ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಹೆಜ್ಜೆಗಳು
ಆ ಬಿಳಿ ಹುಲಿಯ ನೆನಪು
 
 
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

ಬಾಬಾ ಬಳಿ ಹಳೆಯ ನೆಗ್ಗು ಬಿದ್ದ ಒಂದು ಬ್ರೀಫ್ ಕೇಸ್ ಇತ್ತು. ಅಂಚಿಗೆ ಚರ್ಮದ ತೆಳು ಪಟ್ಟಿಯಿದ್ದ ಸಾಧಾರಣ ಬ್ರೀಫ್ ಕೇಸ್ ಅದು. ತುಂಬಾ ಹಳೆಯದು... ಅದರ ಅಂಚಿನ ಚರ್ಮದ ಪಟ್ಟಿ ಬಣ್ಣ ಮಾಸಿ ಅಲ್ಲಲ್ಲಿ ಪದರ ಬಿಟ್ಟಿತ್ತು. ಆದರೂ ನನ್ನ ಬಾಬಾಗೆ ಅದರ ಮೇಲೆ ತೀರದ ವ್ಯಾಮೋಹ.
ಆಗ ನನಗೆ ಹೆಚ್ಚೆಂದರೆ ಹತ್ತು ವರ್ಷ. ಚಳಿಗಾಲದ ಒಂದು ಮಧ್ಯಾಹ್ನ. ಬಾಬಾ ಹಜಾರದಲ್ಲಿ ಒಂದು ಭಾವಚಿತ್ರವನ್ನು ಬಿಡಿಸುತ್ತಿದ್ದರು. ಯಾರದ್ದೋ... ನನಗೆ ನೆನಪಿಲ್ಲ, ನನ್ನ ಗಮನವೆಲ್ಲವೂ ಆ ಕಪ್ಪು ಬ್ರೀಫ್ ಕೇಸ್‌ನ ಮೇಲೇಯೇ. ತಮ್ಮ ತೈಲ ಚಿತ್ರಗಳು, ಚಿತ್ರ ಕುಂಚ ಮುಂತಾದವುಗಳನ್ನು ಬಾಬಾ ಆ ಬ್ರೀಫ್ ಕೇಸ್‌ನಲ್ಲಿ ಇಡುತ್ತಿದ್ದರು. ನಾನು ಎದ್ದು ಬಾಬಾ ಪಕ್ಕ ಹೋಗಿ ಕುಳಿತೆ. ನಂತರ ಕುಂಚ ತೆಗೆದುಕೊಂಡು ಬಣ್ಣದಲ್ಲಿ ಅದ್ದಿ ಅಲ್ಲೇ ಬಿದ್ದಿದ್ದ ಕಾಗದದ ಮೇಲೆ ಚಿತ್ರ ಬಿಡಿಸುವುದರಲ್ಲಿ ತನ್ಮಯನಾದೆ. ಅಚಾನಕ್ಕಾಗಿ ಕಡುನೀಲಿ ಬಣ್ಣದ ದಪ್ಪನೆಯ ಹನಿಯೊಂದು ಅಲ್ಲೇ ಪಕ್ಕದಲ್ಲಿದ್ದ ಬ್ರೀಫ್ ಕೇಸ್ ಮೇಲೆ ಬಿತ್ತು. ಬಾಬಾಗೆ ಕೊಂಚ ಕಿರಿಕಿರಿ ಆದಂತೆ ಅನಿಸಿತು, ಒಂದು ಮಾತೂ ಆಡದೆ ಅದನ್ನು ಅವರು ತಮ್ಮ ಬಲಗಡೆ ಎತ್ತಿಟ್ಟರು. ಅದು ನನ್ನನ್ನು ಬಹಳ ಕಾಡಿತು. ಆ ಹಳೆ ಬ್ರೀಫ್ ಕೇಸನ್ನು ಬಾಬಾ ಏಕೆ ಅಷ್ಟೊಂದು ಕಾಳಜಿಯಿಂದ ಎಳೆದುಕೊಂಡರು? ಹಾಗೆ ಹೋಗಿ ಬಾಬಾನನ್ನೇ ಕೇಳಿದೆ. ಬಾಬಾ ಸಣ್ಣಗೆ ನಕ್ಕು ಆ ಬ್ರೀಫ್ ಕೇಸನ್ನು ಎಳೆದು ಅದರ ಅಡಿ ಭಾಗದಲ್ಲಿರುವ ಮೂರು ಸಮಾನಾಂತರ ಗೆರೆಗಳನ್ನು ತೋರಿಸಿದರು. ನೋಡು ಈ ಗೆರೆಗಳನ್ನು ಎಳೆದಿದ್ದು ಜ್ಯೋತಿ ಎಂದರು. ಕಣ್ಣಗಲಿಸಿ ಆ ಗೆರೆಗಳನ್ನು ನೋಡಿ ನಂತರ ಬಾಬಾ ಮುಖವನ್ನು ದಿಟ್ಟಿಸಿದೆ.
೬೦ರ ದಶಕದಲ್ಲಿ ದೆಹಲಿಯಲ್ಲಿ ಬಾಬಾ ಒಬ್ಬ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದ್ದ ಕಲಾವಿದ ಹಾಗೂ ಸಂಗೀತಗಾರ. ಸಂಗೀತ ಪಾಠ ಹೇಳಿಕೊಡುವುದು ಹಾಗೂ ಮೃಗಾಲಯಕ್ಕೆ ತೆರಳಿ ಪ್ರಾಣಿ ಪಕ್ಷಿಗಳ ಚಿತ್ರ ಬಿಡಿಸುವುದರಲ್ಲೇ ಬಾಬಾ ಕಾಲಕಳೆಯುತ್ತಿದ್ದರು. ಆದರೆ 'ಭಾರತೀಯ ಕಲಾ ಕೇಂದ್ರ'ದಲ್ಲಿ ಉದ್ಯೋಗ ದೊರೆತ ಬಳಿಕ ಮೃಗಾಲಯದ ಕಡೆ ಹೋಗುವುದು ಸಾಧ್ಯವಾಗಲಿಲ್ಲ. ಕೆಲವು ವರ್ಷಗಳ ಬಳಿಕ ಬಾಬಾ ಮತ್ತೆ ಅತ್ತ ಹೋದರು. ಈ ಬಾರಿ ಮಧ್ಯಪ್ರದೇಶದ ಸಂಸದರೊಬ್ಬರ ವಕೀಲರಾದ ನಿಯೋಗಿ, ಸೇಠ್ ಗೋಬಿಂದ್ ದಾಸ್, ಅವರ ಪತ್ನಿ, ಇವರೆಲ್ಲರಿಗೂ ಮನರಂಜನೆ ನೀಡುವುದು ಆ ಭೇಟಿಯ ಉದ್ದೇಶವಾಗಿತ್ತು. ಯಾವ ಹಳೆ ನೆನಪು ಕಾಡಿತೋ... ಬಾಬಾ ಅವರನ್ನೆಲ್ಲಾ ಕರೆದುಕೊಂಡು ಮೃಗಾಲಯದ ಕಡೆ ಹೊರಟೇಬಿಟ್ಟರು.
ನೀರು ಹಕ್ಕಿಗಳು, ಕಾಡುಕೋಣ, ಕೋತಿಗಳ ಗುಂಪು, ಕರಡಿಗಳನ್ನೆಲ್ಲಾ ನೋಡುವಷ್ಟರಲ್ಲೇ ಸೂರ್ಯ ನೆತ್ತಿಗೇರಿದ್ದ. ಇದು ಹುಲಿರಾಯನ ಊಟದ ಸಮಯ. ದೂರದಲೆಲ್ಲೋ ಘರ್ಜನೆಯ ದನಿ ಕೇಳಿ ಬರುತ್ತಿತ್ತು. ನಿಮಿಷ ನಿಮಿಷಕ್ಕೂ ಆ ದನಿಯ ತೀವ್ರತೆ ಹೆಚ್ಚಾಗುತ್ತಲೇ ಇತ್ತು. ಆ ದನಿ ಹತ್ತಿರ ಬಂದಂತೆ ಆ ದನಿ ಘರ್ಜನೆಯಾಗಿ ಅಲ್ಲಿನ ಸುತ್ತಮುತ್ತಲ್ಲೆಲ್ಲಾ ಅಪ್ಪಳಿಸಿ ಮಾರ್ದನಿಸಿತು. ಮರದ ಮೇಲೆ ಕುಳಿತಿದ್ದ ಕಾಗೆಗಳು ಹಾರಿ ಹೋದವು. ಜಿಂಕೆಗಳು ದಿಕ್ಕಾಪಾಲಾಗಿ ಓಡಿದವು. ಬಾಬಾ ಮತ್ತು ಅತಿಥಿಗಳು ತಲುಪುವುದರೊಳಗಾಗಿ ಅಲ್ಲಿ ಬಹಳಷ್ಟು ಜನ ಸೇರಿದ್ದರು. ಕಬ್ಬಿಣದ ಸರಳ ಹಿಂದೆ ಒಂದು ಬಿಳಿ ಹುಲಿ. ಆಹಾರ ನೀಡುವ ಸ್ಥಳದ ಕಡೆಗಿದ್ದ ಓಣಿಯ ಸರಳುಗಳನ್ನು ಅದು ತನ್ನ ಪಂಜಾಗಳಿಂದ ಹೊಡೆಯುತ್ತಿತ್ತು. ಕೆಲವು ಸಂದರ್ಶಕರು ಕಲ್ಲು ಕಡ್ಡಿಗಳನ್ನು ಎಸೆಯುತ್ತಾ ಹಸಿದ ಹುಲಿಯನ್ನು ರೊಚ್ಚಿಗೆಬ್ಬಿಸುತ್ತಿದ್ದರು. ಈ ಉಪಟಳ ಅಧಿಕವಾದಾಗ ಅಷ್ಟಗಲ ಬಾಯಿ ತೆರೆದು ತನ್ನ ಕೋರೆ ಹಲ್ಲುಗಳನ್ನು ತೋರಿಸುತ್ತಾ ಭಯಾನಕವಾಗಿ ಘರ್ಜಿಸಿತು ನಂತರ ಅಲ್ಲೇ ಇದ್ದ ನೀರಿನ ಪುಟ್ಟ ಕೊಳಕ್ಕೆ ಹಾರಿತು. ಸುಮಾರು 300ಕೆ.ಜಿ ತೂಕದ ಆ ಕಟ್ಟುಮಸ್ತಾದ ಜೀವ ನೀರಿನಿಂದ ಮೇಲಕ್ಕೆ ಏಳುತ್ತಿರುವಂತೆಯೇ ಬಾಬಾನ ಮನದೊಳಗೆ ನೆನಪಿನ ಅಲೆಯೆದ್ದಿತು. "ಜ್ಯೋತಿ... ಜ್ಯೋತಿ..." ಎಂದು ಜೋರಾಗಿ ಕರೆಯಲಾರಂಭಿಸಿದರು. ಅಲ್ಲಿದ್ದ ಜನರೆಲ್ಲಾ ಒಂದರೆಕ್ಷಣ ಸ್ತಬ್ಧರಾದರು, ಹುಲಿ ಪಂಜದಿಂದ ಹೊಡೆಯುತ್ತಲೇ ಇತ್ತು. ಬಾಬಾ ಮತ್ತೊಮ್ಮೆ ಕರೆದರು "ಜ್ಯೋತಿ...." ಒಂದು ಕ್ಷಣ ಹುಲಿಯೂ ಸ್ತಬ್ಧವಾಗಿ ನಿಂತಿತು. ಮರುಕ್ಷಣ ಇಳಿಜಾರಿನಿಂದ ಹಿಮ ಚೆಂಡೊಂದು ಉರುಳಿಬರುವಂತೆ ಆ ಹುಲಿ ಪಂಜರದ ಬಳಿ ಬಂದು ತನ್ನ ಹಿಂಗಾಲ ಮೇಲೆ ನಿಲ್ಲುತ್ತಾ ಮುಂಗೈಗಳನ್ನು ಹೊರಚಾಚಿ ಬಾಬಾನತ್ತ ಆತ್ಮೀಯ ನೋಟ ಬೀರಿತು, ತನ್ನ ತೋಳುಗಳನ್ನು ಚಾಚಿತ. ನಂತರ ತನ್ನ ಮೂಗನ್ನು ನವಿರಾಗಿ ಉಜ್ಜತೊಡಗಿತು. ಆಹಾರಕ್ಕಾಗಿ ಪಂಜರದ ಬಾಗಿಲು ತೆರೆದರೂ ಜ್ಯೋತಿ ಮಾತ್ರ ಬಾಬಾನನ್ನು ಬಿಟ್ಟು ಕದಲಲೇ ಇಲ್ಲ...!
ವರ್ಷಗಳ ಹಿಂದೆ ಬಾಬಾ ಚಿತ್ರ ಬಿಡಿಸುವುದಕ್ಕಾಗಿ ತಮ್ಮ ಮಾಮೂಲು ಬ್ರೀಫ್ ಕೇಸ್‌ನೊಂದಿಗೆ ಮೃಗಾಲಯಕ್ಕೆ ಹೋಗುತ್ತಿದ್ದರು. ಆಗಾಗ ಅಲ್ಲಿನ ಪರಿಚಾರಕರ, ಪಶುವೈದ್ಯರ ಭಾವಚಿತ್ರಗಳನ್ನು ಬಾಬಾ ಬಿಡಿಸುತ್ತಿದ್ದರು. ಆ ವೈದ್ಯ ಅಲ್ಲಿನ ಪ್ರಾಣಿಗಳ ಮರಿಗಳೊಂದಿಗೆ ಆಟವಾಡಲು ಬಾಬಾಗೆ ಅನುವು ಮಾಡಿಕೊಟ್ಟಿದ್ದರು. ಅವುಗಳಲ್ಲಿ ಒಂದು ಮರಿ ಮಾತ್ರ ಎಲ್ಲಕ್ಕಿಂಥ ವಿಶಿಷ್ಟ. ತಾಯಿ ಹುಲಿಯ ಪೋಷಣೆಯಿಂದ ವಂಚಿತವಾದ ಹುಲಿ ಮರಿಯೊಂದನ್ನು ಮೃಗಾಲಯಕ್ಕೆ ತಂದಾಗ ಬಾಬಾ ಅಲ್ಲೇ ಇದ್ದರು. ಅವರು ಆ ಮುದ್ದು ಮರಿಗೆ ಜ್ಯೋತಿ ಎಂದು ನಾಮಕರಣ ಮಾಡಿದರು. ಮರಿಯಾಗಿದ್ದಾಗ ಜ್ಯೋತಿ ಬಾಬಾ ತೋಳ್ತೆಕ್ಕೆಯಲ್ಲಿ ಆಡುತ್ತಿತ್ತು... ಚಿತ್ರ ಬಿಡಿಸುತ್ತಿದ್ದ ಕಾಗದಗಳನ್ನು ಎಗರಿಸಿ ಓಡುತ್ತಿತ್ತು... ಹಾಗೆ ಬ್ರೀಫ್ ಕೇಸ್‌ನ ಮೇಲೂ ಜ್ಯೋತಿ ತನ್ನ ಪ್ರಯೋಗ ನಡೆಸಿತ್ತು. ಇದು ಬಾಬಾ ಹೇಳಿದ ಅನುಬಂಧದ ಕಥೆ.
ನಂತರ ಕೆಲವು ದಿನಗಳ ಬಳಿಕ ಬಾಬಾ ಮತ್ತೊಮ್ಮೆ ಮೃಗಾಲಯಕ್ಕೆ ಹೋದರು. ಜ್ಯೋತಿ ಇದ್ದ ಜಾಗ ಖಾಲಿಯಾಗಿತ್ತು. 'ಆಕೆ ಗರ್ಭಿಣಿಯೇ...?' ಬಾಬಾ ಅರೆಕ್ಷಣ ಅಲ್ಲೇ ನಿಂತರು. ಬಾಬಾ ಮೃಗಾಲಯದ ಆಸ್ಪತ್ರೆಗೆ ತೆರಳಿ ಜ್ಯೋತಿಯ ಬಗ್ಗೆ ಕೇಳಿದರು. "ಜ್ಯೋತಿ ಈಗಷ್ಟೇ ತೀರಿಕೊಂಡಳು...!" "ಜ್ಯೋತಿ ಏಕೆ ಸತ್ತಳು...? ಎಂದು ಕೇಳಿದೆ. "ಆ ದಿನ ಆಕೆಯ ದೃಷ್ಟಿ ಕಾಣಲಾರದಷ್ಟು ದೂರಕ್ಕೆ ನೆಟ್ಟಿತ್ತು. ಈ ಬಂಧನ... ಈ ಮೃಗಾಲಯ ಇವೆಲ್ಲದರಿಂದ ಮುಕ್ತಿ ಮಾತ್ರ ಆ ಕಣ್ಣುಗಳಲ್ಲಿತ್ತು. ಆಕೆಯನ್ನು ನನ್ನ ಜೊತೆಯೇ ಮನೆಗೆ ತರಬೇಕಿತ್ತು..." ಬಾಬಾ ನೆನಪಿನ ಪಲಕುಗಳನ್ನು ಸರಿಸುತ್ತಾ ಹೇಳುತ್ತಿದ್ದರು. ನಾನು ಆಲ್ಬಂನ ಯುವ ಬಾಬಾ ಹಾಗೂ ಅವರ ತೋಳುಗಳ ಮೇಲೆ ಮುಂಗೈಗಳನ್ನಿಟ್ಟ ತುಂಟ ಕಣ್ಣುಗಳ ಜ್ಯೋತಿಯನ್ನು ದಿಟ್ಟಿಸುತ್ತಿದ್ದೆ... ಮೃಗಾಲಯದ ಕೆಟ್ಟ ನೀರವತೆ ಆ ಕಣ್ಣುಗಳಲ್ಲಿ ಇರಲೇ ಇಲ್ಲ.

ಕೆಂಪುದಾರುಣ ಸ್ಥಿತಿಗೆ ಕೊನೆ ಎಂದು?
ದೀಪದವಿಷವರ್ತುಲ

ಮಕ್ಕಳ ಮೆಚ್ಚಿನ ವಿಹಾರ ತಾಣ ಅಥವಾ ಹಲವು ವನ್ಯ ಜೀವಿಗಳನ್ನು ಒಂದೆಡೆ ನೊಡಬಹುದಾದ ವಿಶಿಷ್ಟ ಜಾಗ ಎಂಬುವುದಕ್ಕಿಂತ ಮೃಗಾಲಯಗಳಿಗೆ ಬೇರೆಯದೇ ರೀತಿಯ ವೈಶಿಷ್ಟ್ಯಗಳಿವೆ. ಮೃಗಾಲಯಗಳು ಮಾನವನ ವಿನಾಶಕಾರಿ ಚಟುವಟಿಕೆಗಳಿಂದ ವಿನಾಶದ ಅಂಚಿಗೆ ಸರಿದ ಪ್ರಾಣಿಗಳ ಅಭಯಸ್ಥಾನವೂ ಹೌದು. ಸಂತಾನಭಿವೃದ್ಧಿಗೆ, ಅಧ್ಯಯನಗಳಿಗೆ ಸಂಶೋಧನೆಗಳಿಗೂ ಮೃಗಾಲಯಗಳು ಸಹಕಾರಿ. ಮೃಗಾಲಯಗಳಿಲ್ಲದಿದ್ದರೆ ಜೀವಶಾಸ್ತ್ರಜ್ಞರು ತಮ್ಮ ಅಧ್ಯಯನಗಳಿಗೆ ಗೊಂಡಾರಣ್ಯಗಳಲ್ಲಿ ಅಲೆಯಬೇಕಾಗುತ್ತಿತ್ತು! ಆದರೆ ಭಾರತದ ಮೃಗಾಲಯಗಳು ಮಾತ್ರ ಶೋಚನೀಯ ಕಥೆ ಹೇಳುತ್ತವೆ. ದೇಶದಲ್ಲಿರುವ ಒಟ್ಟು 258 ಮೃಗಾಲಯಗಳಲ್ಲಿ ವರ್ಷವೊಂದಕ್ಕೆ ಶೇ. 10ರಿಂದ 15ರಷ್ಟು ಪ್ರಾಣಿಗಳು ಸಾಯುತ್ತಿವೆ. ತಿವಿತ, ಮರ್ದನಗಳಿಗೆ ಇಲ್ಲಿನ ಪ್ರಾಣಿಗಳು ಬಲಿಯಾಗುತ್ತಿವೆ. ಪೂರ್ಣಾವಧಿಯ ಸಿಬ್ಬಂದಿಗಳಿಲ್ಲದೆ, ಪಶುವೈದ್ಯರಿಲ್ಲದೆ ಮೃಗಾಲಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಇನ್ನು ಶುಚಿತ್ವ... ಅದೆಷ್ಟೋ ದೂರದ ಮಾತು. ಕೊಳೆತು ನಾರುವ ನಿಂತ ನೀರು, ಅದರ ಮೇಲೆ ತೇಲುವ ಪ್ಲಾಸ್ಟಿಕ್‌ಗಳು... ಅಲ್ಲಲ್ಲಿ ಬಿದ್ದಿರುವ ಆಹಾರದ ತುಣುಕುಗಳು ಪರಿಸ್ಥಿತಿಯನ್ನು ಮತ್ತಷ್ಟು ಹಾಳುಗೆಡವುತ್ತಿವೆ. ಈಗ 'ಕೇಂದ್ರೀಯ ಮೃಗಾಲಯ ಪ್ರಾಧಿಕಾರ' ಅಸ್ತಿತ್ವಕ್ಕೆ ಬಂದಿರುವುದರಿಂದ ಮೃಗಾಲಯಗಳ ಇಂತಹ ದಾರುಣ ಸ್ಥಿತಿಗೆ ಇತಿಶ್ರೀ ಹಾಡಬಹುದೇ?

ಐಐಪಿಎಂ
ಥಿಂಕ್ ಟ್ಯಾಂಕ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .