ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಚಿಲುಮೆ
ಚಿಲ್ಲರೆ ವ್ಯಾಪಾರ ಭವಿಷ್ಯ
 
ಶುಭ ಶಕುನ ಅಪಾಯದ ಕರೆಗಂಟೆಯಾಗುವ ಸಂಭವವೂ ಇದೆ!
Prasoon
ಪ್ರಸೂನ್ ಮಜುಂದಾರ್
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್

 

ಡೆಲೊಯಿಟ್ ಹಸ್ಕಿನ್ಸ್ ಮತ್ತು ಸೆಲ್ಸ್ ಕನ್‌ಸಲ್ಟಿಂಗ್ ಸಂಸ್ಥೆಗಳ ಇತ್ತೀಚೆಗಿನ ವರದಿಗಳ ಪ್ರಕಾರ ಭಾರತದಲ್ಲಿನ ಸಂಘಟಿತ ಚಿಲ್ಲರೆ ವ್ಯಾಪಾರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. 2011ನೇ ಇಸವಿಯಲ್ಲಿ ಒಟ್ಟು ಆದಾಯದ ಕಾಲು ಭಾಗ ಈ ಸಂಘಟಿತ ಚಿಲ್ಲರೆ ವ್ಯಾಪಾರದಿಂದಲೇ ಬರುತ್ತದೆ ಎಂದೂ ಆ ವರದಿ ಹೇಳಿತ್ತು. ಅಂದರೆ ಈಗಿನದ್ದಕ್ಕಿಂತ

ಶೇ. 8ರಷ್ಟು ಅಧಿಕ! ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಹೆಸರು ಗಳಿಸಬೇಕು ಎನ್ನುವವರಿಗೆ ಇದೊಂದು ಶುಭ ಸುದ್ದಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ನಿಜ ಹೇಳಬೇಕೆಂದರೆ ಮಾರುಕಟ್ಟೆ ದಾಪುಗಾಲಿಡುತ್ತಾ ಮುಂದೆ ಸಾಗುತ್ತಿದೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿರುವ ಜಾಹೀರಾತುಗಳ ಮಹಾಪೂರವೇ ಅದಕ್ಕೆ ಸಾಕ್ಷಿ. ಈ ಬೆಳವಣಿಗೆಗಳನ್ನು, ಜಾಹಿರಾತುಗಳ ಮೂಲಕ ಅಬ್ಬರದ ಪ್ರಚಾರಗಳನ್ನು ನಡೆಸುತ್ತಿರುವುದನ್ನೆಲ್ಲಾ ಕ್ಷಣ ಕಾಲ ಗಮನಿಸಿದರೂ ಚಿಲ್ಲರೆ ವ್ಯಾಪಾರ ಸಮರ ಎಂದರೆ, 'ಅಗ್ಗದ ಬೆಲೆ'ಯನ್ನು ಮುಂದಿಟ್ಟು ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುವ ಮಹಾ ಸಮರ ಎಂಬುದು ಸ್ಪಷ್ಟವಾಗುತ್ತದೆ. ಬೃಹತ್ ಕಂಪನಿಗಳು ಮೈಯೆಲ್ಲಾ ಕಿವಿಯಾಗಿಸಿ ಜಾಗೃತವಾಗಿರುವಾಗ ಈ ಚಿಲ್ಲರೆ ವ್ಯಾಪಾರ ಸಮರ ಭವಿಷ್ಯದಲ್ಲಿ ಬೃಹದಾಕಾರ ತಾಳಲಿದೆ ಎಂಬ ಗುಮಾನಿ ಮೂಡದೇ ಇರಲು ಸಾಧ್ಯವಿಲ್ಲ.

ಈ ಕಂಪನಿಗಳು ತಮಗಾಗಿ ಎಷ್ಟು ಆರ್ಥಿಕ ಲಾಭ ಗಿಟ್ಟಿಸಿಕೊಳ್ಳುತ್ತವೆ ಎಂಬ ವಿಷಯವನ್ನು ದೂರವಿಟ್ಟು, ಆ ಕ್ಷೇತ್ರದಿಂದ ರಾಷ್ಟ್ರಕ್ಕೆ ಹಾಗೂ ಆರ್ಥಿಕ ವ್ಯವಸ್ಥೆಗೆ ಎಷ್ಟರ ಮಟ್ಟಿಗಿನ ಆರ್ಥಿಕ ಲಾಭ ದೊರಕುತ್ತಿದೆ ಎಂಬುದರ ಕಡೆ ಜನರು ಗಮನ ಹರಿಸುವುದು ಸಾಮಾನ್ಯ. ಜಾಗತಿಕವಾಗಿ ಚಿಲ್ಲರೆ ವ್ಯಾಪಾರ ವಲಯವನ್ನು ಗಮನಿಸಿದರೆ ಅವು ಯಾವುವೂ ತಮ್ಮ ತಮ್ಮ ಸರ್ಕಾರಗಳಿಗೆ ಲಾಭ ತಂದುಕೊಡುವುದರಲ್ಲಿ ಯಶಸ್ವಿಯಾಗಿಲ್ಲ ಎಂಬುದು ಗಮನಾರ್ಹ. ಅದೇ ನೀತಿ ಭಾರತಕ್ಕೆ ಅನ್ವಯಿಸುತ್ತದೆ ಕೂಡ! ಯಶಸ್ವಿ ಚಿಲ್ಲರೆ ವ್ಯಾಪಾರದ ಏಕ ಮಾತ್ರ ಸೂತ್ರವೇ ಶಾಂತಿಯ ಶತ್ರು. ಅಗ್ಗದ ಬೆಲೆಯಿಂದ ಮಾರುಕಟ್ಟೆಯನ್ನು ಆಕರ್ಷಿಸುವ ಚಿಲ್ಲರೆ ವ್ಯಾಪಾರದ ಸೂತ್ರ ಶಾಂತಿಯನ್ನು ಕದಡಿ ಕೋಲಾಹಲದ ಅಲೆಯನ್ನೇ ಎಬ್ಬಿಸಿಬಿಡುತ್ತದೆ. ವ್ಯವಸ್ಥಿತ ಪೂರೈಕೆ ಹಾಗೂ ಸಮರ್ಥ ತಂತ್ರಜ್ಞಾನ ಬೆನ್ನಿಗಿದ್ದು ಅವು ಬೃಹತ್ ಚಿಲ್ಲರೆ ವ್ಯಾಪಾರ ಸಂಸ್ಥೆಗಳಿಗೆ ಲಾಭದ ಫಸಲನ್ನು ತಂದರೂ ಉದ್ಯಮ ಕ್ಷೇತ್ರದಲ್ಲಿ ಸ್ಥಿರ ನೆಲೆ ಕಂಡುಕೊಳ್ಳಲು ಹಾಗೂ ಯಶಸ್ವಿ ಸಂಸ್ಥೆಯಾಗಿ ಹೊರಹೊಮ್ಮಬೇಕೆಂದಾದಾಗ ಅವುಗಳಿಗೆ 'ಅಗ್ಗದ ಬೆಲೆ ಸಿಂಡ್ರೋಮ್' ಅಟಕಾಯಿಸಿಕೊಳ್ಳುತ್ತದೆ!

ಅದಕ್ಕೊಂದು ಉತ್ತಮ ಉದಾಹರಣೆಯೆಂದರೆ ವಾಲ್ ಮಾರ್ಟ್. 380 ಶತಕೋಟಿ ಡಾಲರ್‌ನಂಥ ಬೃಹತ್ ಮೊತ್ತದ ಲಾಭಗಳಿಸಿದರೂ, ಅಲ್ಲಿನ ಸಿಬ್ಬಂದಿ ವರ್ಗದ ತುಚ್ಛ ಸಂಪಾದನೆ ಎಲ್ಲರಿಗೂ ತಿಳಿದಿರುವ ವಿಷಯವೇ. ಕಾರಣ: ಅಗ್ಗದ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರುವ ಒಂದೇ ಒಂದು ಉದ್ದೇಶ! ಅಷ್ಟೇ ಅಲ್ಲ, ಚೀನಾ ಮುಂತಾದ ಅಗ್ಗದ ವೇತನ ತಾಣಗಳಿಗೆ ವಾಲ್ ಮಾರ್ಟ್ ತನ್ನ ಎಷ್ಟೋ ಲಕ್ಷ ಕೆಲಸಗಳನ್ನು ವರ್ಗಾಯಿಸಿದೆ. ಯಾವುದೇ ವಾಲ್ ಮಾರ್ಟ್ ಮಳಿಗೆ ಸಂದರ್ಶಿಸಿ, ಅಲ್ಲಿ ಒಂದೇ ಒಂದು ಅಮೆರಿಕನ್ ಉತ್ಪನ್ನವೂ ಕಣ್ಣಿಗೆ ಬೀಳದೇ ಇದ್ದಲ್ಲಿ ಆಶ್ಚರ್ಯವೇನಿಲ್ಲ ಬಿಡಿ.

ಕಡಿಮೆ ವೇತನ ನೀಡಿ, ಉತ್ಪಾದನಾ ಕೆಲಸಗಳನ್ನು ಚೀನಾದಂಥ ರಾಷ್ಟ್ರಗಳಿಗೆ ವಹಿಸಿ ವಾಲ್ ಮಾರ್ಟ್ ಅಗ್ಗದ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಗಳಲ್ಲಿ ಅದ್ವಿತೀಯವೆನಿಸಿಕೊಂಡಿರಬಹುದು ಅಥವಾ ಅತ್ಯದ್ಭುತ ನಿರ್ವಹಣೆಗೆ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿರಬಹುದು. ಆದರೆ ಅಮೆರಿಕ ಅಥವಾ ಅಮೆರಿಕನ್ನರಿಗೆ ವಾಲ್ ಮಾರ್ಟ್‌ನಿಂದ ನಯಾ ಪೈಸೆಯ ಪ್ರಯೋಜನವೂ ಆಗಿಲ್ಲ. ಜನರ ಕನಸು, ನಿರೀಕ್ಷೆಗಳನ್ನೂ ಸಾಕಾರಗೊಳಿಸಲು ವಾಲ್ ಮಾರ್ಟ್ ಕೊಡುಗೆ ಮಾತ್ರ ಕೇವಲ ಸೊನ್ನೆ! ಕಡಿಮೆ ವೇತನ ನೀಡಿ ಎರಡು ಬಗೆದ ಮಾತು ಒತ್ತಟ್ಟಿಗಿರಲಿ, ವಾಲ್ ಮಾರ್ಟ್ ಕೊಳ್ಳುಬಾಕ ಸಂಸ್ಕೃತಿಯ ಅಮೆರಿಕನ್ನರನ್ನು ದೋಚುವುದರಲ್ಲಿ ಹಿಂದೆ ಬಿದ್ದಿಲ್ಲ. ಉತ್ಪಾದನಾ ಕೆಲಸಗಳನ್ನೆಲ್ಲಾ ಚೀನಾಗೆ ವರ್ಗಾಯಿಸಿ ತನ್ನ ಜನತೆಯ ಕಣ್ಣಿಗೇ ಸುಣ್ಣ ಹಾಕಿಬಿಟ್ಟಿತು. ಒಟ್ಟಾರೆ ಅಮೆರಿಕದ ಅನ್ನ ಉಂಡು ಬೆಳೆದ ಸಂಸ್ಥೆ ಈಗ ಅದರ ಬುಡಕ್ಕೇ ಬೆಂಕಿ ಹಚ್ಚಿದೆ.

ಹಾಗೆ ಆ ಉದಾಹರಣೆಯನ್ನು ಭಾರತದೊಂದಿಗೆ ತಾಳೆ ಹಾಕಿದರೆ, ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ಏಕೆಂದರೆ ಅಲ್ಪ ಸ್ವಲ್ಪ ಖರೀದಿ ಶಕ್ತಿಯಿರುವ ಅಥವಾ ಕಿಂಚಿತ್ತೂ ಕೊಳ್ಳುವಿಕೆಯ ಸಾಮರ್ಥ್ಯವಿರದ ಎಷ್ಟೋ ಜನರು ನಮ್ಮಲ್ಲಿದ್ದಾರೆ. ಅಂಥ ಸಂದರ್ಭದಲ್ಲಿ ನಮ್ಮಲ್ಲೂ ಅಗ್ಗದ ಬೆಲೆಯಲ್ಲಿ ಮಾರಾಟ ಮಾಡುವ ಒಂದು 'ವಾಲ್ ಮಾರ್ಟ್' ಸಂಭವಿಸಿದರೆ ಡೆಲೊಯಿಟ್ ವರದಿಗಳು ಶುಭ ಶಕುನ ತೋರುವುದಕ್ಕಿಂತ ಕಾಣದ ಯಾವುದೋ ಅಪಾಯದ ಮುನ್ಸೂಚನೆಯಂತೆ ತೋರುತ್ತಿದೆ.

ಐಐಪಿಎಂ
'ಥಿಂಕ್ ಟ್ಯಾಂಕ್'

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .