂದರೆ ಒಂದು
ಕಾಲದಲ್ಲಿ ಕೋಮು ಸೌಹಾರ್ದದ ನೆಲೆಯಾಗಿದ್ದ ಕರ್ನಾಟಕ ಈಗ ಮೂಲಭೂತವಾದಿಗಳ
ಮತ್ತು ಮೂಲಭೂತವಾದವನ್ನೇ ಆಧರಿಸಿದ ಭಯೋತ್ಪಾದಕರ ಪಾಲಿನ ಸ್ವರ್ಗವಾಗಿ
ಪರಿವರ್ತನೆಗೊಳ್ಳುತ್ತಿರುವುದು. ಅದಕ್ಕಿಂತ ದೊಡ್ಡ ದುರಂತವೆಂದರೆ ರಾಜಕೀಯ
ಪಕ್ಷಗಳು ಕೂಡ ಮತಬ್ಯಾಂಕ್ ರಾಜಕೀಯಕ್ಕೆ ಮನ್ನಣೆ ನೀಡಿ, ರಾಷ್ಟ್ರೀಯ
ಹಿತಾಸಕ್ತಿಗಳನ್ನು ಬದಿಗಿಟ್ಟು ಕೋಮು ತುಷ್ಟೀಕರಣಕ್ಕೆ ಮುಂದಾಗುತ್ತಿರುವುದು.
ಕಳೆದ ಬಾರಿ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವಿದ್ದಾಗ ದಾವಣಗೆರೆ ಮತ್ತು
ಹುಬ್ಬಳ್ಳಿಯಲ್ಲಿ ಶಂಕಿತ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದರು. ಅದೇ
ಸಂದರ್ಭದಲ್ಲಿ ಉತ್ತರ ಪ್ರದೇಶ ಭಯೋತ್ಪಾದಕರ ಅಟ್ಟಹಾಸಕ್ಕೆ ನಲುಗಿತು.
ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದನಾ ದಾಳಿ ನಡೆಯಿತು. ಆ ಎರಡೂ
ಸಂದರ್ಭಗಳಲ್ಲಿ ಕರ್ನಾಟಕ ಮತ್ತು ಅಂತರ್ ರಾಷ್ಟ್ರೀಯ ಭಯೋತ್ಪಾದನೆ ನಡುವಿನ
ಸಂಬಂಧ ಜಗಜ್ಜಾಹೀರಾಯಿತು. ದುರಂತವೆಂದರೆ ಒಂದು ರಾಷ್ಟ್ರೀಯ ಪಕ್ಷದ ಕೆಲವು
ಮುಖಂಡರು ಆ ಸಂದರ್ಭದಲ್ಲಿ ತನಿಖೆ ಕೈಗೊಂಡಿದ್ದ ಕರ್ನಾಟಕದ ಸಿಓಡಿ ವಿಭಾಗದ
ಪೊಲೀಸ್ ಅಧಿಕಾರಿಗಳಿಗೆ "ಸ್ವಲ್ಪ ನಿಧಾನ ಮಾಡಿ. ಎಲೆಕ್ಷನ್
ಹತ್ತಿರವಾಗುತ್ತಿದೆ" ಎಂಬ 'ಆದೇಶ'
ಕೂಡ ನೀಡಿದ್ದರಂತೆ. ಇದರರ್ಥ ಚುನಾವಣೆ, ಮತ, ಗೆಲುವು ದೇಶದ ಭದ್ರತೆಗಿಂತ
ಮುಖ್ಯ.
ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ
ಯಡಿಯೂರಪ್ಪ ರಾಜ್ಯದಲ್ಲಿನ ಭಯೋತ್ಪಾದನಾ ಚಟುವಟಿಕೆಗಳನ್ನು ಹೇಗೆ ಮಟ್ಟ
ಹಾಕುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ನಮ್ಮ ರಾಜಕೀಯ ಪರಿಸ್ಥಿತಿ
ಯಾವ ಮಟ್ಟದಲ್ಲಿದೆ ಎಂದರೆ, ತತ್ಕ್ಷಣ ಬಿಜೆಪಿ ಮೂಲಭೂತವಾದಿಗಳ ಮೇಲೆ
ಹರಿಹಾಯುವ ಹಾಗೂ ಇಲ್ಲ. ಅಕಸ್ಮಾತ್ ಭಯೋತ್ಪಾದನೆಯನ್ನು ನಿಗ್ರಹಿಸುವ
ನಿಟ್ಟಿನಲ್ಲಿ ಯಡಿಯೂರಪ್ಪ ಸರ್ಕಾರ ಕಠಿಣ ಕ್ರಮ ಕೈಗೊಂಡಲ್ಲಿ, ಒಂದು ಕೋಮಿನ
ಕೋಪಕ್ಕೆ ಬಲಿಯಾಗಬೇಕಾಗುತ್ತದೆ. ವಿರೋಧ ಪಕ್ಷ ಕಾಂಗ್ರೆಸ್ ಅದನ್ನೇ ತನ್ನ
ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ. ಹಾಗೆಂದುಕೊಂಡು
ಯಡಿಯೂರಪ್ಪ ಮೃದು ಭಾವನೆ ತೋರಿದಲ್ಲಿ ಬಿಜೆಪಿಯ ಮೂಲ ಮತ ಬ್ಯಾಂಕ್ನ ಕೋಪಕ್ಕೆ
ಬಲಿಯಾಗಬೇಕು. ಹೀಗೆ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳು ರಾಜಕೀಯ
ಲೆಕ್ಕಾಚಾರವನ್ನೇ ಮಾಡುತ್ತಿವೆ ಹೊರತೂ, ದೇಶದ ಆಂತರಿಕ ಸುಭದ್ರತೆ ಬಗ್ಗೆ ಅವು
ಚಿಂತೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಇಂತಹ ಸ್ಥಿತಿಯಲ್ಲಿ ರಾಜಧಾನಿ ಬೆಂಗಳೂರು
ಹಾಗೂ ಉತ್ತರ ಕರ್ನಾಟಕದ ಮೂಲೆ, ಮೂಲೆಯಲ್ಲಿ ತಲೆ ಎತ್ತಿ ನಿಂತಿರುವ
ಭಯೋತ್ಪಾದನಾ ನೆಲೆಯನ್ನು ಸರ್ಕಾರ ಹೇಗೆ ನಾಶ ಮಾಡುತ್ತದೆ ಎನ್ನುವುದು
ಕುತೂಹಲಕಾರಿ ಅಂಶ. ಪೊಲೀಸ್ ಇಲಾಖೆಯ ಪ್ರಕಾರ ಭಯೋತ್ಪಾದನೆ ನಿಗ್ರಹದ
ನಿಟ್ಟಿನಲ್ಲಿ ಇಲಾಖೆಗೆ ಹೆಚ್ಚಿನ ಆಧುನಿಕ ಶಸ್ತ್ರಾಸ್ತ್ರ ಬೇಕು.
ಸಿಬ್ಬಂದಿಗೆ ವಿಶೇಷ ತರಬೇತಿಯ ಅಗತ್ಯವೂ ಇದೆ. ಆ ಎಲ್ಲವನ್ನೂ ಸರ್ಕಾರ ನೀಡಿ,
ಪೊಲೀಸ್ ಇಲಾಖೆಯ ಬೆಂಬಲಕ್ಕೆ ನಿಲ್ಲುತ್ತದೆಯೇ?
ಯಡಿಯೂರಪ್ಪ ಸಿಕ್ಕಿ ಹಾಕಿಕೊಂಡಿರುವ
ಅಡಕತ್ತರಿಯ ಒಂದು ಅಲಗು ಭಯೋತ್ಪಾದನೆಯಾದರೆ, ಇನ್ನೊಂದು ರಾಜ್ಯದ ಮಲೆನಾಡು
ಭಾಗದಲ್ಲಿ ಹಬ್ಬಿ ನೆಲೆನಿಂತಿರುವ ನಕ್ಸಲ್ ಚಳವಳಿ. ನಕ್ಸಲ್ ಚಳವಳಿಯಲ್ಲಿ
ನಿರತರಾದವರಿಗೆ ಬಿಜೆಪಿ ಸಹ್ಯವಲ್ಲ. ಅದೇ ರೀತಿಯಲ್ಲಿ ಬಿಜೆಪಿಗೆ ಕೂಡ
ನಕ್ಸಲೀಯರನ್ನು ಕಂಡರೆ ಅಷ್ಟಕ್ಕಷ್ಟೆ. ಇಂತಹ ಸನ್ನಿವೇಶದಲ್ಲಿ ಯಡಿಯೂರಪ್ಪ
ನಕ್ಸಲೀಯರ ದಮನಕ್ಕೆ ಕೈಹಾಕುವರೇ? ಚುನಾವಣೆ ನಡೆಯುತ್ತಿರುವಾಗಲೇ ಬಿಜೆಪಿಯ
ಒಬ್ಬ ಸ್ಥಳೀಯ ನಾಯಕ ನಕ್ಸಲ್ ಗುಂಡಿಗೆ ಬಲಿಯಾದ ಘಟನೆ ಕೂಡ ನಡೆದಿದೆ. ಆ
ಬಗ್ಗೆ ಇನ್ನು ಹಲವಾರು ಊಹಾಪೋಹಗಳು ಇದ್ದರೂ, ಸಾಮಾಜಿಕ ನ್ಯಾಯದ ಹೆಸರಲ್ಲಿ
ನಕ್ಸಲೀಯರು ಹಿಂಸಾಚಾರಕ್ಕೆ ಇಳಿದರೆ, ಅದು ರಾಜಕೀಯ ಪ್ರೇರಿತ ಹಿಂಸಾಚಾರವಾಗಿ
ಪರಿವರ್ತನೆಗೊಂಡರೆ ಮಲೆನಾಡಲ್ಲಿ ಮತ್ತೆ ರಕ್ತದೋಕುಳಿ ಹರಿಯಲಿದೆ. ರಾಜ್ಯ
ಹಾಗೂ ಮಲೆನಾಡಿನ ಹಿತದೃಷ್ಟಿಯಿಂದ ಯಡಿಯೂರಪ್ಪ ಧೈರ್ಯ ಮಾಡಿ ಮೆಣಸಿನ
ಹಾಡ್ಯಕ್ಕೆ ಹೋಗಿ ಅಲ್ಲಿಯೇ ನೆಲೆನಿಂತು, ನಕ್ಸಲ್ ನಾಯಕರ ಜೊತೆ ಮಾತನಾಡಿ ಈ
ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಯತ್ನ ಮಾಡಬೇಕು. ಆ ದಿನ ಬಹುಬೇಗ ಬರಲಿ.
ಟಿಎಸ್ಐ
8
ಅಸಮತೋಲನದ ತಕ್ಕಡಿ
ಚುನಾವಣೆ ಬಂದಾಗ ನಮ್ಮ ರಾಜಕಾರಣಿಗಳಿಗೆ ಉತ್ತರ
ಕರ್ನಾಟಕ ಮತ್ತು ಉಳಿದ ಭಾಗಕ್ಕೆ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ.
ಎಲ್ಲೆಡೆಯಂತೆ ಅಲ್ಲಿಯೂ ಭರವಸೆಯ ಮಹಾಪೂರ ಹರಿಯುತ್ತದೆ. ಚುನಾವಣೆಯ ನಂತರ?
ಉತ್ತರ
ಕರ್ನಾಟಕಕ್ಕೊಮ್ಮೆ ಪ್ರವಾಸ ಕೈಗೊಂಡಲ್ಲಿ ಅತ್ಯಪರೂಪದ, ಅತ್ಯಾಕರ್ಷಕ,
'ಹ್ಯೂಮನ್
ಇಂಟೆರೆಸ್ಟಿಂಗ್'
ಆದ ಚಿತ್ರಗಳು ನಿಮಗೆ ಕಾಣಸಿಗುತ್ತವೆ. ಏಷ್ಯಾದಲ್ಲೇ ಅತಿ ಹಿಂದುಳಿದ
ತಾಲ್ಲೂಕಾದ ದೇವದುರ್ಗಕ್ಕೆ ನೀವು ಭೇಟಿ ನೀಡಬಹುದು; ಕೆಲಸ ಅರಸಿಕೊಂಡು ಇಡೀ
ಊರನ್ನೇ ಖಾಲಿ ಮಾಡಿ ಗುಳೆ ಹೊರಡುವ ಜನ; ಹೊರೆ ಸೌದೆಗಾಗಿ ಸುಡುಬಿಸಿಲಿನಲ್ಲಿ
ಮೈಲುಗಟ್ಟಲೆ ನಡೆವ ಮಹಿಳೆಯರು, ಕೊಡ ನೀರಿಗಾಗಿ ನಲ್ಲಿಯ ಸುತ್ತಾ ನೆರೆದ
ಬಿಂದಿಗೆಗಳ ರಾಶಿ, ಸಣ್ಣ ಮೋಟಾರ್ನಲ್ಲಿ ಕಿಕ್ಕಿರಿದು ಪಯಣಿಸುವ ಮಂದಿ, ಮಳೆ
ಬಾರದೆಯೋ ಅಥವಾ ಬರಬಾರದ ವೇಳೆ ಬಂದ ಕಾರಣವೋ ಬೆಳೆ ಕೈಕೊಟ್ಟು ಸಾಯಲು
ಸಜ್ಜಾಗುವ ರೈತರು, ಚರಂಡಿ ಇಲ್ಲದೆ ರಸ್ತೆಯ ಮಧ್ಯೆ ಹರಿವ ಕೊಳಚೆ ದಾಟಿಕೊಂಡೇ
ಸಾಗುವ ಜನ, ತಗ್ಗು-ದಿಣ್ಣೆಯನ್ನೇ ರಸ್ತೆಯೆಂದು ನಂಬಿ ಸಾಗುವ ವಾಹನಗಳು,
ಒಣಮಾತುಗಳನ್ನಾಡುವ ರಾಜಕಾರಣಿಗಳು-ಕೆಲಸ ಮಾಡದ ಅಧಿಕಾರಿಗಳನ್ನೇ ದೇವರೆಂದು
ನಂಬುವ ಮುಗ್ಧಜನ... ಅಬ್ಬಬ್ಬಾ ಈ ಚಿತ್ರಗಳ ಪಟ್ಟಿಗೆ ಕೊನೆಯೇ ಇಲ್ಲ. ಅದಿರಲಿ,
ಇತ್ತ ನೋಡಿ. ಅಂದು ಮೇ 25ರ
ತಂಪನೆಯ ಮಧ್ಯಾಹ್ನ. ಕೇವಲ 52
ಮತಗಳಿಂದ ಸೋತುಹೋದ ಸುದ್ದಿ ತಿಳಿದ ಕೂಡಲೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್
ಮುಖಂಡ ಎನ್. ಧರ್ಮಸಿಂಗ್ ಅವರು ಕುಸಿದು ಹೋದರು. ಸತತವಾಗಿ
9ನೇ ಬಾರಿ
ಗೆದ್ದು ಗಿನ್ನಿಸ್ ದಾಖಲೆ ಮಾಡುವ ಉಮೇದಿನಲ್ಲಿದ್ದ ಅವರಿಗೆ ತಮ್ಮ ನೆಚ್ಚಿನ
ಮತದಾರ ಇಂಥ ಪಾಠ ಕಲಿಸುತ್ತಾನೆಂಬ ನಿರೀಕ್ಷೆ ಇರಲಿಲ್ಲ. ಅತ್ತ
ಚಿತ್ತಾಪುರದಲ್ಲೂ ಖರ್ಗೆಯವರು ಪ್ರಯಾಸದಿಂದಲೇ ಜಯಗಳಿಸಿದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ,
ಹೈದರಾಬಾದ್-ಕರ್ನಾಟಕ ಭಾಗದ ಮತದಾರರು ಈಗ ತುಂಬಾ ಜಾಗೃತರಾಗಿಬಿಟ್ಟಿದ್ದಾರೆ.
ಬರೀ ಮಾತುಗಳಿಂದ ಈಗ ಅವರ ಮತಗಳನ್ನು ಗೆಲ್ಲಲು ಸಾಧ್ಯವಿಲ್ಲ. ದಶಕಗಳಿಂದ
ಮೂಲಸೌಕರ್ಯ ವಂಚಿತರಾಗೇ ಬಂದ ಅವರಲ್ಲಿ ಈಗ ಆಕ್ರೋಶ ಭುಗಿಲೆದ್ದಿದೆ. ಐದು
ದಶಕಗಳ ಹಿಂದೆ ಸಮಗ್ರ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಜನರೇ ಇಂದು
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಒತ್ತಾಯಿಸುತ್ತಾರೆ ಎಂದ ಮೇಲೆ
ಅವರಲ್ಲಿ ಅದೆಷ್ಟು ಅಸಮಾಧಾನ ಮನೆ ಮಾಡಿರಬೇಕು ಹೇಳಿ.
ಈಗ ಉತ್ತರ ಕರ್ನಾಟಕದ ಒಟ್ಟು
68
ಕ್ಷೇತ್ರಗಳಲ್ಲಿ 43ರಲ್ಲಿ
ಬಿಜೆಪಿಯನ್ನು ಗೆಲ್ಲಿಸಿದ ಮತದಾರ ನೂತನ ಸರ್ಕಾರದಿಂದ ಅಭಿವೃದ್ಧಿಯ ಬೆಳಕು
ನಿರೀಕ್ಷಿಸುತ್ತಿದ್ದಾನೆ.
ಪ್ರಾದೇಶಿಕ ಅಸಮತೋಲನ ಕುರಿತು ಡಾ. ಡಿ.ಎಂ.
ನಂಜುಂಡಪ್ಪ ನೇತೃತ್ವದ ಸಮಿತಿ 2002ರಲ್ಲೇ
ಸಲ್ಲಿಸಿದ ವರದಿಗೆ ಸೂಕ್ತಪ್ರಮಾಣದ ಹಣ ಬಿಡುಗಡೆ ಮಾಡಬೇಕಾದುದಷ್ಟೇ ಅಲ್ಲ,
ಅದು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳುವಂತೆ ನೋಡಿಕೊಳ್ಳಬೇಕಾದುದೂ
ಯಡಿಯೂರಪ್ಪ ಸರ್ಕಾರದ ಮುಂದಿರುವ ಪ್ರಬಲ ಸವಾಲು. ನಂಜುಂಡಪ್ಪ ವರದಿ ಅನುಸಾರ
39
ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ 26
ಉತ್ತರ ಕರ್ನಾಟಕದಲ್ಲೇ ಇವೆ. (ಈ 26
ತಾಲ್ಲೂಕುಗಳಲ್ಲಿ 21
ಗುಲ್ಬರ್ಗ ವಿಭಾಗದಲ್ಲಿ ಮತ್ತೆ 5
ತಾಲ್ಲೂಕುಗಳು ಬೆಳಗಾವಿ ವಿಭಾಗದಲ್ಲಿ ಬರುತ್ತವೆ).
ಈ 39
ಅತಿ ಹಿಂದುಳಿದ ತಾಲ್ಲೂಕುಗಳೂ ಸೇರಿದಂತೆ ಒಟ್ಟು
114 ತಾಲ್ಲೂಕುಗಳು ರಾಜ್ಯದ ಉಳಿದ
61
ತಾಲ್ಲೂಕುಗಳಿಗೆ ಹೋಲಿಸಿದರೆ ಅಭಿವೃದ್ಧಿಯಾಗಿಲ್ಲ. ಈ ಎಲ್ಲಾ ತಾಲ್ಲೂಕುಗಳ
ಸಮಗ್ರ ಅಭಿವೃದ್ಧಿಗಾಗಿ ಆದ್ಯತೆ ಮೇರೆಗೆ ಎಂಟು ವರ್ಷಗಳಲ್ಲಿ
31,000
ಕೋಟಿ ರೂ. ಹಣ ಒದಗಿಸುವಂತೆ ವರದಿ ಶಿಫಾರಸು ಮಾಡಿದೆ. ಈ
31 ಸಾವಿರ ಕೋಟಿ
ಹಣದಲ್ಲಿ 15
ಸಾವಿರ ಕೋಟಿಯನ್ನು ಬಜೆಟ್ ಮೂಲಕವೂ ಬಾಕಿ 16
ಸಾವಿರ ಕೋಟಿ ಹಣವನ್ನು ಪ್ರತಿ ವರ್ಷ 2
ಸಾವಿರ ಕೋಟಿಯಂತೆ ವಿಶೇಷ ಅನದಾನದ ಮೂಲಕವೂ ಒದಗಿಸುವಂತೆ ಸಲಹೆ ಮಾಡಲಾಗಿದೆ.
ಆದರೆ ವರದಿ ಬಂದ ಆರು ವರ್ಷಗಳಾದರೂ (ಎಸ್.ಎಂ.
ಕೃಷ್ಣ, ಧರ್ಮಸಿಂಗ್ ಮತ್ತು ಕುಮಾರಸ್ವಾಮಿ ಅವರ ಸರ್ಕಾರದ ಅವಧಿಯಲ್ಲಿ)
ಅಭಿವೃದ್ಧಿಯ ದಿಕ್ಕಿನಲ್ಲಿ ಒಂದೆರಡು ಹೆಜ್ಜೆಗಳನ್ನೂ ಇನ್ನೂ ಇಡಲಾಗಿಲ್ಲ.
ಇದೇ ಯಡಿಯೂರಪ್ಪ ಅವರು ಕುಮಾರಸ್ವಾಮಿ ಸರ್ಕಾರದಲ್ಲಿ ಹಣಕಾಸು
ಸಚಿವರಾಗಿದ್ದಾಗ 2007-08ರ
ಸಾಲಿನ ಬಜೆಟ್ನಲ್ಲಿ 1571
ಕೋಟಿ ರೂ. ಬಿಡುಗಡೆ ಮಾಡಿದ್ದರು. ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ಕೇಂದ್ರ
ಸರ್ಕಾರ ಮಂಡಿಸಿದ 2008-09ನೇ
ಸಾಲಿನ ರಾಜ್ಯ ಬಜೆಟ್ನಲ್ಲಿ 2489
ಕೋಟಿ ರೂ. ಮೀಸಲಿಟ್ಟಿದೆ.
ಆದರೆ ಅಭಿವೃದ್ಧಿ ಕಾರ್ಯಗಳ ಗತಿ ಗೊತ್ತೇ
ಇದೆಯಲ್ಲ? ಇಲ್ಲಿ ಹಣ ಒದಗಿಸುವುದಕ್ಕಿಂತ ಅವು ಯಶಸ್ವಿಯಾಗಿ
ಕಾರ್ಯಗತಗೊಳಿಸುವುದು ಬಹುಮುಖ್ಯ.
ಬಿಜೆಪಿ ಸರ್ಕಾರಕ್ಕೆ ಈಗ ಉತ್ತರ ಕರ್ನಾಟಕದ
ಜನರ ಮನ ಗೆಲ್ಲಲು ಒಂದು ಸುವರ್ಣಾವಕಾಶ ದೊರಕಿದೆ. ಅದನ್ನು ಆ ಸರ್ಕಾರ ಹೇಗೆ
ಬಳಸಿಕೊಳ್ಳಲಿದೆ? ಉತ್ತರ ಕರ್ನಾಟಕದ ಮತದಾರರು ಗಮನಿಸುತ್ತಲೇ ಇದ್ದಾರೆ.
ಅವರೀಗ ಬರೀ ಮತದಾರರಲ್ಲ ಜಾಗೃತ ಮತದಾರರು! ಇದು ಬಿಜೆಪಿಗೆ ನೆನಪಿರಲಿ.
ಟಿಎಸ್ಐ
9
ನೆಲ- ಜಲ, ನುಡಿ- ಗಡಿಯ ಪ್ರಶ್ನೆ
ಹೊಗೇನಕಲ್ ಹೊಗೆ, ಕಾವೇರಿ ಕಾವು, ಬೆಳಗಾವಿ ಗಡಿ
ವಿವಾದ ಯಡಿಯೂರಪ್ಪ ಸರ್ಕಾರದ ಪಾಲಿಗೂ ದಿನ ನಿತ್ಯದ ತಲೆನೋವಾಗಿಯೇ
ಪರಿಣಮಿಸಲಿದೆ. ಈ ಸಮಸ್ಯೆಗಳ ನಿಯಂತ್ರಣ, ಪರಿಹಾರ.....
"ಕನ್ನಡದ
ನೆಲ-ಜಲ-ಭಾಷೆಯ ರಕ್ಷಣೆಯ ವಿಷಯದಲ್ಲಿ ರಾಜಿಯ ಮಾತೇ ಇಲ್ಲ".
ಹೂಂ!!! ಅಧಿಕಾರಕ್ಕೆ ಬಂದ ಕೂಡಲೇ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ರಾಜಕಾರಣಿಗಳು ಹೇಳುವ ಅತಿ ಸಾಮಾನ್ಯ
ಮಾತನ್ನೇ ಹೇಳಿದ್ದಾರೆ. ರಾಜಕಾರಣಿಗಳು ರಾಜಿಯಾಗುತ್ತಾರೋ ಬಿಡುತ್ತಾರೋ. ಆದರೆ
ನೆಲ, ನೀರು, ಭಾಷೆಯ ವಿಚಾರದಲ್ಲಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು
ಮಹಾರಾಷ್ಟ್ರ ರಾಜ್ಯಗಳ ಜೊತೆಗಿನ ನಮ್ಮ ಬಾಂಧವ್ಯ ಮಾತ್ರ ಹಳಸುತ್ತಲೇ ಇದೆ.
ಶಾಂತಿಪ್ರಿಯ ಕನ್ನಡಿಗರ ಮೇಲೆ 'ಅಂಧಾಭಿಮಾನಿ'ಗಳೆಂಬ
ಆರೋಪದ ಹಣೆಪಟ್ಟಿ ಭದ್ರವಾಗುತ್ತಲೇ ಇದೆ.
ನೂತನ ರಾಜ್ಯ ಸರ್ಕಾರ ತುರ್ತಾಗಿ ಗಮನ
ಹರಿಸಲೇಬೇಕಾದ ವಿಷಯವೆಂದರೆ ಹೊಗೇನಕಲ್ ಪ್ರಕರಣ. ನೆರೆಯ ತಮಿಳುನಾಡಿನ
ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ
ಉದ್ದೇಶದ 1334
ಕೋಟಿ ರೂ. ವೆಚ್ಚದ ಈ ಯೋಜನೆ 2011ರಲ್ಲಿ
ಪೂರ್ಣಗೊಳ್ಳುವ ಲೆಕ್ಕಾಚಾರದ್ದು. ಇರಲಿ, ತಮಿಳುನಾಡಿನ ನಮ್ಮ ಸಹೋದರರಿಗೆ
ಇದರಿಂದ ಅನುಕೂಲವಾಗುವುದಿದ್ದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಕಾಮಗಾರಿ
ಆರಂಭಿಸಲಾಗಿರುವ ಹೊಗೇನಕಲ್ ಭೂಭಾಗ ಅಸಲಿಗೆ ನಮ್ಮ ರಾಜ್ಯಕ್ಕೆ ಸೇರಿದ್ದೋ,
ತಮಿಳುನಾಡಿಗೆ ಸೇರಿದ್ದೋ ಎಂಬುದು ಪ್ರಶ್ನೆ.
ಪಕ್ಕಾ ಕನ್ನಡ ಹೆಸರನ್ನು ಹೊತ್ತ ಹೊಗೇನಕಲ್ನ
ನಿವಾಸಿಗಳ ಪಡಿತರ ಚೀಟಿಯಿಂದ ಹಿಡಿದು ಮತದಾರ ಚೀಟಿವರೆಗಿನ ಎಲ್ಲಾ ದಾಖಲೆಗಳೂ
ಕರ್ನಾಟಕಕ್ಕೆ ಸೇರುತ್ತವೆ. ಅಲ್ಲೇನಾದರೂ ಕೊಲೆ-ಸುಲಿಗೆ ನಡೆದರೂ ಅದು
ಕರ್ನಾಟಕ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲೇ ದಾಖಲಾಗುತ್ತದೆ. ಆದರೂ ಕಪ್ಪು
ಕನ್ನಡಕದ ಕರುಣಾನಿಧಿ ಸಾಹೇಬರು ಮಾತ್ರ ಹಿಂದೆ 'ಎನ್ನ
ಕೊಲೆ ಪಂಡ್ರಾಂಗೋ'
ಎಂದ ಮಾದರಿಯಲ್ಲೇ ಹೊಗೇನ್ಕಲ್ ನಮ್ಮದು ಎಂದು ಬೊಬ್ಬೆ ಹಾಕುತ್ತಾರೆ.
ಗಡಿಭಾಗದಲ್ಲಿರುವ ಈ ಪ್ರದೇಶ ಯಾವ ರಾಜ್ಯಕ್ಕೆ ಸೇರಿದ್ದೆಂಬ ವಾದ-ವಿವಾದ
ಕೋರ್ಟ್ ಕಟಕಟೆಯಲ್ಲಿರುವಾಗಲೇ; ಕರ್ನಾಟಕದಲ್ಲಿ ಮೈತ್ರಿ ಸರ್ಕಾರಕ್ಕೆ
ಹೊಗೆಬಿದ್ದು ರಾಷ್ಟ್ರಪತಿ ಆಡಳಿತ ಘೋಷಣೆಯಾದ ಸಂದರ್ಭದಲ್ಲೇ ಕರುಣಾನಿಧಿ
ಸಾಹೇಬರು ಯೋಜನೆಗೆ ಚಾಲನೆ ನೀಡಿಬಿಟ್ಟರು. ರಾಜ್ಯದಲ್ಲಿ ನಡೆದ ಪ್ರತಿಭಟನೆಗಳ
ಪರಿಣಾಮಕ್ಕಿಂತ ಹೆಚ್ಚಾಗಿ ಚುನಾವಣೆ ದೆಸೆಯಿಂದ ಕೇಂದ್ರದ ಯುಪಿಎ ಸರ್ಕಾರ
ನೀಡಿದ ಸೂಚನೆ ಅನುಸಾರ ಯೋಜನೆಗೆ ತಾತ್ಕಾಲಿಕ ತಡೆ ನೀಡಿದ್ದ ಕರುಣಾನಿಧಿ ಅವರು
ಈಗ ಮತ್ತೆ ಕಾಮಗಾರಿ ಆರಂಭಿಸಲು ಆದೇಶ ನೀಡಿಬಿಟ್ಟಿದ್ದಾರೆ.
ಇನ್ನು ಕಾವೇರಿ ನ್ಯಾಯಾಧಿಕರಣದ ಅಂತಿಮ
ತೀರ್ಪಿನ ಕುರಿತ ಕನ್ನಡಿಗರ ಅಸಮಾಧಾನ ಮಳೆಗಾಲ ಕಳೆಯುತ್ತಿದ್ದಂತೆಯೇ
ಭುಗಿಲೇಳಲಿದೆ; ಅತ್ತ ನೆರೆಯ ಆಂಧ್ರದ ಜೊತೆಗೆ ಕೃಷ್ಣಾ ನೀರು ಹಂಚಿಕೆಯ ವಿಷಯ
ಈಗ ತಣ್ಣಗಿದ್ದರೂ 'ಸ್ಮಾರ್ಟ್
ಡೀಲ್'
ಮಾಡಿಕೊಳ್ಳಬೇಕಾದ ಹೊಣೆ ಬಿಎಸ್ವೈ ಸರ್ಕಾರದ ಮೇಲೆ ಇದ್ದೇ ಇದೆ. ನಮ್ಮ ರೈತರ
ಒಂದಿಷ್ಟಗಲ ಭೂಮಿಗೆ ನೀರು ಉಳಿಸಿಕೊಂಡು ಅವರ ಆತ್ಮಹತ್ಯೆ ತಪ್ಪಿಸುವ
ನಿಟ್ಟಿನಲ್ಲಿ ಹೊಸ ಸರ್ಕಾರ ಯಾವ ಹೆಜ್ಜೆ ಇಡಲಿದೆ?
ಇನ್ನು ನಮ್ಮ ಮರಾಠ ಸಹೋದರರತ್ತ ಬರೋಣ.
ಕೃಷ್ಣಾ-ಕಾವೇರಿ ಕೊಳ್ಳದ ವಿವಾದ ಒಂದು ತೂಕವಾದರೆ ಬೆಳಗಾವಿ ಗಡಿ ವಿವಾದದ್ದೇ
ಇನ್ನೊಂದು ತೂಕ. ಮಹಾಜನ್ ವರದಿ, ಸರೋಜಿನಿ ಮಹಿಷಿ ವರದಿಯ ಮಾತೆತ್ತಿದರೆ
ಮರಾಠಿಗರು ಉಗ್ರಾವತಾರ ತಾಳುತ್ತಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿಯಂತೂ (ಎಂಇಎಸ್)
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಬಿಡಲು ಶಪಥ ಮಾಡಿದ್ದು ಆಗಾಗ್ಗೆ
ಏನಾದರೂ ಗಲಿಬಿಲಿ ಮಾಡುತ್ತಲೇ ಇರುತ್ತದೆ. ಈ ಮುನ್ನ ವಿಧಾನಸಭೆ
ಪ್ರವೇಶಿಸಿದ್ದ ಇಬ್ಬರು ಎಂಇಎಸ್ ಸದಸ್ಯರಂತೂ ಬರೀ ಸಭಾತ್ಯಾಗ ಮಾಡಿಯೇ ಸುದ್ದಿ
ಮಾಡಿದರು. ಕಟ್ಟರ್ ಮರಾಠಾ ತತ್ವ ಪ್ರತಿಪಾದಿಸುವ ಶಿವಸೇನೆ,
ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷ! ಇಂತಹ ಸನ್ನಿವೇಶದಲ್ಲಿ ರಾಜ್ಯದ
ಬಿಎಸ್ವೈ ಸರ್ಕಾರಕ್ಕೂ ಮುಳ್ಳಾಗಲಿರುವ ಅಂಶವೆಂದರೆ ಗಡಿ, ಭಾಷೆಯ ಸೂಕ್ಷ್ಮ
ವಿಚಾರದಲ್ಲಿ ಅದು ಎದುರಾಗಬೇಕಿರುವುದು ಮಹಾರಾಷ್ಟ್ರದಲ್ಲಿನ ಬಿಜೆಪಿ ಘಟಕ
ಮತ್ತು ಅದರ ಮಿತ್ರ ಶಿವಸೇನೆಯನ್ನೇ.
ವಾಸ್ತವವೆಂದರೆ ಲಕ್ಷಾಂತರ ಮಂದಿ ತಮಿಳರು,
ಮರಾಠಿಗರು ಮತ್ತು ತೆಲುಗರು ನಮ್ಮ ರಾಜ್ಯದಲ್ಲಿ ಬದುಕಿನ ಬಂಡಿ
ನಡೆಸುತ್ತಿದ್ದಾರೆ. ನಮ್ಮವರೂ ಆ ರಾಜ್ಯಗಳಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ.
ಅವರ್ಯಾರಿಗೂ ಹೊಗೇನಕಲ್ ವಿವಾದವಾಗಲೀ, ಗಡಿ ಗಲಭೆಯಾಗಲೀ ಖಂಡಿತ ಬೇಕಿಲ್ಲ.
ಆದರೆ ನಮ್ಮ ರಾಜಕಾರಣಿಗಳಿಗೆ ಅವು ಬೇಕಲ್ಲ?
ಯಡಿಯೂರಪ್ಪನವರೇ 'ನೆಲ-ಜಲ-ಭಾಷೆಯ
ರಕ್ಷಣೆಯ ವಿಷಯದಲ್ಲಿ ರಾಜಿಯ ಮಾತೇ ಇಲ್ಲ'
ಎಂಬ ನಿಮ್ಮ ಮಾತಿಗೆ ನಿಮ್ಮ ಸರ್ಕಾರ ಬದ್ಧವಾಗಿರಲಿ. ಆದರೆ ಆ ಮೂರು ಅಂಶಗಳಿಗೆ
ರಾಜಕಾರಣದ ಲೇಪ ಬಳಿಯದೆ ಸೌಹಾರ್ದ ಸಂಬಂಧ ವೃದ್ಧಿಗೆ ಯತ್ನಿಸಲಿ. ಹೇಗಿದ್ದರೂ
ಈ ವಿಧಾನಸಭೆಯಲ್ಲಿ ಎಂಇಎಸ್ ಸದಸ್ಯರ ಸಭಾತ್ಯಾಗವೇನೂ ಇರುವುದಿಲ್ಲವಲ್ಲ!
ಟಿಎಸ್ಐ
10
ಮರೀಚಿಕೆಯಾದ ಶಾಸ್ತ್ರೀಯ ಭಾಷೆ
ಕನ್ನಡ ಭಾಷೆಯ ಬಗ್ಗೆ ಕೇಂದ್ರದ ಧೋರಣೆಯನ್ನು
ಬದಲಾಯಿಸಬೇಕಾದ ಜವಾಬ್ದಾರಿ ಹೊಸ ಸರ್ಕಾರದ ಹೆಗಲ ಮೇಲಿದೆ. ಕನ್ನಡಕ್ಕೆ
ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವ ಜವಾಬ್ದಾರಿ ಕೂಡ...
ನವೆಂಬರ್
ಒಂದು ಇನ್ನೂ ದೂರ ಇರುವುದರಿಂದ ಕನ್ನಡದ ಬಗ್ಗೆ ಈಗಲೇ ಮಾತನಾಡುತ್ತಿರುವುದು
ಅಕಾಲಿಕ ಮಳೆ ಸುರಿದ ಹಾಗೆ ನಿಮಗೆ ಭಾಸವಾಗಬಹುದು. ಕನ್ನಡ ಭಾಷೆಯ ಬಗ್ಗೆ
ಮಾತನಾಡಬಹುದಾದ ಸಂದರ್ಭ ಬರುವುದು ಅತ್ತ ಇರಲಿ; ಕನ್ನಡ ಭಾಷೆಗೆ
ಹಿನ್ನಡೆಯುಂಟಾಗುವ ಒಂದು ಪ್ರಮುಖ ಘಟನೆ ಬೇರೆ ಸಂಭವಿಸಿದೆ.
'ಕನ್ನಡ ಕನ್ನಡ'
ಎನ್ನುತ್ತಾ ಕತ್ತೆಯ ಮೇಲೆ ಹಿಂದು-ಮುಂದಾಗಿ ಮೆರವಣಿಗೆ ಮಾಡಿ
ಪತ್ರಿಕೆ-ಟಿವಿಗಳಲ್ಲಿ ಮೂಡಿ ಬರುತ್ತಿದ್ದ ವಾಟಾಳ್ ನಾಗರಾಜ್ ಅವರ ಟೋಪಿ ಮುಖ
ಈ ಬಾರಿ ವಿಧಾನಸೌಧದ ಪಡಸಾಲೆಯನ್ನು ಪ್ರವೇಶಿಸಿಲ್ಲ! ಇಷ್ಟೆಲ್ಲಾ
ವ್ಯತಿರಿಕ್ತ ಅಂಶಗಳಿದ್ದರೂ ಕೂಡಾ ನೂತನ ಬಿಜೆಪಿ ಸರ್ಕಾರದ ಮುಂದಿರುವ
ಸವಾಲುಗಳ ನಡುವೆ ಬಡ ಕನ್ನಡಮ್ಮನೂ ಇರುವುದರಿಂದ ಈಗ ನಾವು ಮಾತನಾಡಲೇಬೇಕಿದೆ.
ಕನ್ನಡ ಭಾಷೆಯತ್ತ ನಮ್ಮ ಕೇಂದ್ರ ಸರ್ಕಾರದ
ಧೋರಣೆಯನ್ನೇ ಒಮ್ಮೆ ಗಮನಿಸಿ. ಮಹಾನ್ ಭಾರತದ ನೂರಾರು ಸಾಂಸ್ಕೃತಿಕ ಶ್ರೀಮಂತ
ಭಾಷೆಗಳಲ್ಲಿ ಶಾಸ್ತ್ರೀಯ ಭಾಷೆ ಎಂದು ಕೇಂದ್ರ ಸರ್ಕಾರಕ್ಕೆ ಗೋಚರಿಸಿದ್ದು
ಸಂಸ್ಕೃತ ಮತ್ತು ತಮಿಳು ಮಾತ್ರ. ಭಾರತದ ಅಧಿಕೃತ ಭಾಷೆಗಳಲ್ಲಿ ಕನ್ನಡವೂ ಒಂದು
ಎಂಬ ಅಂಶ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಷ್ಟೇ ಭದ್ರವಾಗಿದೆ. ಕೇಂದ್ರಕ್ಕೆ
ಕನ್ನಡದಲ್ಲೊಮ್ಮೆ ಅಧಿಕೃತ ಪತ್ರ ಬರೆದು ನೋಡಿ, ಪ್ರತಿಯಾಗಿ
'ನಿಮ್ಮ ಭಾಷೆ
ನಮಗೆ ಅರ್ಥವಾಗದು'
ಎಂಬ ಹಿಂದಿ ಒಕ್ಕಣಿಕೆ ನಿಮ್ಮ ಕೈಸೇರುತ್ತದೆ. (ಕನ್ನಡ ರಾಷ್ಟ್ರೀಯ ನಾಟಕ
ಶಾಲೆ ಆರಂಭಕ್ಕೆ ಒತ್ತಾಯಿಸಿರುವ ರಂಗಕರ್ಮಿ ಪ್ರಸನ್ನ ಹೀಗೆ ಕನ್ನಡದಲ್ಲಿ
ಪತ್ರ ಬರೆದು ಕೈಸುಟ್ಟುಕೊಂಡಿದ್ದಾರೆ!).
ಇರಲಿ. ಒಂದು ಭಾಷೆಯನ್ನು ಶಾಸ್ತ್ರೀಯ ಎಂದು
ಪರಿಗಣಿಸಬೇಕಾದರೆ ಅದು ಕನಿಷ್ಠ ಸಾವಿರ ವರ್ಷ ಪ್ರಾಚೀನವಾಗಿರಬೇಕು; ಆ ಭಾಷೆಯ
ಜನರು ಮೌಲ್ಯಯುತ ಎಂದು ಪರಿಗಣಿಸಿದಂತಹ ಪ್ರಾಚೀನ ಸಾಹಿತ್ಯವನ್ನು ಹೊಂದಿರಬೇಕು;
ಆ ಭಾಷೆಯ ಸಾಹಿತ್ಯ ಸಂಪ್ರದಾಯ ಸ್ವಂತದ್ದಾಗಿರಬೇಕೇ ವಿನಾ ಇತರ ಭಾಷಾ
ಸಮುದಾಯದಿಂದ ಎರವಲು ಪಡೆದದ್ದಾಗಿರಬಾರದು; ಆ ಭಾಷೆಯ ಪ್ರಸಕ್ತ ಸಂವಹನ ಶೈಲಿ
ಹಳೆಯದಕ್ಕಿಂತ ಭಿನ್ನವಾಗಿರಬಹುದು ಅಥವಾ ಹಳೆಯದರ ಮುಂದುವರಿಕೆಯೇ ಆಗಿರಬಹುದು...
ಹೀಗೆ ಹಲವು ಮಾನದಂಡಗಳಿವೆ. ನಮ್ಮ ಕನ್ನಡ ಭಾಷೆಗೆ ಈ ಎಲ್ಲಾ ಅರ್ಹತೆಗಳೂ
ಇದೆಯಲ್ಲಾ ಎಂಬ ಪ್ರಶ್ನೆಗೆ ಮಾತ್ರ ಕೇಂದ್ರ ಸರ್ಕಾರ ಉತ್ತರ ನೀಡುವ ಗೋಜಿಗೇ
ಹೋಗುವುದಿಲ್ಲ. ಏಕೆಂದರೆ ತಮಿಳುನಾಡಿನ ಪಕ್ಷಗಳ ಹಾಗೆ ಇಲ್ಲಿನ ಯಾವುದೇ
ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿಲ್ಲ; ಕೇಂದ್ರ ಸರ್ಕಾರದಲ್ಲಿ ನಿರ್ಣಾಯಕ
ಪಾತ್ರ ವಹಿಸುವುದೂ ಇಲ್ಲ.
ನಮ್ಮ ಬಡ ಸಾಹಿತಿಗಳು, ಕನ್ನಡ ಪರ
ಹೋರಾಟಗಾರರೇನೋ ಕನ್ನಡವೇ ಕಾಣೆಯಾಗಿರುವ ಬೆಂಗಳೂರಿನಲ್ಲಿ ಪ್ರತಿಭಟನೆಗಳನ್ನು
ನಡೆಸಿ, ದೂರದ ನವದೆಹಲಿಗೂ ತೆರಳಿ ಮನವಿಪತ್ರಗಳನ್ನು ಸಲ್ಲಿಸಿ ಬರುತ್ತಾರೆ.
ಅದನ್ನು ಕೇಂದ್ರವೂ ನಗೆಮೊಗದಿಂದಲೇ ಸ್ವೀಕರಿಸಿ ಮೂಲೆಗೆ ತಳ್ಳಿ
ಸುಮ್ಮನಾಗುತ್ತದೆ. ಇಂಥ ಸಂದರ್ಭದಲ್ಲಿ ನೂತನ ಬಿಜೆಪಿ ಸರ್ಕಾರ ಶಾಸ್ತ್ರೀಯ
ಭಾಷಾ ಸ್ಥಾನಮಾನಕ್ಕೆ ಕನ್ನಡದ ಅರ್ಹತೆಯನ್ನು ಕೇಂದ್ರ ಒಪ್ಪಲೇಬೇಕೆಂಬಂತೆ
ಹೇಗೆ ಒತ್ತಾಯಿಸಲಿದೆ? ಸದ್ಯವೇ ನಡೆಯಲಿರುವ ಲೋಕಸಭಾ ಚುನಾವಣೆಯ ನಂತರ
ಕೇಂದ್ರದಲ್ಲಿ ಎನ್ಡಿಎ ಸರ್ಕಾರವೇನಾದರೂ ಬಂದಲ್ಲಿ ಕನ್ನಡಕ್ಕೆ ಶಾಸ್ತ್ರೀಯ
ಭಾಷಾ ಸ್ಥಾನಮಾನ ತಂದುಕೊಡಲು ಬಿಎಸ್ವೈ ಸರ್ಕಾರ ಕಟಿಬದ್ಧವಾಗುತ್ತದೆಯೇ?
ಶಾಸ್ತ್ರೀಯ ಭಾಷೆಯ ವಿಚಾರ ಅತ್ತ ಇರಲಿ.
ಕನ್ನಡಮ್ಮ ಕಾಲದ ಹೊಡೆತಕ್ಕೆ ಸಿಕ್ಕಿ ಹಿಂದೆ ಬೀಳದೆ ಮುನ್ನುಗ್ಗುವಂತೆ
ಮಾಡಲೇಬೇಕಾದ ಅತ್ಯಗತ್ಯ ಕೆಲಸಗಳೂ ಸರ್ಕಾರದ ಹೆಗಲ ಮೇಲಿದೆ. ಕಂಪ್ಯೂಟರ್,
ಅಂತರ್ಜಾಲದಲ್ಲಿ ಕನ್ನಡ ಬಳಕೆ ಹೆಚ್ಚಾಗುವಂತೆ ಒಂದು ಸರ್ವಮಾನ್ಯ ಕನ್ನಡ
ತಂತ್ರಾಂಶ ರೂಪಿಸುವಲ್ಲಿ ಸರ್ಕಾರ ಇಂದಿಗೂ ಸಫಲವಾಗಿಲ್ಲ; ಅತ್ತ ಬಯೋ
ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಕಾಮರ್ಸ್ ಮುಂತಾದ
ಕ್ಷೇತ್ರಗಳು ಯಾವ ಪರಿ ಮುನ್ನುಗ್ಗುತ್ತಿವೆ ಎಂದರೆ ಆ ಕ್ಷೇತ್ರಗಳ
ಪಾರಿಭಾಷಿಕ ಪದಗಳನ್ನು ಕನ್ನಡದಲ್ಲಿ ಹಿಡಿದಿಡಲು ಸಾಧ್ಯವೇ ಆಗುತ್ತಿಲ್ಲ.
ಅವುಗಳ ಕಲಿಕೆಗೆ ಇಂಗ್ಲೀಷೇ ಸೂಕ್ತ ಎನಿಸಿಬಿಟ್ಟಿದೆ. ಇನ್ನು ಕರ್ನಾಟಕದ ಯಾವ
ಮೂಲೆಗಾದರೂ ಹೋಗಿ, ಕನ್ನಡ ಬಾರದಿದ್ದರೂ ಪರವಾಗಿಲ್ಲ ಎಂಬ ವಾತಾವರಣವೇ ಇದೆ;
ಹೊರಗಿನಿಂದ ಬರುವ ಅಧಿಕಾರಿಗಳು ಕೂಡಾ ಕನ್ನಡ ಕಲಿಯದಿದ್ದರೂ ನಡೆಯುತ್ತದೆ
ಎಂಬ ಭಾವನೆಯನ್ನೇ ರೂಢಿಸಿಕೊಂಡಿದ್ದಾರೆ. ಇದಕ್ಕೆಲ್ಲಾ ಏನಾದರೂ ಮಾಡಬೇಕೆಂದು
ಚಿಂತಿಸುವಷ್ಟು ಔದಾರ್ಯವನ್ನು ಹೊಸ ಸರ್ಕಾರ ಪ್ರದರ್ಶಿಸಲಿದೆಯೇ? ವರ್ಷದ
ಎಲ್ಲಾ ದಿನಗಳು ಬೇಡ, ಕನಿಷ್ಠ ನವೆಂಬರ್ನಲ್ಲಾದರೂ! ಇದರ ಜೊತೆ-ಜೊತೆಯಲ್ಲಿಯೇ
ಅರ್ಹತೆಯನ್ನೇ ಆಧಾರ ಮಾಡಿಕೊಂಡರೂ, ಐಟಿ-ಬಿಟಿ ಹಾಗೂ ಇನ್ನಿತರ ಉದ್ಯಮಗಳಲ್ಲಿ
ಸ್ಥಳೀಯರಾದ ಕನ್ನಡಿಗರಿಗೆ ನಿರ್ದಿಷ್ಟ ಉದ್ಯೋಗಾವಕಾಶ ದೊರಕಿಸಿ ಕೊಡುವ
ನಿಟ್ಟಿನಲ್ಲಿ ಕೂಡ ಹೊಸ ಸರ್ಕಾರ ಯೋಚಿಸಬೇಕು. ಇಲ್ಲಿನ ನೆಲ-ಜಲ ಬೇಕು, ಜನ
ಬೇಡವೆಂದರೆ ಹೇಗೆ?
ಟಿಎಸ್ಐ
|