ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಪತ್ರ ಚರಿತ್ರೆ
ನೈಟಿಂಗೇಲ್‌ಗೆ ಹರ್ಬರ್ಟ್ ಪತ್ರ
 

ಕ್ರಿಮಿಯಾ ಯುದ್ಧ! ಒಂದು ಕಡೆ ರಷ್ಯಾ, ಮತ್ತೊಂದು ಕಡೆ ಅಟೋಮನ್ ಸಾಮ್ರಾಜ್ಯ, ಗ್ರೇಟ್ ಬ್ರಿಟನ್, ಫ್ರಾನ್ಸ್ ಮತ್ತು ಸರ್ದ್ ಪ್ರಾಂತ್ಯಗಳ ಒಕ್ಕೂಟ. ಈ ಯುದ್ಧದ ಪ್ರಮುಖ ಕಾರಣಗಳು ಪರಿಹಾರ ಕಾಣದ ಪೂರ್ವ ಪ್ರಾಂತ್ಯಗಳ ಮೇಲಿನ ಆಧಿಪತ್ಯದ ಪ್ರಶ್ನೆ ಮತ್ತು ಪವಿತ್ರ ಪ್ಯಾಲೆಸ್ತೀನ್ ಪ್ರಾಂತ್ಯದ ಮೇಲಿನ ಅಧಿಕಾರಕ್ಕಾಗಿ ರಷ್ಯಾ ಮತ್ತು ಫ್ರಾನ್ಸ್ ನಡುವಿನ ಪೈಪೋಟಿ. ಬ್ರಿಟನ್ ಪರ ಯುದ್ಧದ ನೇತೃತ್ವ ವಹಿಸಿದ್ದ ಮುತ್ಸದ್ದಿ ಸರ್ ಹರ್ಬಟ್ ಅವರು ಯುದ್ಧದ ಗಾಯಾಳುಗಳ ಚಿಕಿತ್ಸೆಗಾಗಿ ನುರಿತ ದಾದಿಯರನ್ನು ಕಳುಹಿಸುವಂತೆ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಕೋರಿ ಈ ಪತ್ರ ಬರೆದಿದ್ದಾರೆ. ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ನೈಟಿಂಗೇಲ್ ಅವರಿಗೆ ಯುದ್ಧ ಮುಗಿದ ನಂತರ 'ಪಂಜು ಹಿಡಿದ ಮಹಿಳೆ' ಎಂಬ ಬಿರುದು ನೀಡಲಾಗಿತ್ತು.

16 ಫೆಬ್ರವರಿ 1855 ಕ್ರಿಮಿಯಾ

ಪ್ರಿಯ ನೈಟಿಂಗೇಲ್,

ಪತ್ರಿಕೆಗಳಿಂದಾಗಿ ನಿಮಗೆ ಈಗಾಗಲೇ ವಿಷಯ ತಿಳಿದಿರಬಹುದು. ಸ್ಕುಟಾರಿ ಆಸ್ಪತ್ರೆಯಲ್ಲಿ ದಾದಿಯರ ಕೊರತೆ ಬಹಳ ಇದೆ. ಉಳಿದಂತೆ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಉಪಕರಣಗಳ ಕೊರತೆಯನ್ನೂ ಎದುರಿಸುತ್ತಿದ್ದೇವೆ ಎನ್ನುವುದು ನಿಜವಾಗಿದ್ದಲ್ಲಿ ನಾವು ಈ ಹೊತ್ತಿಗಾಗಲೇ ಆ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿರುತ್ತಿದ್ದೆವು. ನಮ್ಮ ಸೇನಾಪಡೆಯಲ್ಲಿ 95 ಸೈನಿಕರಿಗೆ ಒಬ್ಬ ವೈದ್ಯಕೀಯ ಅಧಿಕಾರಿ ಇದ್ದಾರೆ. ಮೂರು ವಾರಗಳ ಹಿಂದೆ ೩೦ ವೈದ್ಯರು ಕಾನ್‌ಸ್ಟ್ಯಾಂಟಿನೋಪಲ್‌ಗೆ ತೆರಳಿದ್ದಾರೆ. ಇಲ್ಲದೆ ಹೋದಲ್ಲಿ ಈ ಹಿಂದೆ ಇದ್ದುದಕ್ಕಿಂತ ದುಪ್ಪಟ್ಟು ವೈದ್ಯರು ನಮ್ಮಲ್ಲಿರುತ್ತಿದ್ದರು. ಗುರುವಾರ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿಕೊಳ್ಳಲು ತೀರ್ಮಾನಿಸಲಾಗಿದೆ ಮತ್ತು ಹೊಸ ತಂಡ ಮುಂದಿನ ವಾರ ಹೊರಟು ಬರಲಿದೆ.

ಔಷಧಿಗಳ ಸಂಗ್ರಹಕ್ಕೂ ಕೊರತೆ ಇಲ್ಲ. ಇತರ ವೈದ್ಯಕೀಯ ಉಪಕರಣಗಳನ್ನು ಹೇರಳವಾಗಿ ತರಿಸಿಕೊಂಡಿದ್ದೇವೆ. ಆದರೆ ಸದ್ಯ ಸ್ಕುಟಾರಿ ಆಸ್ಪತ್ರೆಯಲ್ಲಿ ಏನಾದರೂ ಕೊರತೆ ಇದ್ದಲ್ಲಿ ಅದಕ್ಕೆ ಕಾರಣ ಬಹುತೇಕ ಔಷಧಿಗಳು ವಾರ್ನಾದಲ್ಲಿರುವುದು. ಸೇನೆ ಕ್ರಿಮಿಯಾಗೆ ತೆರಳಿದ ಮೇಲೆ ಈ ಔಷಧಿಗಳನ್ನು ಅಲ್ಲಿಗೆ ವರ್ಗಾಯಿಸಲಾಗಿಲ್ಲ. ನಮ್ಮಲ್ಲಿ ದಾದಿಯರ ಕೊರತೆ ತುಂಬಾ ಇದೆ. ಸಾಮಾನ್ಯವಾಗಿ ಶುಶ್ರೂಷಕರನ್ನೇ ಹೆಚ್ಚಾಗಿ ನೇಮಿಸಿಕೊಳ್ಳುತ್ತಿದ್ದೇವೆ. ಸೇನೆ ಸಮರಾಂಗಣದಲ್ಲಿದ್ದಾಗ ದಾದಿಯರನ್ನು ಅಲ್ಲಿಗೆ ಕಳುಹಿಸುವುದು ಅಸಾಧ್ಯ. ಆದರೆ ಸ್ಕುಟಾರಿಯಲ್ಲಿ ಈಗ ಆಸ್ಪತ್ರೆ ಇರುವುದರಿಂದ ದಾದಿಯರ ನೇಮಕಾತಿಗೆ ಯಾವುದೇ ಸೇನಾ ನಿಯಮ ಅಡ್ಡಿ ಬರುವುದಿಲ್ಲ. ಈ ಸಂದರ್ಭದಲ್ಲಿ ತರಬೇತು ಪಡೆದ ದಾದಿಯರ ನಾಜೂಕು ಕೈಗಳು ಅನನುಭವಿ ಶುಶ್ರೂಷಕರ ಗಡುಸಾದ ಕೈಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರಬಹುದು. ಇಂತಹ ಒಂದು ಪ್ರಯತ್ನ ನಡೆದಲ್ಲಿ ನೀವು ಅದರ ಮೇಲ್ವಿಚಾರಣೆ ವಹಿಸಿಕೊಳ್ಳಬಹುದು ಎಂದು ನಾನು ನಂಬಿದ್ದೇನೆ.

ಆದರೆ ಇಲ್ಲಿ ಅತ್ಯುತ್ತಮ ಶ್ರೇಣಿಯ ದಾದಿಯರನ್ನು ಆರಿಸುವುದು ತುಂಬಾ ಪ್ರಯಾಸದ ಕೆಲಸ. ಈ ಕಾರ್ಯಕ್ಕೆ ನಿಮಗಿಂತ ಅನುಭವಿ ವ್ಯಕ್ತಿ ಮತ್ತೊಬ್ಬರಿಲ್ಲ. ತರಬೇತು ಪಡೆದ ಅತ್ಯುತ್ತಮ ಕೌಶಲ್ಯವಿರುವ, ಸಮರ್ಥ, ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಛಾತಿ ಇರುವ ಧೀರ ಮಹಿಳೆಯರನ್ನು ಈ ಕಾರ್ಯಕ್ಕೆ ನಿಯಮಿಸುವುದು ಕಷ್ಟ. ವೈದ್ಯಕೀಯ ಮತ್ತು ಸೇನಾಧಿಕಾರಿಗಳ ಜೊತೆಗೆ ವ್ಯವಹರಿಸಿ ಈ ಎಲ್ಲಾ ಕಾರ್ಯವನ್ನು ಅದ್ಭುತವಾಗಿ ನಿಭಾಯಿಸಬಲ್ಲ ಮತ್ತು ಅತ್ಯುತ್ತಮ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಬಲ್ಲವರ ಅಗತ್ಯ ನಮಗಿದೆ. ಆಡಳಿತ ಕೌಶಲ್ಯ ಮತ್ತು ಅನುಭವ ಎರಡೂ ಇರುವ ವ್ಯಕ್ತಿಯೊಬ್ಬರು ಈ ಪ್ರಯೋಗದ ನೇತೃತ್ವ ವಹಿಸುವ ಆವಶ್ಯಕತೆ ಇದೆ. ನೀವು ಈ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಲ್ಲಿ ನಾವು ನಿಮಗೆ ಬಹಳ ಆಭಾರಿಯಾಗಿರುತ್ತೇವೆ.

ನೀವು ಒಪ್ಪಿಕೊಳ್ಳುವಿರಿ ಎಂಬ ಆಶಾವಾದ ನನಗಿದೆ. ನಿಮ್ಮ ಉತ್ತರ 'ಹೌದು' ಎಂದಾದಲ್ಲಿ ಬ್ರಾಸ್‌ಬ್ರಿಡ್ಜ್ ಜನತೆ ನಿಮ್ಮ ಜೊತೆಗಿರುತ್ತದೆ. ನೀವು ಬುದ್ಧಿಮತ್ತೆಯ ನಿರ್ಧಾರ ಕೈಗೊಳ್ಳುವಿರಿ ಎಂದು ನನಗೆ ಗೊತ್ತು. ನನ್ನ ವಿಶ್ವಾಸದಂತೆ ಎಲ್ಲಾ ಕಾರ್ಯಗಳೂ ಸುಗಮವಾಗಿ ಸಾಗಲಿ ಎಂದು ದೇವರನ್ನು ಪ್ರಾರ್ಥಿಸುವೆ.

ತಮ್ಮ ವಿಶ್ವಾಸಿ,
ಎಂದೆಂದೂ ನಿಮ್ಮವನು ಸಿಡ್ನಿ ಹರ್ಬಟ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .