ಚಂಡೀಗಢದ ಪಂಚಕುಲಾದಲ್ಲಿ ಐಸಿಎಲ್ ಟೂರ್ನಿ ಆರಂಭವಾಗಿರುವ ಕುರಿತು...?
ಚಂಡೀಗಢಕ್ಕೆ ಮತ್ತೆ ಮರಳುವ ಅವಕಾಶ ಸಿಕ್ಕಿತಲ್ಲಾ ಎಂದು ನನಗೆ ತುಂಬಾ ಸಂತೋಷವಾಗಿದೆ. ಇಂತಹ ಶ್ರೇಷ್ಠ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ನಾನೇ ಮುಂದಾಗಿ ನಿಂತು ನಡೆಸಿಕೊಡುತ್ತೇನೆ, ಅದೂ ಚಂಡೀಗಢದಲ್ಲಿ ಎಂದು ಕನಸಲ್ಲಿಯೂ ಎಣಿಸಿರಲಿಲ್ಲ.
ಐಸಿಎಲ್ನ ಯುವ ಆಟಗಾರರ ಮುಂದಿನ ಭವಿಷ್ಯ?
ನನ್ನೆಲ್ಲ ಪ್ರತಿಭೆಯನ್ನು ಅವರಿಗಾಗಿ ಧಾರೆಯೆರೆ ಯಲಿದ್ದೇನೆ. ಅವರು ಕ್ರಿಕೆಟ್ ಲೋಕದಲ್ಲಿ ಬೆಳೆದು ನಿಲ್ಲುವಂತೆ ಮಾಡುವುದು ನನ್ನ ಉದ್ದೇಶ.
ಐಸಿಎಲ್ ಅಧ್ಯಕ್ಷರಾಗಿ ನಿಮ್ಮ ಕರ್ತವ್ಯ ಏನು?
ಐಸಿಎಲ್ ಅಧ್ಯಕ್ಷನಾಗಿ ನಾನು ಟೂರ್ನಿಯನ್ನು ಅತ್ಯಂತ ವೃತ್ತಿಪರವಾಗಿ ನಡೆಸಿಕೊಂಡು ಹೋಗಬೇಕು. ಅದು ನನ್ನ ಮುಖ್ಯ ಜವಾಬ್ದಾರಿ. ಜೊತೆಗೆ ಆಟಗಾರರಿಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಸೃಷ್ಟಿ ಮಾಡಿಕೊಡಬೇಕು.
ಐಸಿಎಲ್ ಸೇರಲು ಬಿಸಿಸಿಐ ಅನುಮತಿ ಕೇಳಿದ್ದಿರಾ?
ಬಿಸಿಸಿಐ ನನಗೆ ಯಾವ ಹುದ್ದೆಯನ್ನೂ ನೀಡಿಲ್ಲ. ಆ ಹಿನ್ನೆಲೆಯಲ್ಲಿ ಅವರ ಅನುಮತಿ ಕೇಳುವ ಅಗತ್ಯವೂ ಇರಲಿಲ್ಲ.
ಬಿಸಿಸಿಐ ಮೇಲೆ ಐಸಿಎಲ್ ಯಾವ ರೀತಿಯ ಪ್ರಭಾವ ಬೀರಲಿದೆ?
ಕ್ರಿಕೆಟ್ನ ಅಭಿವೃದ್ಧಿಯ ನಿಟ್ಟಿನಲ್ಲಿ ಬಿಸಿಸಿಐ ಎಂದೂ ಬೇರು ಮಟ್ಟದಲ್ಲಿ ಕೆಲಸ ಮಾಡಿಲ್ಲ. ಈಗ ಐಸಿಎಲ್ ಅದರ ಕಣ್ಣು ತೆರೆಸಿದೆ. ನಾವು ಕ್ರಿಕೆಟ್ನ ಅಭಿವೃದ್ಧಿಯ ನಿಟ್ಟಿನಲ್ಲಿ ಬೇರು ಮಟ್ಟದಲ್ಲಿ ಪ್ರಾಮಾಣಿಕ ಕೆಲಸ ಆರಂಭಿಸಿದ್ದೇವೆ.
ಸಾರ್ವಜನಿಕರ ಮೇಲೆ ಐಸಿಎಲ್ ಯಾವ ಪರಿಣಾಮ ಬೀರಲಿದೆ?
ಮೊದಲು ಕ್ರಿಕೆಟ್ಗಾಗಿ ನಿಮ್ಮ ಸಮಯ ವ್ಯಯ ಮಾಡಬೇಡಿ ಎಂದು ಪೋಷಕರು ಮಕ್ಕಳಿಗೆ ಎಚ್ಚರಿಕೆ ನೀಡುತ್ತಿದ್ದರು. ಆದರೀಗ ನಾವು ಕ್ರಿಕೆಟ್ಗೆ ಒಂದು ವೃತ್ತಿಪರ ರೂಪ ನೀಡಿದ್ದೇವೆ.
ಒಬ್ಬ ಆಟಗಾರನಿಗೆ ನೀವು ನೀಡುವ ವಿಶೇಷ ಉಡುಗೊರೆ ಏನು?
ಕ್ರಿಕೆಟ್ ಆಟಗಾರನಾದ ಪ್ರತಿಯೊಬ್ಬನೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲು ಸಾಧ್ಯ ವಾಗುವುದಿಲ್ಲ. ಆದರೆ, ಆತ ಒಬ್ಬ ಉತ್ತಮ ಕ್ರಿಕೆಟಿಗನಾಗಲು ಸಾಧ್ಯ. ಅಂತಹ ಆಟಗಾರರಿಗೆ ನಾವು ಒಂದು ಉತ್ತಮ ಅವಕಾಶ ನೀಡುತ್ತಿದ್ದೇವೆ.
ಭಾರತದ ಹೆಸರಲ್ಲಿ ಒಂದು ದಿನ ಐಸಿಎಲ್ ತಂಡ ಆಡಲಿದೆ ಎಂಬ ನಂಬಿಕೆ ನಿಮಗಿದೆಯೇ?
ಖಂಡಿತ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಾವು ಒಂದು ದಿನ ದೇಶವನ್ನು ಪ್ರತಿನಿಧಿಸುವುದು ನೂರಕ್ಕೆ ನೂರು ಖಚಿತ.
|