|
ಭಾರತದ ಅತ್ಯಂತ ಜನಪ್ರಿಯ ಕ್ರೀಡಾಪಟು
ಭಾರತದ ಅತ್ಯಂತ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿನ 30 ಸ್ಥಾನಗಳಲ್ಲಿ 7 ಮಂದಿ ಕ್ರಿಕೆಟ್ ಆಟಗಾರರಲ್ಲ! ಈ ವಿಷಯ ಕ್ರೀಡಾಭಿಮಾನಿಗಳಲ್ಲಿ ಸಂತಸದ ಅಲೆ ಎಬ್ಬಿಸಬಹುದಲ್ಲಾ! ಮೊದಲ ಐದು ಸ್ಥಾನ ಪಡೆದವರ ಪೈಕಿ ಸಾನಿಯ ಮಿರ್ಜಾ ಕೂಡ ಇದ್ದಾರೆ. ಈ ಪಟ್ಟಿಯಲ್ಲಿ ವಿಶ್ವನಾಥನ್ ಆನಂದ್ ಹತ್ತನೇ ಸ್ಥಾನ ಪಡೆದಿದ್ದಾರೆ. ನಿರೀಕ್ಷೆಯಂತೆಯೇ ಸಚಿನ್ ತೆಂಡೂಲ್ಕರ್ ಶೇಕಡಾ 30ರಷ್ಟು ಮತ ಪಡೆದು ಅಗ್ರಸ್ಥಾನ ಗಳಿಸಿದ್ದಾರೆ. ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮೆಟ್ರೋ ಹಾಗೂ ಸಣ್ಣ ನಗರಗಳ ನಡುವೆ ಅಪಾರ ವ್ಯತ್ಯಾಸ ವ್ಯಕ್ತವಾಗಿದೆ. ತೆಂಡೂಲ್ಕರ್, ಸೌರವ್, ಸಾನಿಯ, ಧೋನಿ ಮತ್ತು ದ್ರಾವಿಡ್ ಮೆಟ್ರೋ ಹೀರೋಗಳು. ತೆಂಡೂಲ್ಕರ್, ಧೋನಿ, ಯುವರಾಜ್, ದ್ರಾವಿಡ್ ಮತ್ತು ಸಾನಿಯ ಸಣ್ಣ ನಗರಗಳಲ್ಲಿ ಅಚ್ಚುಮೆಚ್ಚಿನ ಕ್ರೀಡಾಪಟುಗಳಾಗಿ ಹೊರಹೊಮ್ಮಿದ್ದಾರೆ.
ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ನಾಯಕ
ದ್ರಾವಿಡ್ ತವರು ನೆಲವಾದ ದಕ್ಷಿಣ ಭಾರತದಲ್ಲಿನ ಶೇಕಡಾ 45ರಷ್ಟು ಹದಿಹರೆಯದವರು 'ಗೋಡೆ'ಯೇ ಅತ್ಯಂತ ಸಮರ್ಥ ನಾಯಕ ಎಂಬ ತೀರ್ಪು ನೀಡಿದ್ದಾರೆ. ಇದು ನಿರೀಕ್ಷಿತ ಕೂಡ. ಅದೇ ಪೂರ್ವ ಭಾರತದ ಎಳೆಯ ಹೃದಯಗಳ ಪೈಕಿ ಶೇಕಡಾ 10ರಷ್ಟು ಮಂದಿ ಮಾತ್ರ ದ್ರಾವಿಡ್ ಬಗ್ಗೆ ಒಲವು ತೋರಿದ್ದಾರೆ. ಉಳಿದ ಶೇಕಡಾ 90 ಮಂದಿಯ ಪಾಲಿಗೆ 'ದಾದಾ' ದೇವರು. ಇನ್ನು ಈ ಆಯ್ಕೆಯ ನಿಟ್ಟಿನಲ್ಲಿ ಮೆಟ್ರೋವಾಸಿ ಮತ್ತು ಸಣ್ಣನಗರವಾಸಿ ಹದಿಹರೆಯದವರ ಭಾವನೆಗಳ ನಡುವೆ ಅಂತಹ ವ್ಯತ್ಯಾಸ ಒಡಮೂಡಿಲ್ಲ. ಯಾರಿಗೆ ಗೊತ್ತು? 2010ರ ಟಿಎಸ್ಐ 'ಹದಿಹರೆಯ ವಿಶೇಷ' ಸಂಚಿಕೆಯಲ್ಲಿ ಈ ಜಾಗವನ್ನು ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಆಕ್ರಮಿಸಿಕೊಳ್ಳಬಹುದು. ಧೋನಿ ಮತ್ತು ಯುವರಾಜ್ ನಡುವೆ ಅತ್ಯುತ್ತಮ ನಾಯಕನಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಕಠಿಣ ಸ್ಪರ್ಧೆ ಏರ್ಪಡಬಹುದು.
ಕ್ರಿಕೆಟ್ ಹೊರತು ಪಡಿಸಿ ನೀವು ಇಷ್ಟ ಪಡುವ ಬೇರೆ ಕ್ರೀಡೆ ಯಾವುದು?
ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾಗಿ ಉಳಿದಿಲ್ಲ ಎಂಬ ವಾಸ್ತವ ಇಷ್ಟರೊಳಗೆ ಎಲ್ಲರಿಗೂ ತಿಳಿದಿರಬೇಕು. ನಮ್ಮ ಸಮೀಕ್ಷೆಯ ಪ್ರಕಾರ ನಗರ ಪ್ರದೇಶಗಳಲ್ಲಿ ನೆಲೆ ನಿಂತಿರುವ ಹದಿಹರೆಯದವರ ಪೈಕಿ ಶೇಕಡಾ 33ರಷ್ಟು ಮಂದಿ ಫುಟ್ಬಾಲ್ ವೀಕ್ಷಿಸುತ್ತಾರೆ. ಅದೇ ಹಾಕಿ ಪ್ರಿಯರ ಸಂಖ್ಯೆ ಶೇಕಡಾ 11ರಷ್ಟು ಮಾತ್ರ. ಅದೂ ಟೆನಿಸ್ ಪ್ರಿಯರ ನಂತರದ ಸ್ಥಾನ. ಯುರೋಪಿಯನ್ ಹಾಗೂ ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಗಳ ನೇರ ಪ್ರಸಾರ ಭಾರತೀಯ ಹದಿಹರೆಯದವರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಅದರಿಂದಾಗಿಯೇ ಫುಟ್ಬಾಲ್ ಜನಪ್ರಿಯತೆ ಇಲ್ಲಿ ಹೆಚ್ಚುತ್ತಿದೆ. ಸಾನಿಯ ಮಿರ್ಜಾ ಅವರಿಂದಾಗಿ ಟೆನಿಸ್ ಭಾರತದಲ್ಲಿ ನೆಲೆ ಕಂಡುಕೊಳ್ಳುತ್ತಿದೆ ಎನ್ನಲ್ಲಡ್ಡಿಯಿಲ್ಲ.
ಕ್ರೀಡೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ಇರಾದೆ ಇದೆಯೇ?
ಕ್ರೀ ಡೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುವ ವಿಷಯ ಪ್ರಸ್ತಾಪಿಸಿದಾಗ ಮೆಟ್ರೋವಾಸಿ ಹಾಗೂ ಸಣ್ಣ ನಗರವಾಸಿ ಹದಿಹರೆಯದವರ ಮನೋಭಾವದಲ್ಲಿ ಅಪಾರ ವ್ಯತ್ಯಾಸವಿರುವ ಅಂಶ ಬೆಳಕಿಗೆ ಬಂದಿದೆ. ಉತ್ತರ ಮತ್ತು ದಕ್ಷಿಣ ಭಾರತದ ಶೇಕಡಾ 40ರಷ್ಟು ಹದಿಹರೆಯದವರು ಕ್ರೀಡೆಯನ್ನು ವೃತ್ತಿಯನ್ನಾಗಿ ಸ್ವೀಕರಿಸುವ ಬಯಕೆ ವ್ಯಕ್ತ ಪಡಿಸಿದ್ದಾರೆ. ಆದರೆ, ಪೂರ್ವ-ಪಶ್ಚಿಮದಲ್ಲಿ ಆ ಸಂಖ್ಯೆ ಶೇಕಡಾ 20ರಷ್ಟಕ್ಕೆ ಇಳಿದಿದೆ. ಮೆಟ್ರೋವಾಸಿಗಳ ಪೈಕಿ ಶೇಕಡಾ 72ರಷ್ಟು ಹದಿಹರೆಯದವರು ಕ್ರೀಡೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುತ್ತೇವೆ ಎಂದು ಧೈರ್ಯದಿಂದ ನುಡಿದಿದ್ದಾರೆ. ಅದೇ ಸಣ್ಣ ನಗರಗಳಲ್ಲಿ ಆ ಸಂಖ್ಯೆ ಶೇಕಡಾ 50ನ್ನು ಸಮೀಪಿಸಿದೆ. ಎಸ್.ಶ್ರೀಶಾಂತ್, ಆರ್.ಪಿ. ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮಹೇಂದ್ರ ಸಿಂಗ್ ಧೋನಿ ಯಶಸ್ಸಿನ ಹಿನ್ನಲೆ ಏನು ಎಂದು ಈಗ ಎಲ್ಲರಿಗೂ ಅರ್ಥವಾಗಿರಬೇಕು
ಟಿಎಸ್ಐ |