|
ನಿಜ ಹೇಳಬೇಕೆಂದರೆ, 'ಬಾರ್ಡರ್' ಅಥವಾ 'ಲಕ್ಷ್ಯಾ'ದಂತಹ ಚಿತ್ರಗಳನ್ನು ವೀಕ್ಷಿಸುವುದೇ ಒಂದು ರೋಮಾಂಚಕ ಅನುಭವ. ಲೆಫ್ಟ್- ರೈಟ್- ಲೆಫ್ಟ್ ಎಂಬ ಆಜ್ಞೆಗೆ ತಕ್ಕಂತೆ ಯೋಧರ ಬೂಟುಗಳಿಂದ ಹೊರಬರುವ ಶಬ್ದ, ಶತ್ರುಪಡೆಯೊಂದಿಗೆ ಯುದ್ಧಭೂಮಿಯಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರು... 'ಸೇನಾ ದಿನ'ವಾದ ಜನವರಿ 15ರಂದು 'ವೀರಾಧಿವೀರ' (ಬ್ರೇವೆಸ್ಟ್ ಆಫ್ ದ ಬ್ರೇವ್) ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಟಾಲಿಯನ್ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಆರ್.ಪಿ. ಸಿಂಗ್ ಅವರನ್ನು ನಾನು ಭೇಟಿಯಾದಾಗ ಈ ಎಲ್ಲಾ ದೃಶ್ಯಗಳು ವಾಸ್ತವದಲ್ಲಿ ನನ್ನ ಕಣ್ಣಮುಂದೆ ಬಂದಂತಾಯ್ತು.
ಆಕ್ರಮಣಕಾರಿ ಮನೋಭಾವ ಶಸಸ್ತ್ರ ಸೇನಾ ಪಡೆಯ ಹಿರಿಮೆ. ದೇಶಕ್ಕಾಗಿ ಬದುಕು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡು ಎನ್ನುವುದೇ ಇಲ್ಲಿನ ಪ್ರತಿಯೊಬ್ಬ ಸೇನಾನಿಯ ಮನದಲ್ಲಿರುವ ಧ್ಯೇಯ ವಾಕ್ಯ ಎನ್ನುತ್ತಾರೆ ಪ್ರಶಸ್ತಿ ಪುರಸ್ಕೃತ '8 ಜೆಎಕೆ ಎಲ್ಐ (ಸಿಯಾಚಿನ್) ಬೆಟಾಲಿಯನ್'ನ ಹೆಮ್ಮೆಯ ಕರ್ನಲ್ ಆರ್.ಪಿ. ಸಿಂಗ್.
1947ರಲ್ಲಿ ಸ್ಥಾಪಿಸಲಾದ '8 ಜೆಎಕೆ ಎಲ್ಐ ಬೆಟಾಲಿಯನ್' ಪಡೆ ಯುದ್ಧಗಳಲ್ಲಿ ಹಾಗೂ ಯುದ್ಧದಂತಹ ಸನ್ನಿವೇಶಗಳನ್ನು ಎದುರಿಸುವಲ್ಲಿ ಪ್ರದರ್ಶಿಸಿರುವ ಸ್ಥೈರ್ಯಕ್ಕೆ ಪ್ರಸಿದ್ಧಿ. ಸ್ವಾತಂತ್ರ್ಯಾ ನಂತರದ ಇತಿಹಾಸದಲ್ಲಿ ಅತೀ ಹೆಚ್ಚು ಅಂದರೆ 252 ವಿವಿಧ ಮಾದರಿಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಖ್ಯಾತಿ ಕೂಡ ಈ ಬೆಟಾಲಿಯನ್ಗಿದೆ.
ಯುದ್ಧದ ಬಗ್ಗೆ ನಿರ್ಮಿಸಲಾದ ಸಿನಿಮಾಗಳಲ್ಲಿ ಪ್ರದರ್ಶಿಸಲಾಗುವ ನಿರಂತರ ಬಾಂಬ್ ದಾಳಿಗಳು, ಆಪತ್ಕಾಲದಲ್ಲಿ ಸೇನಾವ್ಯೂಹ ರಚನೆ, ವೈರಿ ಪಡೆಯನ್ನು ಆಕ್ರಮಿಸುವ ಯೋಧರು... ಹೀಗೆ ಇವೆಲ್ಲವೂ ವಾಸ್ತವವೇ ಅಥವಾ ಸಿನಿಮಾಕ್ಕೆ ಮಾತ್ರ ಸೀಮಿತವೇ? ಎಂಬ ನನ್ನ ಪ್ರಶ್ನೆಗೆ ನಗುವಿನ ಹಾಗೂ ಅಷ್ಟೇ ಸ್ಪಷ್ಟ ಉತ್ತರ ಅವರಿಂದ ಬಂತು. ಯುದ್ಧ ಸಮಯದಲ್ಲಿ ತೋರಿಸಲಾಗುವ ದೇಶಭಕ್ತಿಯ ಸಂಭಾಷಣೆ ಹೊರತುಪಡಿಸಿದರೆ ಉಳಿದೆಲ್ಲವೂ ವಾಸ್ತವವೇ ಎಂದು ಉತ್ತರಿಸಿದರು.
ಯುದ್ಧ ಸಮಯದಲ್ಲಿನ ವೈಯಕ್ತಿಕ ಅನುಭವಗಳನ್ನು ಹೆಚ್ಚಾಗಿ ಹಂಚಿಕೊಳ್ಳದ ಸಿಂಗ್ ಅವರಿಂದ ಕೊನೆಗೂ ಅವರ ವೃತ್ತಿ ಜೀವನದಲ್ಲಾದ ಒಂದು ವಿಶಿಷ್ಟ ವೃತ್ತಾಂತದ ಬಗ್ಗೆ ತಿಳಿದುಕೊಳ್ಳುವಲ್ಲಿ ನಾನು ಯಶಸ್ವಿಯಾದೆ.
ಸಿಂಗ್ ಹಾಗೂ ಅವರ ಜೊತೆಗಿದ್ದ ಇತರ ಯೋಧರು ಉಗ್ರಗಾಮಿಯೊಬ್ಬನನ್ನು ಬೆನ್ನಟ್ಟಿ ಹೋಗುತ್ತಿದ್ದ ಸಂದರ್ಭವದು. ಉಗ್ರಗಾಮಿಯನ್ನು ಸೆರೆಹಿಡಿಯಲು ಓಡುತ್ತಿದ್ದಾಗ, ಆತುರದಲ್ಲಿ ಯುದ್ಧಕವಚ ಅವರ ದೇಹದಿಂದ ಬೇರ್ಪಟ್ಟಿತ್ತು. ಆದರೆ ಸಿಂಗ್ ಛಲ ಬಿಡದೆ ಉಗ್ರನನ್ನು ಅಟ್ಟಿಸಿಕೊಂಡು ಮುಂದೆ ಹೋದರು. ಹಿಂಬಾಲಿಸುತ್ತಿದ್ದ ಸಿಂಗ್ ಅವರ ಮೇಲೆ ಉಗ್ರರು ಪ್ರತಿದಾಳಿ ನಡೆಸಿದ್ದರು. ಎರಡೂ ಸಂದರ್ಭಗಳಲ್ಲೂ ನಾನು ತಲೆ ಬಗ್ಗಿಸಿ, ಕೂದಲೆಳೆಯಲ್ಲಿ ಗುಂಡೇಟಿನಿಂದ ತಪ್ಪಿಸಿಕೊಂಡೆ. ಪ್ರತಿದಾಳಿ ಮಾಡಲು ನನ್ನ ಬಳಿ ಮದ್ದುಗುಂಡುಗಳಿರಲಿಲ್ಲ. ನನ್ನನ್ನು ಹೇಗೋ ರಕ್ಷಿಸಿಕೊಂಡು, ಆತನನ್ನು ಬೆನ್ನಟ್ಟಿದೆ. ಕೊನೆಗೆ ಇತರ ಯೋಧರ ಸಹಾಯದಿಂದ ಉಗ್ರನನ್ನು ಹಿಡಿಯುವಲ್ಲಿ ಯಶಸ್ವಿಯಾದೆ. ನನ್ನ ಜೀವಕ್ಕೇ ಕಂಟಕವಾಗಿದ್ದ ಈ ಘಟನೆ ನಿಜವಾಗಿಯೂ ಭಯಾನಕ ಅನುಭವ ಎಂದು ವಿವರಿಸುತ್ತಾ ನಿಡಿದಾದ ಉಸಿರು ಬಿಟ್ಟರು. ಇಷ್ಟೇ ಅಲ್ಲ, ಬಹುತೇಕ ಯೋಧರು ಇದಕ್ಕಿಂತಲೂ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿದ್ದಾರೆ ಎನ್ನುತ್ತಾರೆ ಸಿಂಗ್.
ಕಾರ್ಗಿಲ್ ಯುದ್ಧದ ನಂತರ 8 ಜೆಎಕೆ ಐಎಲ್ ಬೆಟಾಲಿಯನ್ಗೆ 'ವೀರಾಧಿವೀರರ ಪಡೆ' (ಬ್ರೇವೆಸ್ಟ್ ಆಫ್ ಬ್ರೇವ್) ಪ್ರಶಸ್ತಿಯ ಗರಿ ಮೂಡಿತು. 1971ರ ಭಾರತ- ಪಾಕ್ ಯುದ್ಧದ ಸಂದರ್ಭದಲ್ಲಿ ತನ್ನ ರಕ್ಷಣಾ ವ್ಯವಸ್ಥೆಯನ್ನು ಕಾಯ್ದುಕೊಂಡ ಏಕೈಕ ಬೆಟಾಲಿಯನ್ ಹಾಗೂ ಜಗತ್ತಿನ ಅತಿ ದೊಡ್ಡ ಯುದ್ಧ ಭೂಮಿ ಎಂದು ಪ್ರಸಿದ್ಧಿಯಾದ ಪಾಕಿಸ್ತಾನದ ಖ್ವಾಯಿದ್ ನೆಲೆಯನ್ನು (8 ಜೆಎಕೆ ಐಎಲ್ನ ಸುಬೇದಾರ್ ಸಿಂಗ್ ಅವರ ವೀರೋಚಿತ ಹೋರಾಟದ ನಂತರ ಈಗ ಬಾನಾ ಟಾಪ್ ಎಂದು ಹೆಸರು ಪಡೆದಿದೆ) ವಶಪಡಿಸಿಕೊಳ್ಳುವಲ್ಲಿ ಕೂಡ ಈ ಬೆಟಾಲಿಯನ್ ಯಶಸ್ವಿಯಾಗಿದೆ. ಸೂಡಾನ್ನಲ್ಲಿ ಶಾಂತಿ ಪಡೆಯನ್ನು ನಿರ್ಮಿಸುವ ಧೈರ್ಯ ಪ್ರದರ್ಶಿಸಿ 'ಯುನೈಟೆಡ್ ನೇಷನ್ಸ್ ಯುನಿಟ್ ಸೈಟೇಷನ್' ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪರಮವೀರ ಚಕ್ರ ಪ್ರಶಸ್ತಿ ಗೆದ್ದ ಸುಬೇದಾರ್ ಬಾನಾ ಸಿಂಗ್, ಅಶೋಕ ಚಕ್ರ ಪ್ರಶಸ್ತಿಗೆ ಪಾತ್ರರಾದ ನಾಯಿಬ್ ಸುಬೇದಾರ್ ಚುನ್ನಿ ಲಾಲ್ ಮುಂತಾದ ಕೆಚ್ಚೆದೆಯ ಯೋಧರನ್ನು ನಾನು ಸದಾ ಗೌರವಿಸುತ್ತೇನೆ. ಚುನ್ನಿ ಲಾಲ್ ಅವರು ಕುಪ್ವಾರ ಪ್ರದೇಶದಲ್ಲಿ ದೇಶ ರಕ್ಷಣೆಗಾಗಿ ಉಗ್ರಗಾಮಿಗಳ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ್ದರು. ಇಂತಹ ಯೋಧರಿಂದಲೇ ನನ್ನ ಈ ಬೆಟಾಲಿಯನ್ ವೀರಾಧಿವೀರರ ಪಡೆಯೆಂದು ಖ್ಯಾತಿ ಪಡೆದಿದೆ ಎಂದು ಹೆಮ್ಮೆಯಿಂದ ಸಂತೋಷ ವ್ಯಕ್ತಪಡಿಸುತ್ತಾರೆ ಕರ್ನಲ್ ಆರ್.ಪಿ. ಸಿಂಗ್.
ಒಬ್ಬ ಸೇನಾನಿಯ ಹೃದಯ ಹೇಗಿರುತ್ತದೆ? ಖಂಡಿತಾ ನಿಸ್ವಾರ್ಥ, ದೇಶಕ್ಕಾಗಿ ಕ್ಷಣಕ್ಷಣವೂ ತುಡಿಯುವ ಹೃದಯ ಯೋಧರಿಗಿದೆ. ಎಲ್ಲಾ ಲೌಕಿಕ ಸುಖಗಳಿಂದ ದೂರವಿದ್ದು, ದೇಶ ಹಾಗೂ ದೇಶವಾಸಿಗಳ ಹಿತವನ್ನೇ ಬಯಸುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಯೋಧರ ಕುರಿತು ಟಿವಿ ಚಾನೆಲ್ ಅಥವಾ ಪತ್ರಿಕೆಗಳಲ್ಲಿ ಸಾಲು ಸುದ್ದಿ ನೀಡಿದರೆ ಪ್ರಯೋಜನವಿಲ್ಲ. ಅವರ ಸಾಧನೆ, ತ್ಯಾಗ ಎಂದೆಂದೂ ಅಮರವಾಗಿರಬೇಕೆಂದರೆ ಸಮಾಜದಲ್ಲಿ ಅವರನ್ನು ಪ್ರತಿಯೊಬ್ಬರು ಗುರುತಿಸುವಂತೆ ಮಾಡಬೇಕು. ಆಗ ಮಾತ್ರ ಈ ವೀರ ಯೋಧರ ಕನಸು ಮೊಳಕೆಯೊಡೆದು ಹೆಮ್ಮರವಾಗಲು ಸಾಧ್ಯ.
ಟಿಎಸ್ಐ
ಸ್ಪೃಹಾ ಶ್ರೀವಾಸ್ತವ |